ಆನೇಕಲ್ ಪುರಸಭೆಗೆ ರೌಡಿಶೀಟರ್​ ನಾಮನಿರ್ದೇಶನ; ದಿನೇಶ್ ಗುಂಡೂರಾವ್ ಕಿಡಿ

''ಮಲ್ಲೇಶ್ವರದ BJP ಕಚೇರಿ 'ಪಾಪಿಗಳ ಲೋಕ‌'ವಾಗಿದೆ''

Update: 2022-12-03 06:21 GMT

ಬೆಂಗಳೂರು,ಡಿ,03: ಇತ್ತೀಚೆಗೆ ಬಿಜೆಪಿ ನಾಯಕರೊಂದಿಗೆ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದ ರೌಡಿ ಶೀಟರ್ ಸೈಲಂಟ್ ಸುನೀಲ್ ಬಗ್ಗೆ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ರಾಜ್ಯ ಸರ್ಕಾರ ಆನೇಕಲ್ ಪುರಸಭೆ ಸದಸ್ಯನಾಗಿ ರೌಡಿಶೀಟರ್ ಮಂಜುನಾಥ್ ಎಂಬಾತನನ್ನು ನಾಮನಿರ್ದೇಶನ ಮಾಡಿ ಆದೇಶ ಹೊರಡಿಸಿದೆ ಎಂದು ಮಾಜಿ ಸಚಿವ ಹಾಗೂ ಶಾಸಕ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.  

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ''ಆನೇಕಲ್ ಪುರಸಭೆಗೆ ರೌಡಿ ಶೀಟರ್ ಒಬ್ಬನನ್ನು ಸರ್ಕಾರ ಸದಸ್ಯನಾಗಿ ನಾಮನಿರ್ದೇಶನ ಮಾಡಿದೆ. ಈ ಸರ್ಕಾರ ರೌಡಿಗಳ‌ ಅಡ್ಡಾ ತೆರೆಯುತ್ತಿದೆಯೇ?'' ಎಂದು ಪ್ರಶ್ನೆ ಮಾಡಿದ್ದಾರೆ. 

''ಪಾತಕಿಗಳು BJP ಪಾಳಯ ಸೇರಿಕೊಳ್ಳುತ್ತಿದ್ದಾರೆ. ಶಾಂತಿಯ ನಾಡಾದ ರಾಜ್ಯದಲ್ಲಿ ರೌಡಿಗಳ ಮೂಲಕ ರಕ್ತ ರಾಜಕಾರಣ‌ ಮಾಡಲು ಮುಂದಾಗಿದೆಯೇ ಈ ಸರ್ಕಾರ?'' ಎಂದು ಕಿಡಿಕಾರಿದ್ದಾರೆ. 

'ವಾಂಟೆಡ್ ಲಿಸ್ಟ್‌ನಲ್ಲಿರೋ ರೌಡಿಗಳು ಹಾಗೂ ಪಾತಕಿಗಳು BJP ಪಡಸಾಲೆಯಲ್ಲಿ ಅಡ್ಡಾಡುತ್ತಿದ್ದಾರೆ. ಕೆಲವು ರೌಡಿಶೀಟರ್‌ಗಳನ್ನು ಸರ್ಕಾರವೇ ಆಯಕಟ್ಟಿನ ಹುದ್ದೆಗೆ ನೇಮಕ ಮಾಡುತ್ತಿದೆ. ಈ ಮೂಲಕ ಸರ್ಕಾರ ಏನು ಸಂದೇಶ ಕೊಡಲು ಹೊರಟಿದೆ? ಕರ್ನಾಟಕವನ್ನು ಗೂಂಡಾರಾಜ್ಯ ಮಾಡುವುದು BJP ನಾಯಕರ ಉದ್ದೇಶವೇ?' ಎಂದು ವಾಗ್ದಾಳಿ ನಡೆಸಿದ್ದಾರೆ. 

''ಪಾತಕಿಗಳ ಅಡ್ಡೆಯಾಗುತ್ತಿರುವ ಮಲ್ಲೇಶ್ವರದ BJP ಕಚೇರಿ 'ಪಾಪಿಗಳ ಲೋಕ‌'ವಾಗಿದೆ. ಬಾಯಲ್ಲಿ ರಾಮ ಜಪ ಮಾಡುವ BJPಯವರು ರೌಡಿಗಳ ಸಂಗ ಮಾಡಿ ಹಾಳಾಗಿ ಹೋಗಿದ್ದಾರೆ. BJPಯವರಿಗೆ ಮರ್ಯಾದೆ ಇದ್ದರೆ ಇನ್ನಾದರೂ ಆದರ್ಶ ಪುರುಷ ರಾಮನ ಹೆಸರು ಹೇಳುವುದನ್ನು ನಿಲ್ಲಿಸಲಿ. ಕರ್ನಾಟಕವನ್ನು ರೌಡಿ ರಾಜ್ಯ ಮಾಡುವುದಾಗಿ ಬಹಿರಂಗವಾಗಿ ಒಪ್ಪಿಕೊಳ್ಳಲಿ'' ಎಂದು ದಿನೇಶ್ ಗುಂಡೂರಾವ್ ಸವಾಲು ಹಾಕಿದ್ದಾರೆ. 

ಆನೇಕಲ್ ನಿವಾಸಿ ಮಂಜುನಾಥ್ ಅಲಿಯಾಸ್ ಉಪ್ಪಿಯು ಕೊಲೆ ಪ್ರಕರಣಗಳ ಪ್ರಮುಖ ಆರೋಪಿಯಾಗಿದ್ದು, ಮಡಿವಾಳ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದಾನೆನ್ನಲಾಗಿದೆ. ಸದ್ಯ ಮಂಜುನಾಥ್ ನಾಮನಿರ್ದೇಶನ ಮಾಡಿ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶದ ಪ್ರತಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವ್ಯಾಪಕ ಟೀಕೆ ವ್ಯಕ್ತವಾಗಿತ್ತಿದೆ.

[ರಾಜ್ಯ ಸರ್ಕಾರ ಹೊರಡಿಸಿರುವ ಆದೇಶದ ಪ್ರತಿ]

Similar News