ಪೊಲೀಸರು ಅಕ್ರಮವಾಗಿ ನಮ್ಮ ಸಂಸ್ಥೆಯೊಳಗೆ ಪ್ರವೇಶಿಸಿದ್ದಾರೆ: ಒಡನಾಡಿ ಮುಖ್ಯಸ್ಥ ಸ್ಟ್ಯಾನ್ಲಿ ಆರೋಪ

"ಮುರುಘಾ ಪ್ರಕರಣದ ಬಳಿಕ ಒಡನಾಡಿಗೆ ನೂರೊಂದು ಕಂಟಕಗಳು ಎದುರಾಗುತ್ತಿವೆ"

Update: 2022-12-01 15:32 GMT

ಮೈಸೂರು,ಡಿ.1: ಚಿತ್ರದುರ್ಗದ ಮುರುಘಾ ಮಠದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗದಿಂದ ಮಫ್ತಿಯಲ್ಲಿ ಬಂದ ಪೊಲೀಸರು ನಮ್ಮ ಸಂಸ್ಥೆಯೊಳಗೆ  ಅಕ್ರಮವಾಗಿ ನುಗ್ಗಿ ಬಂದಿದ್ದಾರೆ ಎಂದು ಒಡನಾಡಿ ಸಂಸ್ಥೆಯ ಮುಖ್ಯಸ್ಥ  ಸ್ಟ್ಯಾನ್ಲಿ ಕೆ.ವಿ ಆರೋಪಿಸಿದ್ದಾರೆ.

ಈ ಸಂಬಂಧ ಗುರುವಾರ 'ವಾರ್ತಾಭಾರತಿ'ಯೊಂದಿಗೆ ಮಾತನಾಡಿದ ಅವರು, ''ನ.30ರ ಬುಧವಾರ ಮಧ್ಯಾಹ್ನ 12.30ರ ಸುಮಾರಿಗೆ ಖಾಸಗಿ ಟಂಪೋ ಒಂದರಲ್ಲಿ ಬಂದ ಇಬ್ಬರು ಪಿ.ಎಸ್.ಐ. ನೇತೃತ್ವದ ಪೊಲೀಸರು ಏಕಾ ಏಕಿ ನಮ್ಮ ಸಂಸ್ಥೆಯೊಳಗೆ ನುಗ್ಗಿ ಏನೋ ಹುಡುಕಾಡುವ ರೀತಿ ನಡೆದುಕೊಂಡರು. ಅದಕ್ಕೆ ನಾವು ಯಾಕೆ ಏನು ಹುಡುಕುತ್ತಿದ್ದೀರ ಎಂದು ಪ್ರಶ್ನೆ ಮಾಡಿದೆವು. ಅದಕ್ಕೆ ಮಹಿಳಾ ಪಿ.ಎಸ್.ಐ. ಅವರು ನಾವು ಸಿಡಬ್ಲ್ಯೂಸಿ (ಮಕ್ಕಳ ಕಲ್ಯಾಣ ಸಮಿತಿ)ನಿಂದ ಬಂದಿದ್ದೇವೆ ಎಂಬ ಸುಳ್ಳು ಹೇಳಿದ್ದಾರೆ'' ಎಂದು ಸ್ಟ್ಯಾನ್ಲಿ ಆರೋಪಿಸಿದರು. 

