ಚಾಮರಾಜನಗರ: ಅಂತ್ಯಸಂಸ್ಕಾರ ಮಾಡಲು ಹಣವಿಲ್ಲದೇ ಪತ್ನಿ ಮೃತದೇಹವನ್ನು ಹೊತ್ತುಕೊಂಡು ನಡೆದ ಪತಿ!

ಪೊಲೀಸರಿಂದ ಅಂತ್ಯಸಂಸ್ಕಾರ

Update: 2022-12-08 17:38 GMT

ಚಾಮರಾಜನಗರ, ಡಿ.7: ಅಂತ್ಯ ಸಂಸ್ಕಾರ ಮಾಡಲು ಹಣವಿಲ್ಲದೇ ಪತ್ನಿಯ ಮೃತದೇಹವನ್ನು ಮೂಟೆಯಲ್ಲಿ ಹೊತ್ತೊಯ್ದ ಅಮಾನವೀಯ ಘಟನೆ ಚಾಮರಾಜನಗರ ಜಿಲ್ಲೆಯ ಯಳಂದೂರು ಪಟ್ಟಣದಲ್ಲಿ ವರದಿಯಾಗಿದೆ.

ಮಂಗಳವಾರ ರಾತ್ರಿ ಕಾಳಮ್ಮ  ಮೃತಪಟ್ಟಿದ್ದು, ಪತ್ನಿ ಮೃತದೇಹವನ್ನು ರವಿ  ಹೆಗಲ ಮೇಲೆ ಹೊತ್ತುಕೊಂಡು ಪಟ್ಟಣದ ಸುವರ್ಣವತಿ ನದಿ  ಕಡೆ ಅಂತ್ಯ ಸಂಸ್ಕಾರ ಮಾಡಲು ಹೋಗುತ್ತಿದ್ದ ವೇಳೆ ಸ್ಥಳೀಯರು ಗಮನಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ, ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಮೃತದೇಹವನ್ನು ಚಾಮರಾಜನಗರದ ಜಿಲ್ಲಾಸ್ಪತ್ರೆಯ ಶವಗಾರಕ್ಕೆ ಪರೀಕ್ಷೆಗೆ ಕಳುಹಿಸಿ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಯಳಂದೂರು ಪಟ್ಟಣದ ಅರಣ್ಯ ಇಲಾಖೆ ಕಚೇರಿ ಹತ್ತಿರದ ಆಲೆಮನೆಯಲ್ಲಿ ಕಳೆದ 15 ದಿನಗಳಿಂದ ರವಿ ಮತ್ತು ಆತನ ಪತ್ನಿ ಕಾಳಮ್ಮ ಉಳಿದುಕೊಂಡು ಪ್ಲಾಸ್ಟಿಕ್, ಗುಜರಿ ಸಾಮಗ್ರಿಗಳನ್ನು  ಸಂಗ್ರಹಿಸಿ ಮಾರಾಟ ಮಾಡಿ  ಜೀವನ ಸಾಗಿಸುತ್ತಿದ್ದರು‌. ಮಂಡ್ಯ ಮೂಲದ ಕಾಳಮ್ಮ(26) ಎಂಬಾಕೆ ಮೃತಳಾಗಿದ್ದು ಪತಿ ರವಿ ಮೂಟೆಯಲ್ಲಿ ಮೃತದೇಹ ಸಾಗಿಸುವಾಗ ಪೊಲೀಸರು ಮದ್ಯಪ್ರವೇಶಿಸಿ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರನ್ನಲಾಗಿದೆ.

''ನಮ್ಮವರು ಯಾರೂ ಇಲ್ಲ''

ಈ ಬಗ್ಗೆ ಆಸ್ಪತ್ರೆ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ರವಿ,  'ನಾವು ನಂಜನಗೂಡಿನಲ್ಲಿದ್ದೆವು. ವಾರದ ಹಿಂದೆಯೇ ಆಕೆ ಬಂದಿದ್ದಳು. ಮಂಗಳವಾರ ನಾನು ಬಂದು ನೋಡಿದಾಗ ಮೃತಪಟ್ಟಿದ್ದಳು.ನಮ್ಮವರು ಯಾರೂ ಇಲ್ಲ,  ನನ್ನ ಬಳಿ ಒಂದು ರೂಪಾಯಿಯೂ ಇರಲಿಲ್ಲ. ಮೃತದೇಹವನ್ನು ಹೊತ್ತುಕೊಂಡು ಬಂದೆ. ನಂತರ ಜನರಲ್ಲಿ ಹಣ ಕೇಳಿ ಅಂತ್ಯ ಸಂಸ್ಕಾರ ಮಾಡಲು ಯೋಚಿಸಿದ್ದೆ. ಅಷ್ಟರಲ್ಲಿ ಸ್ಥಳೀಯರು ಬಂದರು. ಪೊಲೀಸರೂ ಬಂದು ಮೃತದೇಹವನ್ನು ಜಿಲ್ಲಾಸ್ಪತ್ರೆಗೆ ತಂದರು' ಎಂದು ರವಿ ತಿಳಿಸಿದ್ದಾರೆ. 

'ವಿಷಯ ಗೊತ್ತಾಗುತ್ತಿದ್ದಂತೆಯೇ ಪೊಲೀಸರು ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಪ್ರಕರಣದ ಬಗ್ಗೆ ತನಿಖೆ ನಡೆಸುತ್ತೇವೆ' 

- ಶಿವಕುಮಾರ್,  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ 

ಇದನ್ನೂ ಓದಿ: ಹಾವೇರಿ | ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ; 40 ದಿನ ರೆಸಾರ್ಟ್‍ನಲ್ಲಿದ್ದು ವಿಮಾನದಲ್ಲಿ ಬಂದ ಗ್ರಾ.ಪಂ ಸದಸ್ಯರು!

Full View

Similar News