ಕಾಂಗ್ರೆಸ್ ರೌಡಿಗಳನ್ನು ತಯಾರು ಮಾಡುವ ಕಾರ್ಖಾನೆ: ಸಚಿವ ಆರ್.ಅಶೋಕ್ ವಾಗ್ದಾಳಿ

Update: 2022-12-02 12:11 GMT

ಬೆಂಗಳೂರು, ಡಿ. 2: ‘ಪ್ರತಿಪಕ್ಷ ಕಾಂಗ್ರೆಸ್ ರೌಡಿಗಳನ್ನು ತಯಾರು ಮಾಡುವ ಕಾರ್ಖಾನೆ. ಆ ಪಕ್ಷದ ಮುಖಂಡರಿಗೆ ಬಿಜೆಪಿಯ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ’ ಎಂದು ಕಂದಾಯ ಸಚಿವ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ರಾಜಕೀಯದಲ್ಲಿ ಸಚಿವ ವಿ.ಸೋಮಣ್ಣರಿಗೆ ಸಾಕಷ್ಟು ಅನುಭವವಿದೆ. ಅವರ ರಾಜಕೀಯ ಜೀವನದಲ್ಲಿ ಎಂದೂ ರೌಡಿಗಳ ಸಹವಾಸ ಮಾಡಿಲ್ಲ. ರೌಡಿಗಳ ಸಹಕಾರದಿಂದ ಚುನಾವಣೆ ಗೆದ್ದಿರುವ ಇತಿಹಾಸವೂ ಇಲ್ಲ’ ಎಂದು ಸ್ಪಷ್ಟಣೆ ನೀಡಿದರು.

‘ಸಚಿವ ಸೋಮಣ್ಣ ಬಸವ ತತ್ವ ನಂಬಿದವರು. ಅವರ ಮೇಲೆ ಈ ಆಪಾದನೆ ಸರಿಯಲ್ಲ. ಯಾರಾದರೂ ಬಂದಿರಬಹುದು. ಆದರೆ, ಅದನ್ನು ದೊಡ್ಡ ವಿಚಾರ ಮಾಡುವುದು ಬೇಡ. ರಾಜಕಾರಣಿಗಳು ಇಂತಹ ವ್ಯಕ್ತಿಗಳನ್ನು ಇಟ್ಟುಕೊಳ್ಳುವುದು ಒಳ್ಳೆಯದಲ್ಲ ಎಂದು ಅಶೋಕ್ ತಿಳಿಸಿದರು.

‘ಕಾಂಗ್ರೆಸ್ ದೇಶದಲ್ಲಿ 50 ವರ್ಷ ಆಡಳಿತ ಮಾಡಿದೆ. ರೌಡಿಗಳಿಗೆ ಬೆಳೆಯಲು ಅವಕಾಶ ಕೊಟ್ಟಿದ್ದು ಕಾಂಗ್ರೆಸ್. ಕಾಂಗ್ರೆಸ್ ಒಂದು ರೀತಿಯಲ್ಲಿ ರೌಡಿಗಳನ್ನು ತಯಾರಿ ಮಾಡುವ ಕಾರ್ಖಾನೆ. ರೌಡಿಗಳ ಬೆಂಬಲದಿಂದ ಅಧಿಕಾರ ನಡೆಸಿದ್ದಾರೆ. ಹಿಂದೆ ಡಾನ್‍ಗಳ ರಾಜ್ಯ ಆಗಿತ್ತು. ಇದೀಗ ಅವರೆಲ್ಲಾ ಮೂಲೆ ಸೇರಿದ್ದಾರೆ ಎಂದು ಅಶೋಕ್ ತಿರುಗೇಟು ನೀಡಿದರು.

‘ಕಾಂಗ್ರೆಸ್ ಪಕ್ಷಕ್ಕೂ ಗೂಂಡಾಗಿರಿಗೂ ಅವಿನಾಭಾವ ಸಂಬಂಧವಿದೆ. ರೌಡಿಸಂ ಸಂಸ್ಕøತಿ ಹಾಗೂ ಹಿನ್ನೆಲೆಯೂ ಆ ಪಕ್ಷಕ್ಕೆ ಇದೆ. ಬಿಜೆಪಿ ಗೂಂಡಾಗಿರಿಯ ರಾಜಕಾರಣ ಪ್ರೋತ್ಸಾಹ ಮಾಡುವುದಿಲ್ಲ. ಈ ಬಗ್ಗೆ ಈಗಾಗಲೇ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸ್ಪಷ್ಟಪಡಿಸಿದ್ದಾರೆ. ಕೇಸರಿನ ಶಾಲು ಹಾಕಿದ ತಕ್ಷಣ ಕೇಸರಿ ಆಗಲ್ಲ. ಕೇಸರಿ ಜೊತೆಗೆ ಹಸಿರು ಇದ್ದರೆ ಮಾತ್ರ ಬಿಜೆಪಿ ಆಗುತ್ತದೆ’ ಎಂದು ಹೇಳಿದರು.

ಸ್ವಾಮೀಜಿಗಳು ಕೇಸರಿ ಶಾಲು ಹಾಕುತ್ತಾರೆ. ಮುಸ್ಲಿಮರೂ ಹಾಕುತ್ತಾರೆ. ಕೇಸರಿ ಹಾಕಿದ ತಕ್ಷಣವೇ ಅವರು ಬಿಜೆಪಿ ಎಂಬ ಭಾವನೆ ಬೇಡ. ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ, ಡಿಕೆಶಿ ಜೊತೆಗೆ ರೌಡಿಗಳು ಇರುವ ಫೋಟೋಗಳಿವೆ. ಫೈಟರ್ ರವಿ ಪಕ್ಷ ಸೇರ್ಪಡೆ ಮಾಡಿದ್ದು ಗಮನಕ್ಕೆ ಬಂದಿಲ್ಲ. ಈ ಬಗ್ಗೆ ರಾಜ್ಯಾಧ್ಯಕ್ಷರ ಜೊತೆ ಮಾತನಾಡುತ್ತೇನೆ’ ಎಂದು ಅಶೋಕ್ ತಿಳಿಸಿದರು. 

Similar News