ಓ ಮೆಣಸೇ...

Update: 2022-12-11 19:30 GMT

ತಾಕತ್ತಿದ್ದರೆ ಸಿದ್ದರಾಮಯ್ಯ ನನ್ನ ಮುಂದೆ ಗೋಮಾಂಸ ತಿನ್ನಲಿ- ಪ್ರಭು ಚೌವ್ಹಾಣ್, ಸಚಿವ
ನಿಮ್ಮ ನರಭಕ್ಷಕ ಪಾಳಯದಲ್ಲಿ ಗುಟ್ಟಾಗಿ ಗೋಮಾಂಸ ತಿನ್ನುವವರಿಗೆ ಇಂತಹ ಸವಾಲು ಹಾಕಿ.

ನೂರಾರು ಜನ ಬಿಜೆಪಿಗೆ ಬರುತ್ತಾರೆ ಅವರ ಜಾತಕ, ಕುಂಡಲಿ ನೋಡಿ ಬಿಜೆಪಿಗೆ ಸೇರಿಸಿಕೊಳ್ಳಲು ಆಗುತ್ತದೆಯೇ?- ಪ್ರತಾಪ ಸಿಂಹ, ಸಂಸದ
ಗುಣ ನೋಡಿ ಪಕ್ಷಕ್ಕೆ ಸೇರಿಸುವ ಸಂಸ್ಕಾರ ನಿಮ್ಮ ಪಕ್ಷದಲ್ಲಿ ಇದ್ದಿದ್ದರೆ ನೀವು ಎಲ್ಲಿರುತ್ತಿದ್ದಿರಿ?

ರಾಜಕೀಯ ಕಾರಣಕ್ಕೆ ನನ್ನ ಹೆಸರೂ ರೌಡಿ ಲಿಸ್ಟ್‌ನಲ್ಲಿತ್ತು- ಸಿ.ಟಿ.ರವಿ, ಶಾಸಕ
ರಾಜಕೀಯ ಪ್ರಭಾವ ಬಳಸಿ ಪಟ್ಟಿಯಿಂದ ಹೆಸರು ತೆಗೆಸಿ ನಿರಾತಂಕವಾಗಿ ರೌಡಿ ಸಂಸ್ಕೃತಿಯನ್ನು ಮುಂದುವರಿಸುತ್ತಿದ್ದೀರಾ?

ನಮ್ಮ ದೇಶವನ್ನು ಕೆಣಕಲು ಬಂದರೆ ಸುಮ್ಮನೆ ಬಿಡುವುದಿಲ್ಲ - ರಾಜನಾಥ್ ಸಿಂಗ್, ಕೇಂದ್ರ ಸಚಿವ
ಕೆಣಕುವವರು ಹಿಮಾಚಲ ಪ್ರದೇಶವನ್ನು ಆವರಿಸಿದ್ದಾಗಿದೆ. ಇನ್ನೇನು ಅವರು ದಿಲ್ಲಿಗೆ ಬಂದು ಕೆಣಕಬೇಕೆನ್ನುತ್ತೀರಾ?

ಕರ್ನಾಟಕದಲ್ಲಿ ಸಹೋದರರಂತೆ ಬಾಳುವ ಕನ್ನಡಿಗರು-ಮರಾಠಿಗರ ನಡುವೆ ಹುಳಿ ಹಿಂಡುವ ಕೆಲಸವನ್ನು ಮಹಾರಾಷ್ಟ್ರ ಸಚಿವರು ಮಾಡುತ್ತಿದ್ದಾರೆ- ಜಗದೀಶ್ ಶೆಟ್ಟರ್, ಮಾಜಿ ಸಚಿವ
ಹುಳಿ ಹಿಂಡುವುದು ನಿಮ್ಮ ಜನ್ಮ ಸಿದ್ಧ ಹಕ್ಕಾಗಿರುವಾಗ ಇತರರಿಗೆ ಆ ಉಸಾಬರಿ ಯಾಕೆ?

ದೇಶ ಭಕ್ತಿಯ ಶಿಕ್ಷಣಕ್ಕೆ ಆದ್ಯತೆ ದೊರೆಯಬೇಕು- ಕೋಟ ಶ್ರೀನಿವಾಸ ಪೂಜಾರಿ, ಸಚಿವ
ಅದಕ್ಕೆ ಮೊದಲು ಸಂಘ ಭಕ್ತಿ, ಅಂಧ ಭಕ್ತಿ ಇತ್ಯಾದಿಯನ್ನು ತೊಲಗಿಸುವ ಶಿಕ್ಷಣ ತರಬೇಕು.

