ಗಡಿ ಭಾಗದ ಸ್ಥಿತಿಗತಿಯ ವರದಿ ನೀಡಲು ರಾಜ್ಯದ 8 ವಿವಿಗಳಿಗೆ ಸೂಚನೆ: ಡಾ.ಸಿ.ಸೋಮಶೇಖರ್

Update: 2022-12-02 14:50 GMT

ಬೆಂಗಳೂರು, ಡಿ. 2: ಗಡಿ ಭಾಗದಲ್ಲಿ ವಾಸಿಸುವ ಜನರ ಸ್ಥಿತಿಗತಿಗಳ ಕುರಿತು ಅಧ್ಯಯನ ನಡೆಸಿ, ವರದಿ ನೀಡುವಂತೆ ರಾಜ್ಯದ ಎಂಟು ವಿಶ್ವ ವಿದ್ಯಾಲಯಗಳಿಗೆ ಸೂಚನೆ ನೀಡಿದ್ದೇವೆ. ಆರು ತಿಂಗಳಿನಲ್ಲಿ ವರದಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಿಗಲಿದೆ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಹೇಳಿದ್ದಾರೆ.

ಶುಕ್ರವಾರ ಪ್ರಾಧಿಕಾರದ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದ ಗಡಿ ಭಾಗದ ಜನರ ಆರ್ಥಿಕ, ಸಾಮಾಜಿಕ, ಶಿಕ್ಷಣ ಬಗ್ಗೆ ಯಾವುದೇ ರೀತಿಯ ಅಧ್ಯಯನ ನಡೆದ ಬಗ್ಗೆ ಮಾಹಿತಿ ಇಲ್ಲ. ಹಾಗಾಗಿ ಪ್ರಾಧಿಕಾರವು ರಾಜ್ಯದ 8 ವಿಶ್ವವಿ ದ್ಯಾಲಯಗಳನ್ನು ಸಂಪರ್ಕ ಮಾಡಿದ್ದು, ವರದಿಯನ್ನು ನೀಡುವಂತೆ ಕೇಳಿದ್ದೇವೆ. ವಿವಿಗಳ ವರದಿಯನ್ನು ನೀಡಿದ ನಂತರ ಅದನ್ನು ಪರಿಶೀಲಿಸಿ ಸರಕಾರಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಕೇರಳದ ಗಡಿಯಲ್ಲಿ ಇರುವ ಹಳ್ಳಿಗಳ ಹೆಸರು ಬದಲಾವಣೆ ಮಾಡುವ ಕೆಲಸ ಮಾಡಲಾಗುತ್ತಿದ್ದು, ಅಲ್ಲಿನ ಜಿಲ್ಲಾಧಿಕಾರಿಗಳ ಜೊತೆ ಮಾತುಕತೆ ನಡೆಸಿ, ಕನ್ನಡದ ಹೆಸರುಗಳ ಬದಲಾವಣೆ ಮಾಡದಂತೆ ಸೂಚಿಸಲಾಗಿದೆ. ನಮ್ಮ ಸೂಚನೆಗೆ ಅವರು ಮನ್ನಣೆ ನೀಡಿದ್ದು, ಹೆಸರು ಬದಲಾವಣೆ ನಿರ್ಧಾರ ಕೈಬಿಟ್ಟಿದ್ದಾರೆ ಎಂದು ಅವರು ತಿಳಿಸಿದರು.

ಕಾಸರಗೋಡು, ಅಕ್ಕಲಕೋಟೆ ಮತ್ತು ಗೋವಾದಲ್ಲಿ ಕನ್ನಡಿಗರು ಹೆಚ್ಚಾಗಿದ್ದು, ಈ ಸ್ಥಳಗಳಲ್ಲಿ ಕನ್ನಡ ಭವನ ನಿರ್ಮಾಣದ ಬಗ್ಗೆ ಚಿಂತನೆ ಮಾಡಲಾಗಿದೆ. ಗೋವಾದಲ್ಲಿ ಕನ್ನಡ ಭವನಕ್ಕೆ ಸ್ಥಳದ ಕೊರತೆ ಇದ್ದು, ಅಲ್ಲಿನ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಲಾಗುತ್ತಿದೆ. ಸ್ಥಳವನ್ನು ನೀವೇ ಖರೀದಿ ಮಾಡಿ ಎಂದು ಅಲ್ಲಿನ ಸಿಎಂ ಹೇಳುತ್ತಿದ್ದಾರೆ. ಕರ್ನಾಟಕದಲ್ಲಿ ಕೊಂಕಣಿ ಭವನಕ್ಕೆ ಜಾಗ ಕೊಟ್ಟಿದ್ದೇವೆ. ಹಾಗಾಗಿ ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಜಾಗ ನೀಡುವಂತೆ ಮನವಿ ಮಾಡುತ್ತಿದ್ದೇವೆ ಎಂದರು.

