ಸಿಎಂ ರಾಜಕೀಯ ಕಾರ್ಯದರ್ಶಿ ಜೀವರಾಜ್ ಆಮಿಷಕ್ಕೆ ಬಲಿಯಾಗಿ ಕಾಂಗ್ರೆಸ್ ಶಾಸಕರ ವಿರುದ್ಧ ದೂರು ನೀಡಿದ್ದೆ: ವಿಜಯಾನಂದ

ಅಫಿಡವಿಟ್ ಸಲ್ಲಿಸಿ ಶಾಸಕ ಟಿ.ಡಿ.ರಾಜೇಗೌಡ ವಿರುದ್ಧದ ದೂರು ಹಿಂಪಡೆದ ದೂರುದಾರ

Update: 2022-11-26 14:15 GMT

ಚಿಕ್ಕಮಗಳೂರು, ನ.26: ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡ ಅವರು ಅಕ್ರಮ ಆಸ್ತಿ ಖರೀದಿ ಮಾಡಿರುವುದಲ್ಲದೇ ಸರಕಾರಕ್ಕೆ ತೆರಿಗೆ ವಂಚನೆ ಮಾಡಿದ್ದಾರೆಂದು ಆರೋಪಿಸಿ ಲೋಕಾಯುಕ್ತ ಸಂಸ್ಥೆಗೆ ದೂರು ನೀಡಿದ್ದ ಕೊಪ್ಪ ತಾಲೂಕಿನ ನಿವಾಸಿ ವಿಜಯಾನಂದ ಅವರು 'ಈ ಪ್ರಕರಣ ಸಂಬಂಧ ಲೋಕಾಯುಕ್ತ ಸಂಸ್ಥೆಗೆ ಅಫಿಡವಿಟ್ ಸಲ್ಲಿಸಿದ್ದು, ಮಾಹಿತಿ ಕೊರತೆ ಹಾಗೂ ಮಾಜಿ ಶಾಸಕ ಜೀವರಾಜ್ ಅವರ ಆಮಿಷಕ್ಕೆ ಬಲಿಯಾಗಿ ಶಾಸಕ ರಾಜೇಗೌಡ ವಿರುದ್ಧ ದೂರು ನೀಡಿದ್ದೆ. ಈ ದೂರನ್ನು ಹಿಂದಕ್ಕೆ ಪಡೆಯುತ್ತಿದ್ದೇನೆ' ಎಂದು ಸ್ಪಷ್ಟಪಡಿಸಿದ್ದಾರೆ.

ಕಳೆದ ನ.17ರಂದು ಬೆಂಗಳೂರಿನ ಲೋಕಾಯುಕ್ತ ಕಚೇರಿಯಲ್ಲಿ ವಿಜಯಾನಂದ ಅವರು ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡ ಅವರು ಅಕ್ರಮವಾಗಿ ಜಮೀನು ಖರೀದಿ ಮಾಡಿದ್ದಲ್ಲದೇ ಸರಕಾರಕ್ಕೆ ತೆರಿಗೆ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ದೂರು ನೀಡಿ ತನಿಖೆಗೆ ಆಗ್ರಹಿಸಿದ್ದರು. ಈ ಪ್ರಕರಣ ಸಂಬಂಧ ನಗರದಲ್ಲಿ ಕಳೆದ ಗುರುವಾರ ಸುದ್ದಿಗೋಷ್ಠಿ ನಡೆಸಿದ ಸಿಎಂ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್, ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಶಾಸಕ ರಾಜೇಗೌಡ ವಿರುದ್ಧ ಎಫ್‍ಐಆರ್ ದಾಖಲಿಸಿ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದರು.