ಇಂದಿನ ರೌಡಿಗಳೇ ಮುಂದಿನ ಬಿಜೆಪಿ ನಾಯಕರು- ಕಾಂಗ್ರೆಸ್
ಹಿಂದಿನ ರೌಡಿಗಳು ಇಂದು ರೌಡಿಗಳೂ ಹೌದು, ನಾಯಕರೂ ಹೌದು. ಅದು ಪಕ್ಷಾತೀತ ಸತ್ಯ.

ಗೋವನ್ನು ಮಾತೆ ಎಂದು ಪೂಜಿಸುವ ಬಿಜೆಪಿ ಗೋವಾದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಯಾಕೆ ಜಾರಿಗೊಳಿಸಿಲ್ಲ- ಸಿ.ಎಂ.ಇಬ್ರಾಹೀಂ, ಜೆಡಿಎಸ್ ಅಧ್ಯಕ್ಷ
ಅಧಿಕಾರವೇ ದೇವರೆಂದ ಮೇಲೆ ಅದಕ್ಕಾಗಿ ತಂದೆ ತಾಯಿ ಇತ್ಯಾದಿ ಎಲ್ಲವನ್ನೂ ತ್ಯಾಗ ಮಾಡಲು ಸನ್ನದ್ಧರಾಗಿರಬೇಕಲ್ಲವೇ?

ಸುರತ್ಕಲ್ ಟೋಲ್‌ಗೇಟ್ ಹಿಂದಿನ ಸರಕಾರದ ಪಾಪದ ಕೂಸು- ಸನೀಲ್ ಕುಮಾರ್, ಸಚಿವ
ನಿಮ್ಮ ಸಿದ್ಧಾಂತದ ಅಸ್ತಿತ್ವಕ್ಕೂ ಈ ಮಾತು ಅನ್ವಯಿಸುತ್ತದೆ.

ಪಂಚಮಸಾಲಿ 3 ಪೀಠಗಳೂ ಒಂದೇ, ಎಲ್ಲರಿಗೂ ಮೀಸಲು ಸಿಗಲಿ- ಮುರುಗೇಶ್ ನಿರಾಣಿ, ಸಚಿವ
ವರ್ಣವ್ಯವಸ್ಥೆಯನ್ನು ಆಧರಿಸಿದ ಪರಂಪರಾಗತ ಮೀಸಲಾತಿಯನ್ನು ಕೊನೆಗೊಳಿಸಿಬಿಟ್ಟರೆ ಮತ್ತೆ ಯಾರಿಗೂ ಯಾವುದೇ ಸರಕಾರಿ ಮೀಸಲಾತಿಯ ಅಗತ್ಯವಿಲ್ಲ.

ಭಾರತೀಯ ಕ್ರಿಕೆಟ್ ಟೀಮ್‌ನಲ್ಲೂ ಮೀಸಲಾತಿ ಜಾರಿಯಾಗಬೇಕು- ಚೇತನ್ ಅಹಿಂಸಾ, ನಟ
ಈಗಾಗಲೇ ಮೇಲ್ಜಾತಿಯವರಿಗೆ ಶೇ.50ಕ್ಕಿಂತ ಹೆಚ್ಚಿನ ಅನಧಿಕೃತ ಮೀಸಲಾತಿ ಇದೆಯಲ್ಲ ?

ಸಿದ್ದರಾಮಯ್ಯರನ್ನು ಸಿಎಂ ಮಾಡುತ್ತೇವೆ ಎಂದರೆ ಉಳಿದ ಆಕಾಂಕ್ಷಿಗಳಿಗೆ ನೋವಾಗಬಹುದು - ಕೆ.ಎಚ್.ಮುನಿಯಪ್ಪ, ಕಾಂಗ್ರೆಸ್ ನಾಯಕ
ಯಾರಿಗೂ ನೋವಾಗಬಾರದೆಂದಾದರೆ ಕಾಂಗ್ರೆಸ್ ಚುನಾವಣಾ ರಾಜಕೀಯದಿಂದಲೇ ದೂರ ಉಳಿಯಬೇಕು.