ಕಾಸರಗೋಡಿನಲ್ಲಿ ಕಯ್ಯಾರ ಕಿಞ್ಞಣ್ಣ ರೈ ಕುಟುಂಬಸ್ಥರು ಭವನ ನಿರ್ಮಾಣಕ್ಕೆ ಉಚಿತವಾಗಿ ಜಮೀನು ನೀಡುವುದಾಗಿ ಪ್ರಕಟಿಸಿದ್ದಾರೆ. ಅಕ್ಕಲಕೋಟೆಯಲ್ಲಿ ಕನ್ನಡ ಸಂಘದವರು ಜಾಗ ನೀಡಲು ಮುಂದೆ ಬಂದಿದ್ದಾರೆ. ಹಾಗಾಗಿ ಈ ಎರಡು ಕಡೆ ನಮಗೆ ಕನ್ನಡ ಭವನ ನಿರ್ಮಾಣಕ್ಕೆ ಸಮಸ್ಯೆ ಇಲ್ಲ ಎಂದು ಹೇಳಿದರು.

ಕಾರವಾರದಲ್ಲಿ ಪಾಲಿಕೆಯವರೇ ಕೊಂಕಣಿಯಲ್ಲಿ ನಾಮಫಲಕ ಹಾಕಲಾಗಿತ್ತು. ನಾನು ಇದಕ್ಕೆ ಆಕ್ಷೇಪಣೆ ಸಲ್ಲಿಸಿದ ಬಳಿಕ ತಕ್ಷಣವೇ ಕೊಂಕಣಿ ನಾಮಫಲಕವನ್ನು ತೆರವುಗೊಳಿಸಲಾಯಿತು. ಭಾಷೆ, ಶಿಕ್ಷಣ, ಸಂಸ್ಕøತಿಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಇದ್ದರೆ ನಾವು ಮುಂದೆ ಬರುತ್ತೇವೆ ಎಂದು ತಿಳಿಸಿದರು.

‘ಮಹಾರಾಷ್ಟ್ರದ ಗಡಿ ಭಾಗದಲ್ಲಿ ಮರಾಠಿ ಶಾಲೆಗಳಿಗೆ ಕನ್ನಡಿಗ ಮಕ್ಕಳನ್ನು ಸೇರಿಸಲು ಸಂಘಟನೆಗಳು ಸಂಚು ಮಾಡಿದ್ದವು. ಅಲ್ಲದೆ, ಮಹರಾಷ್ಟ್ರ ಸರಕಾರ ಕರ್ನಾಟಕ ರಾಜ್ಯದಲ್ಲಿ ಮರಾಠಿ ಶಾಲೆಗಳನ್ನು ಸ್ಥಾಪಿಸಿ, ವಿದ್ಯಾರ್ಥಿಗಳಿಗೆ ಸಕಲ ಸೌಲಭ್ಯವನ್ನು ನೀಡುತ್ತದೆ ಎಂದು ಅಪಪ್ರಚಾರ ಮಾಡಲಾಗುತ್ತಿತ್ತು. ಇದನ್ನು ಖಂಡಿಸಿ, ಪ್ರತಿಭಟನೆ ಮಾಡಿದ ನಂತರ ಅಪಪ್ರಚಾರವನ್ನು ಕೈಬಿಡಲಾಗಿದೆ. ಐದಾರು ತಿಂಗಳ ಹಿಂದೆ ಬೆಳಗಾವಿಗೆ ಬಂದ ಮಹಾರಾಷ್ಟ್ರದ ಸಂಘಟನೆಯೊಂದು ಸರ್ವೆ ನಡೆಸುತ್ತಿತ್ತು. ಈ ಸುದ್ದಿ ತಿಳಿದ ತಕ್ಷಣ ನಾವು ಕಾರ್ಯಪ್ರವೃತ್ತರಾಗಿ ಅದನ್ನು ಸ್ಥಗಿತಗೊಳಿಸಿದ್ದೇವೆ. ಗಡಿ ವಿವಾದದ ಕಾನೂನು ಹೋರಾಟದಲ್ಲಿಯೂ ರಾಜ್ಯಕ್ಕೆ ಜಯ ಸಿಗಲಿದೆ’

-ಡಾ.ಸಿ.ಸೋಮಶೇಖರ್, ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ 

Similar News