VIDEO- ಬಿಜೆಪಿಗೆ ಮತ ಹಾಕಿ ಎಂದು ಮುಸಲ್ಮಾನರಿಗೆ ಬೆದರಿಕೆ ಹಾಕಿದ ಶಾಸಕ ಪ್ರೀತಂ ಗೌಡ?

Update: 2022-12-11 14:00 GMT

ಹಾಸನ, ಡಿ.11: 'ಯಾರು ಕೆಲಸ ಮಾಡುತ್ತಾರೋ ಅವರಿಗೆ ವೋಟು ಹಾಕಲೇಬೇಕು. ಬಾಯಲ್ಲಿ ಅಣ್ಣಾ ಅಂತ ಕರೆದು ಕೊನೆಗೆ ನಾವು ಬಿಜೆಪಿಗೆ ವೋಟು ಹಾಕಲ್ಲ ಎಂದರೆ ಕೆಲಸ ಮಾಡುವವರಿಗೆ ಕೋಪ ಬರುತ್ತದೆ' ಎಂದು ಹಾಸನ ಕ್ಷೇತ್ರದ ಬಿಜೆಪಿ ಶಾಸಕ ಪ್ರೀತಂಗೌಡ ಆಕ್ರೋಶ ವ್ಯಕ್ತಪಡಿಸಿ, ಮಾತನಾಡಿರುವ ವೀಡಿಯೋ ಒಂದು ವೈರಲ್ ಆಗಿದೆ. 

ನಗರದ ಶ್ರೀನಗರ ಬಡಾವಣೆಯಲ್ಲಿ ರಾತ್ರಿ ವೇಳೆ ಕಗ್ಗತ್ತಲಲ್ಲಿ ನಿಂತು ಶಾಸಕ ಪ್ರೀತಂಗೌಡ ಅವರು ನನಗೆ ಮತ ಹಾಕುಲೇ ಬೇಕು ಎಂದು ನೇರವಾಗೇ ಬೆದರಿಕೆ ಹಾಕಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಆದರೆ ವಿಡಿಯೋದಲ್ಲಿ ಶಾಸಕರ ಮುಖ ಕಾಣಿಸುವುದಿಲ್ಲ. ಈ ವೈರಲ್ ವಿಡಿಯೋ ಶಾಸಕ ಪ್ರೀತಂಗೌಡ ಅವರದ್ದೇ ಎಂದು ಸ್ಥಳೀಯರು ಖಚಿತಪಡಿಸಿದ್ದಾರೆ. 

ವಿಡಿಯೋದಲ್ಲಿ ಏನಿದೆ? :  

ಬಾಯಲ್ಲಿ ಅಣ್ಣಾ ಅಂತ ಹೇಳಿ ಕೊನೆಗೆ ನಾವು ಬಿಜೆಪಿಗೆ ಓಟು ಹಾಕಲ್ಲ ಅಂತ ಹೇಳಿದ್ರೆ ಕೆಲಸ ಮಾಡಿರೋರಿಗೆ ಉರಿ ಹತ್ತಲ್ವಾ, ನೀವು ಬೆಳಿಗ್ಗೆಯಿಂದಲೂ ಕೂಲಿ ಹೋಗೋರುವರು ಅಂತಿರಾ, ಸಂಜೆ ಕೂಲಿ ಕೊಡದೇ ಹೋದ್ರೆ ಬಿಡ್ತಿರಾ, ಏನವ್ವಾ ನೀನು, ದುಡ್ಡು ಕೊಡು ಅಂತಿಯಾ, ನಾನು ಇಲ್ಲಿ ಕೆಲಸ ಮಾಡಿರ್ತಿನಿ, ಕೂಲಿ ಮಾಡಿರ್ತಿನಿ ಆಗೆ ಓಟು ಕೇಳ್ತಿನಿ. ನಾನು ಬಿಡಿಸಿ ಹೇಳ್ತಾ ಇದ್ದೀನಿ ಚಿಕ್ಕ ಮಕ್ಕಳಿಗೂ ಅರ್ಥ ಆಗ್ಲಿ ಅಂತಾ, ಇಲ್ಲಿ ಇರೋಲೆಲ್ಲರೂ ದೊಡ್ಡವರು ಓಟು ಹಾಕವ್ರು ಎಂದು ನಾನು ಮನಸ್ಸು ಪೂರ್ವಕವಾಗಿ ಹೇಳ್ತಿದಿನಿ, ನಮ್ಮ ಮುಸಲ್ಮಾನ್ ಸಹೋದರರನ್ನ ನಮ್ಮ ಸಹೋದರರ ರೀತಿಯಲ್ಲಿ​ ಪ್ರಮಾಣಿಕವಾಗಿ ಪ್ರಿತಿಯಿಂದ ಕಾಣ್ತಿದಿನಿ, ಮುಂದೇನು ಕಾಣ್ತೀನಿ. ಆದರೆ ನಾನು ಕೆಲಸ ಮಾಡಿದ ಸಂದರ್ಭದಲ್ಲಿ ನೀವೇನಾದ್ರು ಸಹಾಯ ಮಾಡ್ಲಿಲಾ ಅಂದ್ರೆ. ಇವರಿಗೆ ಎಷ್ಟು ಕೆಲಸ ಮಾಡಿದ್ರೆ ಇಷ್ಟೇ ನಮ್ಮ ಹಣೆಬರಹ ಬದಲಾಗಲ್ಲ ಅಂತ ಹೇಳಿ ಈ ಕಡೆ ತಿರುಗಿ ನೋಡಬಾರದು ಅನ್ನುವ ತೀರ್ಮಾನಕ್ಕೆ ಬರ್ತಿನಿ. ಆ ತೀರ್ಮಾನಕ್ಕೆ ಬರದೇ ಇರುವ ರೀತಿ ನೋಡ್ಕಳ್ಲೋದು ನಿಮ್ಮ ಜವಾಬ್ದಾರಿ.