ತಮಿಳುನಾಡಿನಲ್ಲಿ ಡಿಎಂಕೆ ಪಕ್ಷವನ್ನು ವಿರೋಧಿಸುವವ ನಾನು ಮಾತ್ರ ಅನಿಸುತ್ತದೆ - ಸುಬ್ರಮಣಿಯನ್ ಸ್ವಾಮಿ, ಬಿಜೆಪಿ ಮುಖಂಡ
ನೀವು ವಿರೋಧಿಸುತ್ತಿರುವ ತನಕ ಅಲ್ಲಿಯ ಜನತೆ, ಡಿಎಂಕೆ ಜನಪರ ಪಕ್ಷವೆಂದು ನಂಬಿಕೊಂಡಿರುತ್ತಾರೆ.

ಗೋಡೆ ಬರಹ ಬರೆಯುವವರು ಹೇಡಿಗಳು - ಕೆ.ಎಸ್.ಈಶ್ವರಪ್ಪ, ಶಾಸಕ
ಹತಾಶ ಗೊಣಗಾಟವೇ ಭಾಗ್ಯವೆಂದು ಹಣೆಬರಹ ಬರೆದವರ ಬಗ್ಗೆ ಏನಂತೀರಿ?

ನನ್ನ ರಾಜ್ಯದಲ್ಲಿ ಹೆಣ್ಣು ಮಕ್ಕಳನ್ನು 35 ತುಂಡುಗಳಾಗಿ ಕತ್ತರಿಸಲು ಯಾರಿಗೂ ಅವಕಾಶ ನೀಡುವುದಿಲ್ಲ- ಶಿವರಾಜ್ ಸಿಂಗ್ ಚೌಹಾಣ್, ಮಧ್ಯಪ್ರದೇಶ ಸಿಎಂ
ಈ ವರ್ಷದ ಮೊದಲ ಆರು ತಿಂಗಳಲ್ಲಿ ನಿಮ್ಮ ರಾಜ್ಯದಲ್ಲಿ ದಾಖಲಾಗಿರುವ 217 ಅತ್ಯಾಚಾರ ಪ್ರಕರಣಗಳನ್ನು ಕಂಡರೆ, ನೀವು ಕೇವಲ ತುಂಡರಿಸುವುದನ್ನು ಮಾತ್ರ ತಡೆದು ಬೇರೆಲ್ಲವನ್ನೂ ಪ್ರೋತ್ಸಾಹಿಸಿರುವಂತಿದೆಯಲ್ಲಾ?

ಬಿಜೆಪಿ ದೇಶ ಭಕ್ತರಿರುವ ಪಕ್ಷ - ರೇಣುಕಾಚಾರ್ಯ, ಶಾಸಕ
ದ್ವೇಷ ಭಕ್ತರು ಎಂದು ಸ್ಪಷ್ಟವಾಗಿ ಉಚ್ಚರಿಸಬಾರದೇ ?

ಚಾಮರಾಜಪೇಟೆಗೆ ನಾನು ಮಗ, ಸಿದ್ದರಾಮಯ್ಯ ಅಳಿಯ- ಝಮೀರ್ ಅಹ್ಮದ್, ಶಾಸಕ
ಅಂದರೆ ಅವರು ಅಲ್ಲಿಗೆ ಬಂದರೆ ಒಂದೇ ದಿನದಲ್ಲಿ ಮರಳಿ ಹೋಗಬೇಕೇ ?

ನಮ್ಮ ದೇಶ ಮಾದಕ ವಸ್ತು ಬಳಕೆದಾರ ದೇಶವಾಗಿ ಹೊರಹೊಮ್ಮುತ್ತಿದೆಯೇ ಎಂಬುದನ್ನು ಅಧಿಕಾರಿಗಳು ಪತ್ತೆ ಹಚ್ಚಬೇಕು- ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವೆ
ಕೋಮುವಾದದ ಅಮಲು ಹಂಚುವವರನ್ನು ಹದ್ದುಬಸ್ತಿನಲ್ಲಿಟ್ಟರೆ ಬೇರೆಲ್ಲ ಅಮಲು ವ್ಯಸನಗಳನ್ನು ಸುಲಭವಾಗಿ ಹತ್ತಿಕ್ಕಬಹುದು

ಪ್ರತೀ ಚುನಾವಣೆಯಲ್ಲೂ ಒಂದೊಂದು ಕ್ಷೇತ್ರಕ್ಕೆ ಹೋಗಲು ನಾನೇನು ಟೂರಿಂಗ್ ಟಾಕೀಸ್ ಅಲ್ಲ- ಕುಮಾರಸ್ವಾಮಿ, ಮಾಜಿ ಸಿಎಂ
ಜೆಡಿಎಸ್‌ನಲ್ಲೇ ಇದ್ದು ಬಿಜೆಪಿ ಜೊತೆ ಪಾಲುದಾರಿಕೆ ಮಾಡುವ ಹಳೆಯ ನೀತಿಯಲ್ಲೇ ಸ್ಥಿರವಾಗಿರುತ್ತೀರಾ?