ಜೀವರಾಜ್ ಸುದ್ದಿಗೋಷ್ಠಿ ಬೆನ್ನಲ್ಲೇ ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಅವರ ವಿರುದ್ಧ ಲೋಕಾಯುಕ್ತರಿಗೆ ದೂರು ನೀಡಿದ್ದ ದೂರುದಾರ ವಿಜಯಾನಂದ ಲೋಕಾಯುಕ್ತ ಸಂಸ್ಥೆಗೆ ಅಫಿಡವಿಟ್ ಸಲ್ಲಿಸಿರುವುದಲ್ಲದೇ ಈ ದೂರನ್ನು ಸಿಎಂ ರಾಜಕೀಯ ಕಾರ್ಯದರ್ಶಿ ಜೀವರಾಜ್ ಅವರ ಆಮಿಷಕ್ಕೆ ಬಲಿಯಾಗಿ ತಪ್ಪು ಮಾಹಿತಿಯಿಂದ ದೂರು ನೀಡಿದ್ದು, ಈ ದೂರನ್ನು ಹಿಂಪಡೆಯುತ್ತಿದ್ದೇನೆಂದು ಲೋಕಾಯುಕ್ತ ಸಂಸ್ಥೆಗೆ ಸಲ್ಲಿಸಿರುವ ಅಫಿಡವಿಟ್‍ನಲ್ಲಿ ಹೇಳಿದ್ದಾರೆ.

[ಚಿತ್ರ-  ಡಿ.ಎನ್.ಜೀವರಾಜ್- ಸಿಎಂ ರಾಜಕೀಯ ಕಾರ್ಯದರ್ಶಿ]

''ತಾನು ಕೊಪ್ಪ ತಾಲೂಕಿನ ಹರಂದೂರು ಗ್ರಾಮದ ನಿವಾಸಿಯಾಗಿದ್ದು, ಪರಿಚಯಸ್ಥರಾಗಿದ್ದ ಸಿಎಂ ರಾಜಕೀಯ ಕಾರ್ಯದರ್ಶಿ ಜೀವರಾಜ್ ಅವರ ಕಚೇರಿಯ ಕಾರು ಚಾಲಕನಾಗಿದ್ದೆ. ಈ ವೇಳೆ ಜೀವರಾಜ್ ಅವರು ತನ್ನ ಕೆಲಸ ಖಾಯಂಗೊಳಿಸುವ ಭರವಸೆ ನೀಡಿದ್ದರು. ಅಲ್ಲದೇ ಕೆಲಸ ಖಾಯಂಗೊಳಿಸಲು ಮುಖ್ಯಮಂತ್ರಿಗೆ ಶಿಫಾರಸು ಮಾಡಿದ್ದರು. ಈ ವೇಳೆ ಜೀವರಾಜ್ ಅವರು ಶೃಂಗೇರಿ ಕ್ಷೇತ್ರದ ಶಾಸಕ ರಾಜೇಗೌಡ ಹಾಗೂ ಇತರ ಮುಖಂಡರ ವಿರುದ್ಧದ ರಾಜಕೀಯ ಪಿತೂರಿಗಳಿಗೆ ಬಳಸಿಕೊಳ್ಳಲು ಮುಂದಾಗಿದ್ದರು. ಇದಕ್ಕೆ ನಾನು ಸಹಕಾರ ನೀಡಲು ಹಿಂಜರಿದ ಕಾರಣಕ್ಕೆ ತನ್ನನ್ನು ಕೆಲಸದಿಂದ ವಜಾ ಮಾಡಿ ಬೇರೆಯವರಿಗೆ ಕೆಲಸ ನೀಡಿದ್ದರು. ಈ ವೇಳೆ ನಿರುದ್ಯೋಗಿಯಾದ ನಾನು ಮತ್ತೆ ಜೀವರಾಜ್ ಬಳಿ ಕೆಲಸ ಕೇಕೊಂಡು ಹೋಗಿದ್ದು, ಆಗ ಜೀವರಾಜ್ ಅವರು ತನಗೆ ಕೆಲಸ ನೀಡಲು ಆಮಿಷವೊಡ್ಡಿದ್ದರು. ಶೃಂಗೇರಿ ಶಾಸಕ ಜೀವರಾಜ್ ವಿರುದ್ಧ ಲೋಕಾಯುಕ್ತರಿಗೆ ದೂರು ನೀಡಲು ಒಪ್ಪಿದಲ್ಲಿ ಕೆಲಸ ನೀಡುವುದಾಗಿ ಹೇಳಿದ್ದು, ಕೆಲಸದ ಆವಶ್ಯಕತೆ ಇದ್ದ ಕಾರಣಕ್ಕೆ ದೂರು ನೀಡಲು ಒಪ್ಪಿದ್ದೆ. ಮಾಜಿ ಶಾಸಕ ಜೀವರಾಜ್ ಹೇಳಿದಂತೆ ಲೋಕಾಯುಕ್ತರಿಗೆ ದೂರು ನೀಡಿದ್ದೆ. ಲೋಕಾಯುಕ್ತರಿಗೆ ನೀಡಿದ ದೂರಿನ ಬಗ್ಗೆ ನನಗೆ ಮಾಹಿತಿ ಇಲ್ಲ,  ದೂರಿನ ಅರ್ಜಿಗೆ ಶಾಸಕ ಜೀವರಾಜ್ ಸಹಿ ಹಾಕಿಸಿಕೊಂಡಿದ್ದು, ದೂರಿನ ಪ್ರತಿಯನ್ನೂ ತನಗೆ ನೀಡಿಲ್ಲ. ರಾಜೇಗೌಡ ವಿರುದ್ಧ ಲೋಕಾಯುಕ್ತರಿಗೆ ನೀಡಿದ ದೂರರ್ಜಿಯ ಮಾಹಿತಿಗಳನ್ನು ಜೀವರಾಜ್ ಅವರು ಮಾಧ್ಯಮಗಳ ಮೂಲಕ ಹೇಳಿಕೆ ನೀಡಿದ ನಂತರವಷ್ಟೇ ಈ ಬಗ್ಗೆ ಮಾಹಿತಿ ತಿಳಿದು ಬಂತು'' ಎಂದು ವಿಜಯಾನಂದ ಅಫಿಡವಿಟ್‍ನಲ್ಲಿ ತಿಳಿಸಿದ್ದಾರೆ.

