ಪಿಎಸ್ಐ ಹಗರಣ: ಇಬ್ಬರು ಮಧ್ಯವರ್ತಿಗಳಿಗೆ ವಿಶೇಷ ಕೋರ್ಟ್‍ನಿಂದ ಜಾಮೀನು

Update: 2022-12-06 12:24 GMT

ಬೆಂಗಳೂರು, ಡಿ. 6: ಪಿಎಸ್ಐ  ನೇಮಕಾತಿ ಅಕ್ರಮ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಇಬ್ಬರು ಮಧ್ಯವರ್ತಿಗಳಿಗೆ ಭ್ರಷ್ಟಾಚಾರ ನಿರ್ಮೂಲನಾ ಕಾಯ್ದೆ ಅಡಿ ಸ್ಥಾಪಿಸಲಾಗಿರುವ ವಿಶೇಷ ಕೋರ್ಟ್, ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. 

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಸಿ.ಎನ್.ಶಶಿಧರ್ ಮತ್ತು ಬೆಂಗಳೂರು ಉತ್ತರ ತಾಲೂಕಿನ ಲಗ್ಗೆರೆಯ ಡಿ.ಎಸ್.ಸಿದ್ದರಾಜು ಪ್ರತ್ಯೇಕವಾಗಿ ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಪೀಠವು ಮಾನ್ಯ ಮಾಡಿದೆ. 

ಪಿಎಸ್ಐ ಪರೀಕ್ಷೆಯಲ್ಲಿ ಭಾಗಿಯಾಗಿದ್ದ ಅಭ್ಯರ್ಥಿ ಹಾಗೂ ಆರನೆ ಆರೋಪಿಯ ಸಂಬಂಧಿಯಾದ ಶಶಿಧರ್ ಅವರು ಮಧ್ಯವರ್ತಿಯಾಗಿ ಕೆಲಸ ಮಾಡಿದ್ದರು. ಆರನೆ ಆರೋಪಿಯಿಂದ 50 ಲಕ್ಷ ರೂ.ಸಂಗ್ರಹಿಸಿದ್ದ ಶಶಿಧರ್ ಅವರು ಚಂದ್ರಶೇಖರ್ ಎಂಬ ವ್ಯಕ್ತಿಯ ಮೂಲಕ 29ನೆ ಆರೋಪಿಗೆ ತಲುಪಿಸಿದ್ದರು ಎಂದು ಆರೋಪಿಸಲಾಗಿದೆ. ಶಶಿಧರ್ ಅವರು 2022ರ ಮೇ 9ರಿಂದ ನ್ಯಾಯಾಂಗ ಬಂಧನದಲ್ಲಿದ್ದರು. 

ಪಿಎಸ್ಸೈ ನೇಮಕಾತಿ ಅಕ್ರಮ ಪ್ರಕರಣದ ಎರಡನೆ ಆರೋಪಿ, ಏಳನೆ ಆರೋಪಿ, 13ನೆ ಆರೋಪಿಯು ತನಿಖೆಯ ಸಂದರ್ಭದಲ್ಲಿ ಸ್ವಯಂಪ್ರೇರಿತವಾಗಿ ಸಿದ್ದರಾಜು ಅವರು ಪಿಎಸ್ಸೈ ಕೆಲಸ ಮಾಡಲು ಮಧ್ಯವರ್ತಿಯಾಗಿ ಕೆಲಸ ಮಾಡಿದ್ದು, ಓಎಂಆರ್ ಶೀಟುಗಳನ್ನು ತಿದ್ದಲು ಸಹಾಯ ಮಾಡಿದ್ದಾರೆ ಎಂದು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಸಿದ್ದರಾಜು ಅವರು 2022ರ ಸೆ.16ರಂದು ನ್ಯಾಯಾಲಯಕ್ಕೆ ಶರಣಾಗಿದ್ದರು.  

Similar News