ಸಂಸತ್ತಿನ ಚಳಿಗಾಲದ ಅಧಿವೇಶನವನ್ನು ಫಲಪ್ರದಗೊಳಿಸಲು ಸಾಮೂಹಿಕ ಪ್ರಯತ್ನ ಮಾಡಬೇಕು- ನರೇಂದ್ರ ಮೋದಿ, ಪ್ರಧಾನಿ
ಪ್ರತಿಪಕ್ಷ ಮುಕ್ತ ಭಾರತ ನಿರ್ಮಿಸುವ ಯೋಜನೆಗೇನಾಯಿತು?

ಕಳೆದ ಹತ್ತು ವರ್ಷಗಳಿಂದ 'ನರ-ಮಾನಸಿಕ' ರೋಗಿಗಳ ಸಂಖ್ಯೆ ತುಂಬಾ ಹೆಚ್ಚಿದೆ. - ಕೆ. ಸುಧಾಕರ್, ಸಚಿವ
ಹತ್ತಲ್ಲ, ಎಂಟು ವರ್ಷಗಳಿಂದ.

ಕಾಂಗ್ರೆಸ್ ಜನಸಂಖ್ಯೆ ನಿಯಂತ್ರಣ ಕಾಯ್ದೆ ತಂದಿದ್ದರೆ ನಾನು 4 ಮಕ್ಕಳ ತಂದೆಯಾಗುತ್ತಿರಲಿಲ್ಲ: ರವಿ ಕಿಶನ್, ಬಿಜೆಪಿ ಸಂಸದ
ಕಾಂಗ್ರೆಸ್‌ನವರು ನೆಹರೂ ಕಾಲದಲ್ಲೇ ಸಂತಾನ ನಿಯಂತ್ರಣ ಕಾಯ್ದೆಯನ್ನು ಜಾರಿಗೊಳಿಸಿದ್ದರೆ ನೀವೇ ಹುಟ್ಟಿರುತ್ತಿರಲಿಲ್ಲ.

ಟಿಕೆಟ್ ನೀಡುವ ವೇಳೆ ಹೊಸಬರಿಗೆ ಆದ್ಯತೆ - ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
ಹಾಗಾದರೆ ನಿಮಗೆ ಟಿಕೆಟ್ ಸಿಗುವ ಸಾಧ್ಯತೆ ಇಲ್ಲವೇ?

ಡಾ.ಅಂಬೇಡ್ಕರ್ ಪುತ್ಥಳಿ ಮೂಲಕ ಅವರ ಸತ್ಕರ್ಮಗಳನ್ನು ಅರಿತು ಅಳವಡಿಸಿಕೊಳ್ಳುವಂತಾಗಬೇಕು- ಥಾವರ್‌ಚಂದ್ ಗೆಹ್ಲೋಟ್, ರಾಜ್ಯಪಾಲ
ಅಂಬೇಡ್ಕರ್ ಬರೆದ ಪುಸ್ತಕಗಳ ಮೂಲಕ ಬೇಡವೇ?

ಜಮ್ಮು-ಕಾಶ್ಮೀರದ ಚುನಾವಣೆಯಲ್ಲಿ ಸರಕಾರ ಹಾಗೂ ಭದ್ರತಾ ಪಡೆಗಳು ಹಸ್ತಕ್ಷೇಪ ಮಾಡಬಾರದು - ಫಾರೂಕ್ ಅಬ್ದುಲ್ಲಾ, ಎನ್‌ಸಿ ಮುಖ್ಯಸ್ಥ
ಹಸ್ತಕ್ಷೇಪದ ಧೈರ್ಯದಿಂದಲೇ ಚುನಾವಣೆ ಘೋಷಿಸುತ್ತಾರೆ.

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...