ಕಬ್ಬಿಗೆ ಸೂಕ್ತ ಬೆಲೆ ನೀಡುವಲ್ಲಿ ಸರ್ಕಾರ ವಿಫಲ: ಸಂಸದ ಪ್ರತಾಪ್ ಸಿಂಹ ಕಚೇರಿಗೆ ರೈತರ ಮುತ್ತಿಗೆ

Update: 2022-12-05 14:25 GMT

ಮೈಸೂರು,ಡಿ.5: ಕಬ್ಬಿಗೆ ಸೂಕ್ತ ಎಫ್‍ಆರ್‍ಪಿ ದರ ಪರಿಷ್ಕರಣೆ ನಿಗದಿ ಮಾಡುವಲ್ಲಿ ಸರ್ಕಾರ ವಿಳಂಬ ಮಾಡುತ್ತಿದ್ದು, 14 ದಿನಗಳ ರೈತರ ಅಹೋರಾತ್ರಿ ಧರಣಿಗೆ ಸ್ಪಂದಿಸದೇ ನಿರ್ಲಕ್ಷ್ಯ ಮಾಡುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ನೂರಾರು ಕಾರ್ಯಕರ್ತರು ಸೋಮವಾರ ಬೆಳಿಗ್ಗೆ ಸಂಸದ ಪ್ರತಾಪ್ ಸಿಂಹ ಅವರ ಕಚೇರಿಗೆ ಮುತ್ತಿಗೆ ಹಾಕಿ ಸರ್ಕಾರದ ಗಮನ ಸೆಳೆದರು.

ನಗರದ ಜಲದರ್ಶಿನಿ ಅತಿಥಿಗೃಹದ ಆವರಣದಲ್ಲಿರುವ ಸಂಸದ ಪ್ರತಾಪ್ ಸಿಂಹ ಅವರ ಕಚೇರಿ ಮುಂಭಾಗ ಜಮಾಯಿಸಿದ ರೈತರು ರಾಜ್ಯ ಸರ್ಕಾರದ ವಿರುದ್ಧ ದಿಕ್ಕಾರ ಕೂಗಿದರು. ಕಬ್ಬು ಬೆಳೆಗಾರರು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಕಳೆದ 14 ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತಿದ್ದರೂ ರಾಜ್ಯ ಸರ್ಕಾರ ಯಾವುದೇ ತೀರ್ಮಾನ ಪ್ರಕಟಿಸದೆ ರೈತರನ್ನು ನಿರ್ಲಕ್ಷ್ಯ ಮಾಡುತ್ತಿದೆ. ಪ್ರತಾಪ್ ಸಿಂಹ ಅವರು ಆಡಳಿತ ಪಕ್ಷದ ಸಂಸದರಾಗಿ ನಮ್ಮೆಲ್ಲರ ಪ್ರತಿನಿಧಿಯಾಗಿದ್ದಾರೆ. ನಮ್ಮ ಒತ್ತಾಯಗಳ ಬಗ್ಗೆ ಕೂಡಲೇ ಸರ್ಕಾರದ ಗಮನ ಸೆಳೆದು ನ್ಯಾಯ ಕೊಡಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. 

ಕಬ್ಬಿನ ಎಫ್‍ಆರ್‍ಪಿ ದರವನ್ನು ಕೇಂದ್ರ ಸರ್ಕಾರ ರೈತರ ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ನಿಗದಿ ಮಾಡಿದೆ. ಸಕ್ಕರೆ ಇಳುವರಿ ಮಾನದಂಡವನ್ನು 10ರಿಂದ 10.25ಕ್ಕೆ ಏರಿಕೆ ಮಾಡಿದ್ದು, ಇದರಿಂದ ರೈತರಿಗೆ ನಷ್ಟವಾಗುತ್ತಿದೆ. ಕಬ್ಬಿನಿಂದ ಉತ್ಪಾದಿಸುವ ಇತರ  ಉತ್ಪನ್ನಗಳ ಲಾಭವನ್ನು ರೈತರಿಗೆ ಹಂಚಿಕೆ ಮಾಡಿ ಟನ್ ಕಬ್ಬಿಗೆ ಹೆಚ್ಚುವರಿ ದರ ನಿಗದಿ ಮಾಡಬೇಕು ಎಂದು ರೈತರು ಕೋರಿದರು.  

ಕಬ್ಬು ಕಟಾವು ವಿಳಂಬದ ಅವಧಿಯಲ್ಲಿ ನಾವು ಸಾಲಕ್ಕೆ ಬಡ್ಡಿ ಕಟ್ಟಬೇಕಾಗಿದೆ. ನೀವೂ ಕಟಾವು ವಿಳಂಬದ ಅವಧಿಗೆ ಬಡ್ಡಿ ಸೇರಿಸಿ ಹೆಚ್ಚುವರಿ ದರ ಕೊಡಬೇಕು. ಹತ್ತಾರು ವರ್ಷಗಳಿಂದ ಬಗ್ ಹುಕುಂ ಸಾಗುವಳಿ ಮಾಡುತ್ತಿರುವ ರೈತರಿಗೆ ಸಾಗುವಳಿ ಪತ್ರ ನೀಡಬೇಕು. ಅರಣ್ಯ ಭೂಮಿಯಲ್ಲಿ ವ್ಯವಸಾಯ ಮಾಡುತ್ತಿರುವ ರೈತರಿಗೆ ಸಾಗುವಳಿ ಪಟ್ಟಾವನ್ನು ಕೊಡಬೇಕು. ಕೃಷಿ ಸಾಲಕ್ಕೆ ಸಿಬಿಲ್ ಪರಿಗಣಿಸಬಾರದು ಎಂಬ ಬೇಡಿಕೆ ಪತ್ರ ನೀಡಿದ ರೈತರು. ಸಂಸದರು ಕೂಡಲೇ ಸರ್ಕಾರಕ್ಕೆ ಪತ್ರ ಬರೆದು ನಮ್ಮ ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ ಮುಂದಿನ ಚುನಾವಣೆಯಲ್ಲಿ ನಮ್ಮ ಹಳ್ಳಿಗಳಿಗೆ ಪ್ರವೇಶವಿಲ್ಲ ಎಂದು ಬಿತ್ತಿಫಲಕ ಹಾಕಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ಸಂಸದ ಪ್ರತಾಪ್ ಸಿಂಹ ಆಪ್ತ ಸಹಾಯಕರಿಗೆ ಮನವಿ:

