ರಸ್ತೆಯಲ್ಲಿ ಹೋಗೋ ನಾಯಿ ಕೂಡ ಜೆಡಿಎಸ್ ಗೆ ಹೋಗಲ್ಲ: ಕೆ.ಎಸ್. ಈಶ್ವರಪ್ಪ

''ಯಾವ ನಿಮಿಷಕ್ಕೆ ಡಿಕೆಶಿ ಮತ್ತೆ ಜೈಲಿಗೆ ಹೋಗುತ್ತಾರೋ ಗೊತ್ತಿಲ್ಲ...''

Update: 2022-11-30 08:24 GMT

ಶಿವಮೊಗ್ಗ, ನ.30: 'ರಸ್ತೆಯಲ್ಲಿ ಹೋಗೋ ನಾಯಿ ಕೂಡ ಜೆಡಿಎಸ್ ಗೆ ಹೋಗಲ್ಲ' ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಜೆಡಿಎಸ್ ಸೇರುತ್ತಾರೆಂಬ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಅವರ ಹೇಳಿಕೆಗೆ ಶಾಸಕ ಕೆ.ಎಸ್ ಈಶ್ವರಪ್ಪ ತಿರುಗೇಟು ನೀಡಿದ್ದಾರೆ. 

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ''ರಮೇಶ್ ಜಾರಕಿಹೊಳಿಯವರು ಈ ಸರ್ಕಾರ ತಂದವರು. ಅವರು ಯಾಕೆ ಬಿಜೆಪಿ ಬಿಟ್ಟು ಹೋಗ್ತಾರೆ? ಬಿಜೆಪಿ ಬಿಟ್ಟು ಏನು ಇಲ್ಲದಿರುವ ಜೆಡಿಎಸ್ ಗೆ ಯಾಕೆ ಹೋಗುತ್ತಾರೆ? ಇಬ್ರಾಹಿಂಗೆ ಬೇರೆ ಉದ್ಯೋಗವಿಲ್ಲ, ರಸ್ತೆಯಲ್ಲಿ ಹೋಗೋ ನಾಯಿ ಕೂಡ ಹೋಗಲ್ಲ'' ಎಂದು  ಹೇಳಿದರು.

''ಯಾವ ಕಾರಣಕ್ಕೂ ರಮೇಶ್ ಜಾರಕಿಹೊಳಿ ಬಿಜೆಪಿ ಬಿಟ್ಟು ಹೋಗುವ ಪ್ರಶ್ನೆ ಉದ್ಭವವಾಗಲ್ಲ. ಇಬ್ರಾಹಿಂ ಅವರಿಗೆ ತಾನಂತೂ ಹೋಗಾಗಿದೆ ಹೀಗಾಗಿ ಏನಾರು ಮಾಡಬೇಕೆಂಬ ಕಾರಣಕ್ಕೆ ಹೇಳಿಕೆ ಕೊಡುತ್ತಾರೆ. ಇದಕ್ಕಾಗಿ ಅವರು ಬರುತ್ತಾರೆ, ಇವರು ಬರುತ್ತಾರೆ ಎನ್ನುತ್ತಿದ್ದಾರೆ. ಎಚ್.ಡಿ. ದೇವೆಗೌಡರು, ಶಿವಕುಮಾರ್ ಯಾರೋ ಹೇಳಿದ್ದರೆ ನಾನು ಏನೂ ಹೇಳುತ್ತಿರಲಿಲ್ಲ. ಇಬ್ರಾಹಿಂ ಅರ್ಥವಿಲ್ಲದ ಮಾತನಾಡ್ತಿದ್ದಾರೆ'' ಎಂದು ಹೇಳಿದರು. 

''ಯಾವ ನಿಮಿಷಕ್ಕೆ ಡಿಕೆಶಿ ಮತ್ತೆ ಜೈಲಿಗೆ ಹೋಗುತ್ತಾರೋ ಗೊತ್ತಿಲ್ಲ''

ರೌಡಿ ರಾಜಕೀಯ ವಿಚಾರವಾಗಿ ಕಾಂಗ್ರೆಸ್ ಟೀಕೆಗೆ ಶಿವಮೊಗ್ಗದಲ್ಲಿ ಪ್ರತಿಕ್ರಿಯೆ ನೀಡಿದ ಕೆ. ಎಸ್ ಈಶ್ವರಪ್ಪ, ''ಬಿಜೆಪಿ ಸುಸಂಸ್ಕೃತ ಪಕ್ಷವೋ, ರೌಡಿಗಳ ಪಕ್ಷವೋ ಎನ್ನುವ ಬಗ್ಗೆ ರಾಜ್ಯ ಹಾಗೂ ದೇಶದ ಜನರು ತೀರ್ಮಾನ ಮಾಡಿದ್ದಾರೆ. ಬಿಜೆಪಿ ಸುಸಂಸ್ಕೃತ ಪಕ್ಷ ಎಂದು ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರ ಕೊಟ್ಟಿದ್ದಾರೆ. ಜೊತೆಗೆ ಅನೇಕ ರಾಜ್ಯಗಳಲ್ಲೂ ಕೂಡ ಅಧಿಕಾರವನ್ನು ನೀಡಿದ್ದಾರೆ. ರೌಡಿಗಳ ಪಕ್ಷ ಎಂದು ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿದ್ದಾರೆ. ಉದಾಹರಣೆಗೆ ರಾಜ್ಯದ ಕೆಪಿಸಿಸಿ ಅಧ್ಯಕ್ಷ ಯಾರು? ಮೊನ್ನೆ ತನಕ ತಿಹಾರ್ ಜೈಲಿನಲ್ಲಿದ್ದು ಜಾಮೀನಿನ ಮೇಲೆ ಹೊರಗೆ ಬಂದವರು. ಯಾವ ನಿಮಿಷಕ್ಕೆ ಮತ್ತೆ ಜೈಲಿಗೆ ಹೋಗುತ್ತಾರೋ ಗೊತ್ತಿಲ್ಲ'' ಎಂದು ವಾಗ್ದಾಳಿ ನಡೆಸಿದರು. 

''ಜೈಲಿಗೆ ಹೋಗಿ ಬಂದ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ರಾಜ್ಯ ಕಾಂಗ್ರೆಸ್ ಇದೆ. ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ನಲಪಾಡ್ ಸ್ಥಿತಿ ಕೂಡ ಅದೇ. ಬಾರ್ ನಲ್ಲಿ ಕುಡಿದು ಹೊಡೆದಾಡಿ ಪರಪ್ಪನ ಅಗ್ರಹಾರಕ್ಕೆ ಹೋಗಿ ಬಂದಿದ್ದಾನೆ. ಆತನ ಅಧ್ಯಕ್ಷತೆಯಲ್ಲಿ ಯುವ ಕಾಂಗ್ರೆಸ್ ಇದೆ. ಹೀಗಾಗಿ ಯಾವುದು ರೌಡಿಗಳ ಪಕ್ಷ ಎಂದು ರಾಜ್ಯದ ಜನ ತೀರ್ಮಾನ ಮಾಡುತ್ತಾರೆ'' ಎಂದರು.

Similar News