ಮೋದಿ ಅಧಿಕಾರಕ್ಕೆ ಬಂದ ಮೇಲೆ ಕೋಮು ಗಲಭೆ ನಿಂತಿದೆ: ಜಗದೀಶ್ ಶೆಟ್ಟರ್

Update: 2022-11-28 11:57 GMT

ಹುಬ್ಬಳ್ಳಿ: ''ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇದ್ದಾಗೆಲ್ಲಾ ಹಿಂದೂ ಮುಸ್ಲಿಮ್ ಗಲಭೆಯಾಗುತ್ತದೆ'' ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಹಿಂದೂಗಳ ಹತ್ಯೆಯಾಗಿದೆ. ಮೋದಿ ಅಧಿಕಾರಕ್ಕೆ ಬಂದ ಮೇಲೆ ಹಿಂದೂ- ಮುಸ್ಲಿಮ್ ಗಲಭೆ ನಿಂತಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಹಿಂದೂ ಮುಸ್ಲಿಂ ಗಲಭೆಯಾಗುತ್ತದೆ, ಹಾಗಾಗಿ ಸಿಟಿ ರವಿ ಆ ರೀತಿ ಹೇಳಿದ್ದಾರೆ'' ಎಂದು ಸಮರ್ಥಿಸಿದರು. 

''ಸಿ ಟಿ ರವಿ ಹೇಳಿಕೆಯಲ್ಲಿ ತಪ್ಪೇನಿದೆ?, ಸಿದ್ದರಾಮಯ್ಯ ಬೆಳಗ್ಗೆಯಿಂದ ಸಂಜೆಯವರೆಗೆ ಟಿಪ್ಪು ಸುಲ್ತಾನ್ ಪೂಜೆ ಮಾಡ್ತಾ ಇರ್ತಾರೆ. ಟಿಪ್ಪು ಸುಲ್ತಾನ್‌ಗೆ ಬೆಂಬಲ ನೀಡೋದು, ಆರೆಸ್ಸೆಸ್ ಗೆ ಬೈಯೋದು ಅವರ ನಡವಳಿಕೆ'' ಎಂದು ಆಕ್ರೋಶ ವ್ಯಕ್ತಪಡಿಸಿದರು.

ಒಕ್ಕಲಿಗರ ವೇದಿಕೆಯಲ್ಲಿ ಡಿ ಕೆ ಶಿವಕುಮಾರ್ ಮುಖ್ಯಮಂತ್ರಿ ವಿಚಾರದ ಬಗ್ಗೆ ಮಾತನಾಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ''ಅಧಿಕಾರದ ಆಸೆಗೆ ಡಿ ಕೆ ಶಿವಕುಮಾರ್ ವೇದಿಕೆ ದುರುಪಯೋಗ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಯಾವುದೇ ವೇದಿಕೆಯನ್ನಾದ್ರೂ ದುರುಪಯೋಗ ಮಾಡಿಕೊಳ್ತಾರೆ. ಪಂಜಾಬ್​ನಲ್ಲಿ ಸಿದ್ದು ಗಲಾಟೆಯಿಂದ ಕಾಂಗ್ರೆಸ್ ನಿರ್ನಾಮ ಆಯ್ತು. ಹಾಗೇಯೆ ಕರ್ನಾಟಕದಲ್ಲಿ ಸಿದ್ದರಾಮಯ್ಯರಿಂದ ಕಾಂಗ್ರೆಸ್ ನಿರ್ನಾಮ. ಡಿ ಕೆ ಶಿವಕುಮಾರ್ ಸಿದ್ದರಾಮಯ್ಯ ಜಗಳದಿಂದ ಕಾಂಗ್ರೆಸ್​​ ಅಸ್ತಿತ್ವ ಕಳೆದುಕೊಳ್ಳಲಿದೆ'' ಎಂದು ಜಗದೀಶ್ ಶೆಟ್ಟರ್ ಹೇಳಿದರು.

Similar News