ಸಂಸದ ಪ್ರತಾಪ್ ಸಿಂಹ ಕಚೇರಿಯಲ್ಲಿ ಇರಲಿಲ್ಲವಾದ್ದರಿಂದ ಅವರ ಆಪ್ತ ಸಹಾಯಕರಿಗೆ ಮನವಿ ನೀಡಲಾಯಿತು. ನಂತರ ಶಾಸಕ ಎಲ್.ನಾಗೇಂದ್ರ ಅವರ ಕಚೇರಿಗೆ ರೈತರು ತೆರಳಿದಾಗ ಸ್ವತಃ ಶಾಸಕ ಎಲ್.ನಾಂಗೇಂದ್ರ ಆಗಮಿಸಿ ರೈತರಿಂದ ಮನವಿ ಸ್ವೀಕರಿಸಿದರು. ನಂತರ ಪ್ರತಿಭಟನಾಕಾರರು ಶಾಸಕ ರಾಮದಾಸ್ ಕಚೇರಿಗೆ ತೆರಳಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಮುಖಂಡರಾದ ಬರಡನಪುರ ನಾಗರಾಜು, ಹಳ್ಳಿಕೆರೆ ಹುಂಡಿ ಭಾಗ್ಯರಾಜ್, ಹಾಡ್ಯ ರವಿ, ಕೋಟೆ ಮಾದಪ್ಪ, ಲಕ್ಷ್ಮೀಪುರ ವೆಂಕಟೇಶ್, ಡಿ.ಕಾಟೂರು ಮಹದೇವಪ್ಪ, ಅಂಬಳೆ ಮಂಜುನಾಥ್, ಕಿರಗಸೂರು ಶಂಕರ್ ಮುಂತಾದವರು ಇದ್ದರು.

ಶ್ರೀನಿವಾಸ ಪ್ರಸಾದ್‍ಗೆ ಮನವಿ: ನಂತರ ಚಾಮರಾಜನಗರ ಲೋಕಸಭಾ  ಕ್ಷೇತ್ರದ ಸಂಸದ ವಿ.ಶ್ರೀನಿವಾಸ ಪ್ರಸಾದ್ ಮನೆಗೆ ಪ್ರತಿಭಟನಾಕಾರರು ತೆರಳಿ ಮನವಿ ಸಲ್ಲಿಸಿದರು. 

ಕರ್ನಾಟಕ ರಾಜ್ಯಕ್ಕಿಂತ ಕಡಿಮೆ ಸಕ್ಕರೆ ಇಳುವರಿ ಬರುವ ಪಂಜಾಬ್ ರಾಜ್ಯದಲ್ಲಿ ಟನ್ ಕಬ್ಬಿಗೆ 3,300 ರೂ. ಉತ್ತರ ಪ್ರದೇಶದಲ್ಲಿ 3,500 ರೂ. ಮಹಾರಾಷ್ಟ್ರದಲ್ಲಿ 3,200 ರೂ ಮತ್ತು ಗುಜರಾತ್‍ನಲ್ಲಿ 4,400 ರೂ. ದರ ನೀಡಲಾಗುತ್ತಿದೆ. ತಮಿಳುನಾಡಿನಲ್ಲಿ ಕಬ್ಬು ಸಾಗಾಣಿಕೆ ವೆಚ್ಚವನ್ನು ಕಾರ್ಖಾನೆಗಳೇ ಭರಿಸುವ ನಿಯಮ ಜಾರಿಯಲ್ಲಿದೆ, ಆಯಾ ರಾಜ್ಯ ಸರ್ಕಾರಗಳೇ ಎಫ್‍ಆರ್‍ಪಿ ದರ ನಿಗದಿ ಮಾಡಿದ್ದಾರೆ. ನಮ್ಮ ರಾಜ್ಯದಲ್ಲಿ ಕಬ್ಬಿನ ಕಟಾವು, ಸಾಗಾಣಿಕೆ ವೆಚ್ಚವನ್ನು ಕಾರ್ಖಾನೆಯವರು ಮನಬಂದಂತೆ ಏರಿಕೆ ಮಾಡಿ ರೈತರನ್ನು ಸುಲಿಗೆ ಮಾಡುತ್ತಿದ್ದಾರೆ. 16 ತಿಂಗಳಾದರೂ ಕಬ್ಬು ಕಟಾವು ಮಾಡುತ್ತಿಲ್ಲ. ಇದರಿಂದ ಇಳುವರಿ ಕಡಿಮೆಯಾಗಿ ರೈತರಿಗೆ ನಷ್ಟವಾಗುತ್ತಿದೆ. ಈ ಬಗ್ಗೆ ಆಯಾ ಜಿಲ್ಲಾಧಿಕಾರಿಗೆ ದೂರು ನೀಡಿದರೂ ಕಾರ್ಖಾನೆ ಮಾಲೀಕರ ಮೇಲೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.

 ಬರಡನಪುರ ನಾಗರಾಜು,  ರೈತ ಮುಖಂಡ, ಮೈಸೂರು.

Similar News