ಬೆಳ್ತಂಗಡಿ: ಚರ್ಮಗಂಟು, ಎಲೆಚುಕ್ಕಿ ರೋಗದ ಬಗ್ಗೆ ಮಾಹಿತಿ ಸಭೆ

Update: 2022-12-08 17:21 GMT

ಬೆಳ್ತಂಗಡಿ; ಚರ್ಮಗಂಟು ಹಾಗೂ ಎಲೆಚುಕ್ಕಿ ರೋಗ ಪೀಡಿತ ಪ್ರದೇಶಗಳ ಕುರಿತ ವಿವರವನ್ನು ಮುಂದಿನ ಒಂದು ವಾರದೊಳಗೆ ಆಯಾ ಗ್ರಾಮ ಪಂಚಾಯಿತಿಗಳ ಪಿಡಿಒಗಳು ತಾಪಂ ಮೂಲಕ ಸಂಬಂಧಪಟ್ಟ ಇಲಾಖೆಗಳಿಗೆ ನೀಡುವಂತೆ ಶಾಸಕ ಹರೀಶ್ ಪೂಂಜ ಸೂಚಿಸಿದರು.

ಅವರು ಗುರುವಾರ ಲಾಯಿಲದ ಸಂಭ್ರಮ ಸಭಾಭವನದಲ್ಲಿ ನಡೆದ ಚರ್ಮಗಂಟು ಹಾಗೂ ಎಲೆಚುಕ್ಕಿ ರೋಗದ ಬಗ್ಗೆ ಮಾಹಿತಿ ಸಭೆಯಲ್ಲಿ ಮಾತನಾಡಿದರು.

ಚರ್ಮಗಂಟು ರೋಗ ಕಂಡು ಬರುವ ಕಡೆಗಳಲ್ಲಿ ಪಂಚಾಯಿತಿ ವತಿಯಿಂದ ಫಾಗಿಂಗ್, ಸಹಕಾರ ಇಲಾಖೆ, ಸೇವಾ ಸಹಕಾರಿ ಬ್ಯಾಂಕ್ ಗಳು,  ಹಾಲು ಉತ್ಪಾದಕರ ಸಂಘಗಳ ಸಹಕಾರದ ಮೂಲಕ ಲಸಿಕೆ ಕಾರ್ಯಕ್ರಮಗಳನ್ನು ನೆರವೇರಿಸಿ ಕಾಯಿಲೆಯನ್ನು ನಿಯಂತ್ರಣಕ್ಕೆ ತರಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಎಲೆಚುಕ್ಕಿ ರೋಗದ ಮಾಹಿತಿ ಸಂಗ್ರಹಿಸಿ ರೋಗಪೀಡಿತ ತೋಟಗಳನ್ನು ಗುರುತಿಸಿ, ಸಾಮೂಹಿಕವಾಗಿ ಔಷಧಿ ಸಿಂಪಡಣೆ ಮಾಡಬೇಕು. ಅಗತ್ಯವಿದ್ದಲ್ಲಿ ದಾನಿಗಳ ಹಾಗೂ ರೈತರ ಸಹಕಾರದಲ್ಲಿ ಡ್ರೋನ್ ಮೂಲಕ ಔಷಧಿ ಸಿಂಪಡಿಸಲು ವ್ಯವಸ್ಥೆ ಮಾಡಲಾಗುವುದು. ಹಾಗೂ ಈ ಎರಡು ರೋಗಗಳ ಕುರಿತು ಪ್ರತಿ ತಿಂಗಳು ಸಭೆ ನಡೆಸಿ ವರದಿ ಸಂಗ್ರಹಿಸಲಾಗುವುದು ಎಂದರು.

335 ಪ್ರಕರಣ

ತಾಲೂಕು ಪಶುವೈದ್ಯಾಧಿಕಾರಿ ಆಡಳಿತ ಡಾ. ಮಂಜಾ ನಾಯ್ಕ್ ಮಾತನಾಡಿ ತಾಲೂಕಿನಲ್ಲಿ 335 ಜಾನುವಾರುಗಳಿಗೆ ಚರ್ಮಗಂಟು ರೋಗ ತಗಲಿದ್ದು 4 ಜಾನುವಾರುಗಳು ಸತ್ತಿವೆ. ಈಗಾಗಲೇ 11,000ಕ್ಕೂ ಮಿಕ್ಕಿ ರೋಗನಿರೋಧಕ ಚುಚ್ಚುಮದ್ದು ನೀಡಲಾಗಿದೆ. ಇತರ ಇಲಾಖೆಗಳ ಸಹಕಾರ ಪಡೆದು ತಾಲೂಕಿನಾದ್ಯಂತ ರೋಗನಿರೋಧಕ ಲಸಿಕೆ ನೀಡುವ ಕಾರ್ಯಕ್ರಮ ನಡೆಯುತ್ತಿದೆ ಎಂದರು.

