ಚಳಿಗಾಲದ ಅಧಿವೇಶದಲ್ಲಿ ವಕೀಲರ ರಕ್ಷಣಾ ಮಸೂದೆ ಮಂಡನೆ; ವಕೀಲರ ಸಂಘದ ಮನವಿಗೆ ಸಿಎಂ ಬೊಮ್ಮಾಯಿ ಸ್ಪಂದನೆ

Update: 2022-12-11 18:37 GMT

ಬೆಂಗಳೂರು, ಡಿ. 11:  ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ವಕೀಲರ ರಕ್ಷಣಾ ಮಸೂದೆಯನ್ನು ಮಂಡಿಸುವುದಾಗಿ ವಕೀಲರ ಸಂಘದ  ನಿಯೋಗಕ್ಕೆ ಇಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

ಅವರು ಇಂದು ತಮ್ಮನ್ನು ಭೇಟಿಯಾಗಿ ಮನವಿ ಸಲ್ಲಿಸಿದ ವಕೀಲರ ಸಂಘದ ನಿಯೋಗಕ್ಕೆ ಈ ವಿಷಯ ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ಕರ್ತವ್ಯ ನಿರತ ವಕೀಲರ ಮೇಲೆ  ದೌರ್ಜನ್ಯಗಳು ಹೆಚ್ಚುತ್ತಿದ್ದು, ಅನೇಕರನ್ನು ಕೊಲ್ಲಲಾಗಿದೆ. ಈ ಹಿನ್ನೆಲೆಯಲ್ಲಿ ವಕೀಲರ ರಕ್ಷಣಾ ಕಾಯ್ದೆಯ ಕರಡು ಮಸೂದೆಯನ್ನು ಡಿಸೆಂಬರ್ 18 ರಿಂದ ಪ್ರಾರಂಭವಾಗುತ್ತಿರುವ ಅಧಿವೇಶನದಲ್ಲಿ ಎರಡೂ ಸದನಗಳಲ್ಲಿ ಮಂಡಿಸುವಂತೆ ಮುಖ್ಯಮಂತ್ರಿಗಳನ್ನು  ವಕೀಲರ ಸಂಘ, ಬೆಂಗಳೂರು ಹಾಗೂ ರಾಜ್ಯದ ವಿವಿಧ ವಕೀಲ ಸಂಘಗಳು ಕೋರಿವೆ. 

ನವೆಂಬರ್ 5 ರಂದು ನಡೆದ ವಕೀಲರ ಸಂಘದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು  ಈ ಬಗ್ಗೆ ಭರವಸೆ ನೀಡಿದ್ದರು. ಕಾಯ್ದೆಯ ಅಂತಿಮ ಕರಡು ಕಾನೂನು ಇಲಾಖೆಯಲ್ಲಿರುವುದಾಗಿ ಸಂಘವು ಮನವಿ ಪತ್ರದಲ್ಲಿ ತಿಳಿಸಿದೆ. 

ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾ ರೆಡ್ಡಿ, ಕಾರ್ಯದರ್ಶಿ ಟಿ. ಜಿ.ರವಿ, ಖಜಾಂಚಿ ಹರೀಶ್ ಎಂ.ಟಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು

Similar News