ಗೂಂಡಾ ರಾಜಕೀಯದಂಥ ದೇಶವಿರೋಧಿ ಚಟುವಟಿಕೆಯನ್ನು BJP ಸಹಿಸುವುದಿಲ್ಲ: ನಳಿನ್‍ಕುಮಾರ್ ಕಟೀಲ್

Update: 2022-12-02 11:15 GMT

ಬೆಂಗಳೂರು, ಡಿ.2: ಭಯೋತ್ಪಾದನೆ, ಕ್ರಿಮಿನಲ್ ಚಟುವಟಿಕೆ ಮತ್ತು ಗೂಂಡಾ ರಾಜಕೀಯದಂಥ ದೇಶವಿರೋಧಿ ಚಟುವಟಿಕೆಯನ್ನು ನಮ್ಮ ಪಕ್ಷ ಸಹಿಸುವುದಿಲ್ಲ ಹಾಗೂ ಒಪ್ಪಿಕೊಳ್ಳುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್  (Nalin Kumar Kateel)ಅವರು ತಿಳಿಸಿದ್ದಾರೆ. 

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮೊನ್ನೆ ಯಾವುದೋ ಒಂದು ಕಾರ್ಯಕ್ರಮದ ವೇದಿಕೆಯಲ್ಲಿ ನಮ್ಮವರು ಪಾಲ್ಗೊಂಡಿದ್ದನ್ನು ಗಮನಿಸಿದ್ದೇನೆ. ಆ ಕುರಿತಂತೆ ವಿವರಣೆ ಕೇಳಿದ್ದೇನೆ. ಯಾವುದೇ ಕಾರಣಕ್ಕೆ ಕ್ರಿಮಿನಲ್ ಹಿನ್ನೆಲೆ ಉಳ್ಳವರನ್ನು ಪಕ್ಷಕ್ಕೆ ಸೇರಿಸುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದೇನೆ. ಇಲ್ಲಿಗೆ ಈ ವಿಷಯಕ್ಕೆ ಮುಕ್ತಾಯ ಹಾಕುತ್ತೇನೆ ಎಂದು ತಿಳಿಸಿದರು.

ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ

''ಡಿ.ಕೆ.ಶಿವಕುಮಾರ್ ಯಾರ ಶಿಷ್ಯ? ಎಲ್ಲಿಂದ ರಾಜಕಾರಣಕ್ಕೆ ಬಂದರು ಎಂದು ನಾನೇನೂ ಬಹಿರಂಗ ಪಡಿಸಬೇಕಿಲ್ಲ. ಡಿ.ಕೆ.ಶಿವಕುಮಾರ್ ಇತಿಹಾಸ, ವ್ಯವಸ್ಥೆಗಳು, ರಕ್ತಸಿಕ್ತ ಕಾಂಗ್ರೆಸ್‍ನ ಚಟುವಟಿಕೆಗಳು ನನಗಿಂತ ಹೆಚ್ಚಾಗಿ ಬೆಂಗಳೂರಿನ ಜನರಿಗೆ ತಿಳಿದಿದೆ'' ಎಂದು ಅವರು ಪ್ರಶ್ನೆಗೆ ಉತ್ತರವಾಗಿ ತಿಳಿಸಿದರು.

ದೆಹಲಿ ಸೇರಿ ದೇಶದಲ್ಲಿ ಸಿಕ್ಖರ ನರಮೇಧ ಯಾರು ಮಾಡಿದ್ದಾರೆ ಎಂಬುದಕ್ಕೆ ನಾವೇನೂ ಉತ್ತರ ಕೊಡುವ ಅವಶ್ಯಕತೆ ಇಲ್ಲ. ಹಿಂದೆ ಬಾಣಲೆಯಲ್ಲಿ ಬೆಂಕಿ ಹಾಕಿ ಯಾರನ್ನೋ ಸುಟ್ಟಿದ್ದಕ್ಕೆ ಕಾಂಗ್ರೆಸ್‍ನಲ್ಲಿ ಉದಾಹರಣೆಗಳಿವೆ ಎಂದು ಅವರು ನುಡಿದರು.

ರಾಜಕೀಯ ವ್ಯವಸ್ಥೆಯಲ್ಲಿ ಸಹಜವಾಗಿ ಕೆಲವೊಂದು ಅಚಾತುರ್ಯಗಳಾಗುತ್ತವೆ. ಇಂಥ ಘಟನೆಗಳು, ಕ್ರಿಮಿನಲ್ ಕೇಸುಗಳ ಕಾರಣವನ್ನೂ ಗಮನಿಸುತ್ತೇವೆ. ಎಲ್ಲ ಪ್ರಕರಣಗಳನ್ನೂ ಒಂದೇರೀತಿ ನೋಡಲು ಸಾಧ್ಯವಿಲ್ಲ. ನಮ್ಮ ಸಂಘಟನೆಯ ಎಲ್ಲರ ಮೇಲೂ ಪ್ರಕರಣಗಳನ್ನು ದಾಖಲಿಸಿದ್ದಾರೆ. ಹಿಂದುತ್ವದ ಪರವಾದ ಹೋರಾಟ ಮಾಡಿದ್ದರ ವಿರುದ್ಧ ಕೇಸುಗಳೂ ಇವೆ. ಕಾಂಗ್ರೆಸ್ ಆಡಳಿತದಲ್ಲಿ ಇದ್ದಾಗ ಎಲ್ಲರ ಮೇಲೆ ಪ್ರಕರಣ ದಾಖಲಿಸಿದೆ; ರೌಡಿ ಲಿಸ್ಟ್‍ಗೆ ಸೇರಿಸಿದೆ. ಅಷ್ಟೇ ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಕೆಲಸ ಮಾಡಿದ ಹತ್ತಾರು ಜನ ಪತ್ರಕರ್ತರನ್ನೂ ಸಿದ್ದರಾಮಣ್ಣ ಸರಕಾರವು ಜೈಲಿಗೆ ತಳ್ಳಿತ್ತು ಎಂದು ಇನ್ನೊಂದು ಪ್ರಶ್ನೆಗೆ ಉತ್ತರ ಕೊಟ್ಟರು.

ಹೀಗಾಗಿ ಎಲ್ಲವನ್ನೂ ನಾವು ತುಲನೆ ಮಾಡುತ್ತಿದ್ದೇವೆ. ಇಂಥ ಅಚಾತುರ್ಯಗಳ ಕೇಸುಗಳ ಕುರಿತು ಪರಿಶೀಲಿಸುತ್ತಿದ್ದೇವೆ ಎಂದು ಅವರು ತಿಳಿಸಿದರು.

Similar News