ಎಲೆಚುಕ್ಕಿ ರೋಗ ವ್ಯಾಪಕ

2019ರಲ್ಲಿ ಮಲವಂತಿಗೆಯ ಎಳನೀರಿನಲ್ಲಿ ಆರಂಭವಾದ ಎಲೆಚುಕ್ಕಿ ರೋಗ ಈಗ ತಾಲೂಕಿನ ನೆರಿಯ ಹಾಗೂ ಚಾರ್ಮಾಡಿಗಳಲ್ಲಿ ಹೊರತು ಪಡಿಸಿ ಇತರ ಕಡೆ ಅಲ್ಲಲ್ಲಿ ಕಂಡುಬರುತ್ತಿದೆ.ಒಮ್ಮೆ ಔಷಧಿ ಸಿಂಪಡಿಸಿದರೆ ಅದರ ಪರಿಣಾಮ 35 ದಿನ ಮಾತ್ರ ಇರುತ್ತದೆ. ಇದು ಹೆಚ್ಚಾಗಿ ಪೊಟಾಷ್ ಅಂಶ ಕಡಿಮೆ ಇರುವ, ತೇವಾಂಶ ಅಧಿಕ ಇರುವ ತೋಟಗಳಲ್ಲಿ ಕಂಡು ಬರುತ್ತದೆ.ಉತ್ತಮ ಬಿಸಿಲಿನ ವಾತಾವರಣ ಮೂಡಿದರೆ ರೋಗ ಹರಡುವುದು ಕಡಿಮೆಯಾಗುತ್ತದೆ. ಈಗಾಗಲೇ ತಾಲೂಕಿಗೆ ಔಷಧಿ ಸಿಂಪಡಣೆಗೆ 1.30 ಲಕ್ಷ ರೂ. ಅನುದಾನ ಬಿಡುಗಡೆ ಗೊಂಡಿದೆ. ರೋಗದ ಬಗ್ಗೆ ಗ್ರಾಮ ಮಟ್ಟದಲ್ಲಿ ಮಾಹಿತಿ ಸಭೆಗಳನ್ನು ಏರ್ಪಡಿಸಲಾಗುವುದು . ಇಲಾಖೆ ಸೂಚಿಸಿದ ಔಷಧಿಗಳನ್ನು ಮಾತ್ರ ಸಿಂಪಡಿಸಬೇಕು ಎಂದು ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಶೇಖರ್ ಕೆ. ಎಸ್. ಹೇಳಿದರು.

ತಹಸೀಲ್ದಾರ್ ಪೃಥ್ವಿ ಸಾನಿಕಂ,ತಾಪಂ ಇಒ ಕುಸುಮಾಧರ ಬಿ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರಂಜಿತ್ ಕುಮಾರ್, ಸಹಕಾರಿ ಇಲಾಖೆಯ ಅಧಿಕಾರಿ ಪ್ರತಿಮಾ,ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಡಾ. ಕೆ.ಚಂದ್ರಶೇಖರ ಭಟ್, ಪಶುವೈದ್ಯಾಧಿಕಾರಿ ಡಾ. ರವಿಕುಮಾರ್, ಪಿಡಿಒಗಳು ಉಪಸ್ಥಿತರಿದ್ದರು.ತಾಪಂ ಸಂಯೋಜಕ ಜಯಾನಂದ ಲಾಯಿಲ ಕಾರ್ಯಕ್ರಮ ನಿರೂಪಿಸಿದರು.

ಬೆಳ್ತಂಗಡಿ ತಾಲೂಕಿನಲ್ಲಿ 61,000 ಜಾನುವಾರುಗಳಿದ್ದು ಇಲ್ಲಿನ ಅನೇಕರು ಹೈನುಗಾರಿಕೆ ಮೂಲಕ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ತಾಲೂಕಿನ ಎಲ್ಲಾ ಇಲಾಖೆಗಳ ಸಹಕಾರದಲ್ಲಿ ರೋಗಗಳನ್ನು ತಡೆಗಟ್ಟಲು ಕ್ರಮ ಕೈಗೊಳ್ಳಲಾಗುವುದು.

ಚರ್ಮ ಗಂಟು ರೋಗದಿಂದ ಕರುಗಳು ಸತ್ತರೆ 5,000 ರೂ, ಹಸು ಸತ್ತರೆ 20, 000ರೂ. ಉಳುವ ಎತ್ತು ಕೋಣ ಸತ್ತರೆ 30,000 ರೂ. ಪರಿಹಾರ ಧನ ಸಿಗುತ್ತದೆ. ಜಾನುವಾರುಗಳು ಸತ್ತರೆ ತಕ್ಷಣ ಸಂಬಂಧ ಪಟ್ಟ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಹರೀಶ್ ಪೂಂಜ ಹೇಳಿದರು.

Similar News