ಯೋಜನಾ ಪ್ರದೇಶ ವ್ಯಾಪ್ತಿಯ ಕೃಷಿ ಭೂಮಿ ವಸತಿ ಉದ್ದೇಶಕ್ಕೆ ನೀಡಬಹುದು: ಹೈಕೋರ್ಟ್

Update: 2022-11-29 17:13 GMT

ಬೆಂಗಳೂರು, ನ.29: ಕೃಷಿ ಭೂಮಿ ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಯಲ್ಲಿ ಇದ್ದಲ್ಲಿ ನಿಗದಿತ ಶುಲ್ಕವನ್ನು ಪಡೆದು ವಸತಿ ಉದ್ದೇಶಕ್ಕೆ ಬಳಸುವುದಕ್ಕಾಗಿ ಭೂ ಪರಿವರ್ತನೆಗೆ ಅನುಮತಿ ನೀಡಬೇಕಾಗುತ್ತದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಧಾರವಾಡ ಜಿಲ್ಲೆಯ ಜುನೈದ್ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ ಅರ್ಜಿ ಮಾನ್ಯ ಮಾಡಿದೆ. 
ಕರ್ನಾಟಕ ಭೂ ಕಂದಾಯ ಕಾಯ್ದೆಯ ಸೆಕ್ಷನ್ 95ರ ಪ್ರಕಾರ ಕೃಷಿ ಜಮೀನು ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಯಲ್ಲಿದ್ದರೆ, ಅಂಥ ಜಮೀನನ್ನು ಯಾವ ಉದ್ದೇಶಕ್ಕೆ ಗೊತ್ತುಪಡಿಸಲಾಗಿದೆಯೋ, ಅದಕ್ಕಾಗಿ ಪರಿವರ್ತಿಸಲು ಕೋರಿದರೆ ದಂಡ ಪಾವತಿಯ ಷರತ್ತಿಗೆ ಒಳಪಟ್ಟು ಅನುಮತಿ ನೀಡಬೇಕಾಗುತ್ತದೆ.

ಹೀಗಾಗಿ, ಕೇಸ್‍ನಲ್ಲಿ ನಿಗದಿತ ಭೂ ಪರಿವರ್ತನೆ ಶುಲ್ಕ ಪಾವತಿಯ ಷರತ್ತಿಗೆ ಒಳಪಟ್ಟಂತೆ ಅರ್ಜಿದಾರ ಈ ಜಮೀನನ್ನು ವಸತಿ ಉದ್ದೇಶಕ್ಕೆ ಬಳಕೆ ಮಾಡಲು ಅರ್ಹನಾಗಿದ್ದೇನೆ ಎಂದು ಪೀಠ ತಿಳಿಸಿದೆ. 

ಪ್ರಕರಣವೇನು?: ಧಾರವಾಡ ಜಿಲ್ಲೆಯ ಛಬ್ಬಿ ಹೋಬಳಿಯ ರಾಯನಾಳ ಗ್ರಾಮದ ಸರ್ವೇ ನಂ.82/18ರಲ್ಲಿನ ಸುಮಾರು ಎರಡೂವರೆ ಗುಂಟೆ ಜಾಗ ಜುನೈದ್ ಎಂಬುವವರಿಗೆ ಸೇರಿತ್ತು. ಅದು ಹುಬ್ಬಳಿ ನಗರ ಅಭಿವೃದ್ಧಿ ಪ್ರಾಧಿಕಾರ ಪ್ರಕಟಿಸಿದ ಮಾಸ್ಟರ್ ಪ್ಲಾನ್‍ನಲ್ಲಿ ವಸತಿ ಉದ್ದೇಶ ಬಳಕೆಗೆ ಗೊತ್ತುಪಡಿಸಲಾಗಿದೆ. ಆ ಎರಡೂವರೆ ಗುಂಟೆ ಜಾಗವನ್ನು ಭೂ ಪರಿವರ್ತನೆ ಮಾಡಲು ಅನುಮತಿ ನೀಡುವಂತೆ ಕೋರಿ ಅರ್ಜಿದಾರ ಜುನೈದ್, ಕರ್ನಾಟಕ ಭೂ ಕಂದಾಯ ಕಾಯ್ದೆಯ ಸೆಕ್ಷನ್ 95ರಡಿ ಧಾರವಾಡ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿದ್ದರು.

ಆ ಮನವಿಯನ್ನು ತಿರಸ್ಕರಿಸಿದ್ದ ಜಿಲ್ಲಾಧಿಕಾರಿ, ಈ ಜಾಗದ ಪಕ್ಕದ ಭೂಮಿಯು ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆಯ ವಿಸ್ತರಣೆಗೆ ಅಧಿಸೂಚಿತವಾಗಿದೆ ಎಂದು ಹಿಂಬರಹ ನೀಡಿದ್ದರು. ಅದನ್ನು ಜುನೈದ್ ಹೈಕೋರ್ಟ್‍ನಲ್ಲಿ ಪ್ರಶ್ನಿಸಿದ್ದರು. 

Similar News