''ಈ ಹಿಂದೆ ಹತ್ತು ದಿನಗಳ ಹಿಂದೆ ಇದೇ ಮಹಿಳಾ ಪಿ.ಎಸ್.ಐ. ಬಂದು ಸಂಸ್ಥೆಯಲ್ಲಿ ತನಿಖೆ ಮಾಡಿ ಹೋಗಿದ್ದಾರೆ. ಇವರಿಗೆ ಸಿಡಬ್ಲ್ಯೂಸಿ ಯಾವುದು ಒಡನಾಡಿ ಯಾವುದು ಎಂಬುದ ಗೊತ್ತಿಲ್ಲವೇ? ಅವರು ಸುಳ್ಳು ಹೇಳುವ ರೀತಿ ನಡೆದುಕೊಂಡರು. ಇವರು ಬರುವ ಮುನ್ನ ನಮಗೆ ನೋಟಿಸ್ ನೀಡಬೇಕಿತ್ತು. ಜೊತೆಗೆ ಸಿಡ್ಲ್ಯೂಸಿ ಅಧಿಕಾರಿಗಳೊಂದಿಗೆ ಬರಬೇಕಿತ್ತು. ಆದರೆ ಅದನ್ನೆಲ್ಲಾ ಮಾಡದೇ ನಮ್ಮ ಆತ್ಮ ಸ್ಥೈರ್ಯವನ್ನು ಕುಗ್ಗಿಸುವ ದೃಷ್ಟಿಯಿಂದ ಬಂದಿದ್ದರು ಎನಿಸುತ್ತದೆ'' ಎಂದರು.

''ಮುರುಘಾ ಮಠದ ವಿಚಾರಕ್ಕೆ ಸಂಬಂಧಿಸಿದಂತೆ ಮಕ್ಕಳನ್ನು ಕರೆದುಕೊಂಡು ಹೋಗುವ ಹಿನ್ನಲೆಯಲ್ಲಿ ಬಂದಿದ್ದರು ಎನಿಸುತ್ತದೆ. ನಾವು ಸಂಸ್ಥೆಯಲ್ಲಿ ಇದ್ದಿದ್ದರಿಂದ ಅವರು ತಬ್ಬಿಬ್ಬಾಗಿ ಏನು ಮಾಡಬೇಕು ಎಂಬುದು ಗೊತ್ತಾಗದೇ ಏನೊ ಹುಡುಕವ ರೀತಿ ನಾಟಕವಾಡಿದರು. ಮುರುಘಾ ಮಠದ ಪ್ರಕರಣ ನಡೆದು ಮೂರು ತಿಂಗಳು ಕಳೆಯುತ್ತಿದೆ. ಇದಾದ ಬಲಿಕ ನಮ್ಮನ್ನು ಹತ್ತಿಕ್ಕಬೇಕು ಎಂದು ನೂರಾರು ಕಂಟಕಗಳು ಎದುರಾಗುತ್ತಿವೆ. ಆದರೆ ಅದನ್ನೆಲ್ಲ ಲೆಕ್ಕಿಸದೇ ನಾವು ಮಕ್ಕಳಿಗೆ ನ್ಯಾಯ ಕೊಡಿಸುವ ದೃಷ್ಟಿಯಿಂದ ಕೆಲಸ ಮಾಡುತ್ತಿದ್ದೇವೆ'' ಎಂದು ಹೇಳಿದರು.

''ನಮಗೆ ಯಾವುದೇ ನೋಟಿಸ್ ನೀಡದೇ ಜೊತೆಗೆ ಮಾಹಿತಿಯನ್ನೂ ನೀಡದೇ ದಿಢೀರನೇ ನಮ್ಮ ಸಂಸ್ಥೆಯೊಳಗೆ ನುಗ್ಗಿ ಏನೋ ಹುಡುಕುವ ನಾಟಕವಾಡಿದ ಪೊಲೀಸರ ವಿರುದ್ಧ ಗೃಹ ಸಚಿವರು, ಹಿರಿಯ ಅಧಿಕಾರಿಗಳಿಗೆ ಲಿಖಿತ ರೂಪದಲ್ಲಿ ದೂರು ನೀಡಲು ನಿರ್ಧರಿಸಿದ್ದು, ಪೊಲೀಸರು ಬಂದು ಇಲ್ಲಿ ಶೋಧ ನಡೆಸಿರುವ ಬಗ್ಗೆ ನಮ್ಮ ಬಳಿ ಸಾಕ್ಷ್ಯಾಧಾರಗಳಿವೆ'' ಎಂದು ತಿಳಿಸಿದರು. 

Full View

Similar News