​ಮೂರು ಸಾರಿ ನನಗೆ ಕೈಕೊಟ್ಟಿದೀರಿ, ನನ್ನ ಎಂಎಲ್ಎ ಚುನಾವಣೆಯಲ್ಲಿ ಓಟು ಹಾಕಿಲ್ಲ, ಕೌನ್ಸಿಲರ್ ಚುನಾವಣೆಯಲ್ಲಿ ಓಟು ಹಾಕಿಲ್ಲ, ಎಂಪಿ ಚುನಾವಣೆಯಲ್ಲಿ ಓಟು ಹಾಕಿಲ್ಲ. ಈಗ ಮತ್ತೆ ಐದು ವರ್ಷ ಆದ್ಮೇಲೆ ನನ್ನ ಚುನಾವಣೆ ಬರುತ್ತೆ. ಆ ಸಂದರ್ಭದಲ್ಲಿ ನೀವೇನಾದ್ರು ಕೈಕೊಟ್ರೆ ನಾನು ಕೈ, ಕಾಲು ಕೊಡ್ತಿನಿ, ಏಟಿಗೆ ಸಿಗೋದಿಲ್ಲ ಅರ್ಥ ಆಗ್ತಿದಿಯಾ ,ನನ್ನ ಮನೆಗೆ ಬಂದರೆ ಕಾಫಿ ಕುಡಿಸಿ ಕಳುಸ್ತಿನಿ, ಯಾವ ಕೆಲಸವನ್ನು ಮಾಡಿಕೊಡೋದಿಲ್ಲ ನೇರವಾಗಿ ಹೇಳ್ತಿದಿನಿ.

ರಸ್ತೆ, ಚರಂಡಿ, ನೀರು ಕೊಡ್ತಿನಿ ನನ್ನ ಧರ್ಮ ಅದು, ಒಬ್ಬ ಶಾಸಕನಾಗಿ ಮಾಡಬೇಕು ಮಾಡ್ತಿನಿ. ಇನ್ನು ಉಳಿದಂತ ಯಾವುದೇ ಕೆಲಸ ವೈಯಕ್ತಿಕವಾಗಿ ಮಾಡಲು ಆಗಲ್ಲ. ಇದರಲ್ಲಿ ಯಾವುದೇ ಮುಲಾಜಿಲ್ಲಾ. ಇವತ್ತೇ ನೀವೆಲ್ಲಾ ಸೇರಿ ತೀರ್ಮಾನ ಮಾಡಿಕೊಳ್ಳಿ ಎಂದರು.

​ಶಾಸಕರಿಗೆ ಒಂದೂವರೆ ಸಾವಿರ ಓಟು ಕೊಡ್ತಿನಿ ಅಂದರೆ ಇಲ್ಲಿಂದ ಹೊರಡುತ್ತೀನಿ, ಇಲ್ಲಾ ಹತ್ತು ನಿಮಿಷ ಚರ್ಚೆ ಮಾಡಿಕೊಳ್ಳಿ. ಯಾರೋ ದಳದವರು, ಕಾಂಗ್ರೆಸ್ ನವರು ಬರ್ತಾರೆ ಅಂತ, ಅವರು ಬಂದಾಗಲೆಲ್ಲಾ ಅವರ ಹಿಂದೆ ಸುಮ್ಮನೆ ಬಂದಿದ್ವಿ, ಮೆರವಣಿಗೆ ಹೋದ್ವಿ, ಸುಮ್ನೆ ಅವರ ಹಿಂದೆ ಹೋಗಿ ಓಟು ಕೇಳ್ಕಂಡು ಬಂದ್ವಿ ಅಂತ ಹೇಳ್ಬಿಟ್ರೆ. ನನಗೂ ಜನ ಇರ್ತಾರೆ ಇಲ್ಲಿ ಇರುವಂತಹವರು, ಅವರಿಗೆ ಮಾಡ್ಬೇಡಿ ನಾನು ಇದೆಲ್ಲಾ ಮಾಡಿಕೊಡ್ತಿನಿ ಅಂತಾರೆ.