ಶಾಸಕ ರಾಜೇಗೌಡ ಹಾಗೂ ಕಾಫಿ ಉದ್ಯಮಿ ದಿವಂಗತ ಸಿದ್ದಾರ್ಥ ಅವರ ಕುಟುಂಬಗಳ ನಡುವೆ ಹಿಂದಿನಿಂದಲೂ ವ್ಯವಹಾರ ಇದ್ದು, ಇವರ ಕುಟುಂಬಗಳ ನಡುವೆ ನಡೆದಿರುವ ಜಮೀನು ಖರೀದಿ ಒಡಂಬಡಿಕೆ, ಕರಾರಿಗೂ ನನಗೆ ಯಾವುದೇ ಸಂಬಂಧವಿಲ್ಲ. ಈ ಘಟನೆಯಲ್ಲಿ ಸಿದ್ದಾರ್ಥ ಅವರ ಕುಟುಂಬದವರನ್ನು ಎಳೆದು ತಂದಿರುವುದು ನನಗೆ ನೋವು ತಂದಿದೆ. ಜೀವರಾಜ್ ಅವರ ಆಮಿಷಕ್ಕೆ ಬಲಿಯಾಗಿ ನಾನು ಈ ದೂರು ನೀಡಿದ್ದು, ಸತ್ಯ ಗೊತ್ತಾದ ಮೇಲೆ ದೂರನ್ನು ಹಿಂಪಡೆಯುತ್ತಿದ್ದೇನೆ ಎಂದು ವಿಜಯಾನಂದ ಅಫಿಟವಿಟ್‍ನಲ್ಲಿ ತಿಳಿಸಿದ್ದು, ಲೋಕಾಯುಕ್ತರಿಗೆ ಸಲ್ಲಿಸಿರುವ ಅಫಿಡವಿಟ್‍ನ ಪ್ರತಿಗಳನ್ನು ವಿಜಯಾನಂದ ಅವರು ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಪ್ರಕಟಿಸಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಇದನ್ನೂ ಓದಿ: ಶಾಸಕ ಟಿ.ಡಿ.ರಾಜೇಗೌಡ ವಿರುದ್ದ ಅಕ್ರಮ ಆಸ್ತಿ ಖರೀದಿ ಆರೋಪ: 'ಕೆಫೆ ಕಾಫಿ ಡೇ' ಮಾಳವಿಕಾ ಹೆಗ್ಡೆ ಸ್ಪಷ್ಟನೆ ಏನು?


[ದೂರುದಾರ ವಿಜಯಾನಂದ ಅವರ ಫೇಸ್ ಬುಕ್ ಪೋಸ್ಟ್]

Similar News