ಸಾರ್ವಜನಿಕರು-ಗ್ರಾಹಕರಿಗೆ ಸೇವೆ ಒದಗಿಸುವ ಸಂಸ್ಥೆಗಳೊಂದಿಗೆ ಪೊಲೀಸರ ಸಮನ್ವಯ ಸಭೆ

Update: 2022-12-03 17:46 GMT

ಬೆಂಗಳೂರು, ಡಿ.3: ಸಾರ್ವಜನಿಕರಿಗೆ ಟ್ಯಾಕ್ಸಿ ಸೇವೆ ಒದಗಿಸುವ, ಆಹಾರ ಪದಾರ್ಥಗಳನ್ನು ಹಾಗೂ ಇನ್ನಿತರೆ ವಸ್ತುಗಳನ್ನು ಸರಬರಾಜು ಮಾಡುವ ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ನಗರ ಪೊಲೀಸ್ ಆಯುಕ್ತರು, ವಿಶೇಷ ಆಯುಕ್ತರು ಮತ್ತು ಹಿರಿಯ ಅಧಿಕಾರಿಗಳು ಸಮಾಲೋಚನೆ ಹಾಗೂ ಸಮನ್ವಯ ಸಭೆ ನಡೆಸಿ ಸುರಕ್ಷತೆ ಹಾಗೂ ಜನಸ್ನೇಹಿಯಾಗಿಸುವ ನಿಟ್ಟಿನಲ್ಲಿ ಸಲಹೆ ಸೂಚನೆಗಳನ್ನು ನೀಡಿದರು.

ಶನಿವಾರ ನಗರ ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿರುವ ವಿವಿಧ ಟ್ಯಾಕ್ಸಿ ಎಜೆನ್ಸಿಗಳು, ಲಾಜಿಸ್ಟಿಕ್ ಎಜೆನ್ಸಿಗಳು, ಆಹಾರ ಪದಾರ್ಥಗಳು ಹಾಗೂ ಇನ್ನಿತರೆ ವಸ್ತುಗಳನ್ನು ಗ್ರಾಹಕರ ವಿಳಾಸಗಳಿಗೆ ಸರಬರಾಜು ಮಾಡುವ ವಿವಿಧ ಹಾಗೂ ಸೇವೆಗಳನ್ನು ಒದಗಿಸುವ ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ಸಮಾಲೋಚನೆ ಹಾಗೂ ಸಮನ್ವಯ ಸಭೆಯನ್ನು ನಡೆಸಿ, ಸದರಿ ಸಂಸ್ಥೆಗಳ ಅಹವಾಲುಗಳನ್ನು ಪಡೆದುಕೊಂಡರು.

ಈ ಸಂಸ್ಥೆಗಳ ಕಾರ್ಯವೈಖರಿಗಳನ್ನು ಸಾರ್ವಜನಿಕ, ಮಹಿಳೆ ಮತ್ತು ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಹಾಗೂ ಈ ಸೇವೆಗಳನ್ನು ಹೆಚ್ಚು ಸುರಕ್ಷತೆ ಮತ್ತು ಜನಸ್ನೇಹಿಯಾಗಿಸುವ ನಿಟ್ಟಿನಲ್ಲಿ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅವರು ಸಲಹೆ, ಸೂಚನೆಗಳು, ಮುಂಜಾಗ್ರತಾ ಕ್ರಮಗಳು, ತಾಂತ್ರಿಕ ಸೌಲಭ್ಯ ಅಳವಡಿಸಿಕೊಳ್ಳುವಂತೆ ಸೂಚಿಸಿದರು.

ಗ್ರಾಹಕರು ಟ್ಯಾಕ್ಸಿ ಬುಕ್ ಮಾಡಿದಾಗ ಅವರು ಪ್ರಯಾಣ ಆರಂಭಿಸಿದ ಬಳಿಕ ನಿಗದಿತ ಸ್ಥಳಕ್ಕೆ, ನಿರ್ದಿಷ್ಟ ಸಮಯಕ್ಕೆ ತಲುಪಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಟ್ಯಾಕ್ಸಿ ಎಜೆನ್ಸಿಗಳು ತಾಂತ್ರಿಕ ಸೌಲಭ್ಯಗಳನ್ನು ಅಳವಡಿಸಿಕೊಳ್ಳಬೇಕೆಂದು ಸೂಚಿಸಿದ್ದರು.

ಸಂಸ್ಥೆಯ ಸಮವಸ್ತ್ರಗಳು ದುರುಪಯೋಗವಾಗದಂತೆ ನೋಡಿಕೊಳ್ಳಬೇಕು, ನೌಕರರುಕೆಲಸ ಬಿಟ್ಟಾಗ ಅವರಿಗೆ ನೀಡಲಾಗಿದ್ದ ಸಂಸ್ಥೆಯ ಗುರುತಿನ ಚೀಟಿ, ಸಮವಸ್ತ್ರವನ್ನು ವಾಪಸ್ ಪಡೆಯುವಂತೆ ಸಲಹೆ ನೀಡಿದರು.

ಡಂಝೋ, ಫೋರ್ಟರ್, ಪ್ಲಿಪ್ ಕಾರ್ಟ್ ಮುಂತಾದ ಡೆಲಿವರಿ ಪ್ಲಾಟ್‍ಫಾರಂಗಳಲ್ಲಿ ನಿಷೇಧಿತ ವಸ್ತುಗಳನ್ನು ಸರಬರಾಜು ಮಾಡದಂತೆ ಎಚ್ಚರವಹಿಸಬೇಕು. ಗ್ರಾಹಕರು ಬುಕ್ ಮಾಡಿರುವ ವಸ್ತುಗಳನ್ನು ಮಾತ್ರವೇ ಡೆಲಿವರಿ ಮಾಡತಕ್ಕದ್ದು. ತಮ್ಮ ತಮ್ಮ ಸಂಸ್ಥೆಯ ನೌಕರರಿಗೆ ಜಾಗೃತಿ ಉಂಟು ಮಾಡಲು ಅಗತ್ಯವಿದ್ದಲ್ಲಿ ಉಚಿತವಾಗಿ ಸಂಚಾರ ಪೊಲೀಸ್ ವತಿಯಿಂದ ತರಬೇತಿ ಕಾರ್ಯಗಳನ್ನು ಏರ್ಪಡಿಸುವುದಾಗಿ ಇದೇ ವೇಳೆ ತಿಳಿಸಲಾಯಿತು.

Similar News