ಮಾಡಿಕೊಡುತ್ತೇನೆ ಅಂತ ಹೇಳುವವರ ಮನೆಯಲ್ಲಿ ಮೂರು ಸಾರಿ ಮುಖ್ಯಮಂತ್ರಿ ಆಗಿದ್ರು. ದೊಡ್ಡಗೌಡ್ರು ಒಂದು ಸಾರಿ, ಕುಮಾರಣ್ಣ ಎರಡು ಸಾರಿ ಮುಖ್ಯಮಂತ್ರಿ ಆಗಿದ್ರು, ರೇವಣ್ಣ ಅವರು ನಾಲ್ಕು ಸಾರಿ ಮಂತ್ರಿಯಾಗಿದ್ರು. ಯಾವತ್ತಾದ್ರೂ ಶ್ರೀನಗರಕ್ಕೆ ಬಂದವ್ರಾ?, ನೋಡಿದಿರಾ ಅವರ ಮುಖನಾ?. ಈಗ ಬರ್ತಾರೆ, ರೆಡಿಯಾಗಿ ಬಂದಾಗ ಏನ್ ಹೇಳ್ಬೇಕು ಅದನ್ನು ಹೇಳಲು ಯೋಚನೆ ಮಾಡ್ಕಂಡಿರಿ, ಅರ್ಥ ಆಗ್ತದಿಯಾ ನಾನು ಹೇಳ್ತಿರೋದು. ನಾನು ಎಂಎಲ್ಎ ಆಗಿ ಆಗಿರೋದು ನಾಲ್ಕು ವರ್ಷ. ನಾಲ್ಕು ವರ್ಷದಲ್ಲಿ ನಿಮಗೆ ಎಲ್ಲಾನೂ ರೆಡಿ ಮಾಡಿದ್ದೀನಿ. ಯುಜಿಡಿ ಮಾಡಬೇಕು ಬೇಡವೋ ಅಂತ ಕೇಳಕ್ಕೆ ಬಂದಿದ್ದೀನಿ. ಓಟು ಹಾಕದಿದ್ರೆ ಯುಜಿಡಿ ಕಾಮಗಾರಿ ಮಾಡಲ್ಲ ಅಂತ ನೇರವಾಗಿ ಹೇಳಿದ ಶಾಸಕ ಪ್ರೀತಂಗೌಡ ಅವರು, ಅವರು ಬರೋದು ನಾನು ಮಾಡ್ತೀನಿ ಅಂತ. ಇಲ್ಲಿ ತನಕ ಏನ್ ಮಾಡ್ತಿದ್ರು ಪ್ರಧಾನಮಂತ್ರಿ ಆಗಿದ್ದವರು, ಮೂರು ಸಾರಿ ಮುಖ್ಯಮಂತ್ರಿ ಆಗಿದ್ದವರು, ನಾಲ್ಕು ಭಾರಿ ಮಂತ್ರಿಯಾಗಿದ್ದವರು ಈಗ ಚುನಾವಣೆ ಬಂದಂತಹ ಸಂದರ್ಭದಲ್ಲಿ, ಅವರು ಬಂದಾಗ ಅದು ಮಾಡಿ ಕೊಡ್ತಾರೆ, ಇದು ಮಾಡಿ ಕೊಡ್ತಾರೆ ಅಂತಾರೆ, ಅವರಿಗೆ ಯಾವ ಅಧಿಕಾರನೂ ಇಲ್ಲಾ. ಶಾಸಕ ನಾನು, ಮುನ್ಸಿಪಾಲಿಟಿ ಅಧ್ಯಕ್ಷ ಮೋಹನಣ್ಣ, ಮುಖ್ಯಮಂತ್ರಿ ಬೊಮ್ಮಯಿ ಅವರು, ಪ್ರಧಾನಮಂತ್ರಿ ನರೇಂದ್ರಮೋದಿಯವರು ಎಂದು ಪರೋಕ್ಷವಾಗಿ ಶಾಸಕ ಪ್ರೀತಂಗೌಡ ಅವರು ಬೆದರಿಕೆ ಹಾಕುವುದು ವಿಡಿಯೋದಲ್ಲಿ ದಾಖಲಾಗಿದೆ. 

ಸದ್ಯ ವೈರಲ್ ಆಗುತ್ತಿದ್ದು, ಶಾಸಕರ ವಿರುದ್ಧ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

Full View

Similar News