ಕಾಡಾನೆ ದಾಳಿಯಿಂದಾದ ಜೀವ ಹಾನಿ- ಬೆಳೆಹಾನಿ ಪರಿಹಾರ ದ್ವಿಗುಣ: ಸಚಿವ ಕೆ.ಗೋಪಾಲಯ್ಯ

Update: 2022-12-12 08:47 GMT

ಹಾಸನ: ಡಿ.12: ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಕಾಡಾನೆ ದಾಳಿಯಿಂದ  ಉಂಟಾಗುತ್ತಿರುವ ಜೀವ ಹಾನಿ ,ಅಂಗ ವೈಕಲ್ಯತೆ , ಬೆಳೆಹಾನಿಗಳಿಗೆ ನೀಡುತ್ತಿರುವ ಪರಿಹಾರವನ್ನು ದ್ವಿಗುಣಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ ಎಂದು  ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ ಗೋಪಾಲಯ್ಯ ಅವರು ತಿಳಿಸಿದ್ದಾರೆ.

ಸಮಾಜ ಕಲ್ಯಾಣ ಇಲಾಖೆ ,ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವತಿಯಿಂದ ಅರಕಲಗೂಡು ತಾಲ್ಲೂಕಿನ ಹೊನ್ನೇನಹಳ್ಳಿಯಲ್ಲಿ 25 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ  ಶ್ರೀ ಮತಿ ಇಂದಿರಾ ಗಾಂಧಿ ವಸತಿ ಶಾಲೆ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು

ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಅಧ್ಯಕ್ಷತೆಯಲ್ಲಿ ಆನೆ ಹಾವಳಿ ತಡೆ ಕುರಿತು ಉನ್ನತ ಮಟ್ಟದ ಸಭೆ ಕರೆಯಲಾಗಿದೆ. ಜಿಲ್ಲೆಯ ಕಟ್ಟೆಪುರ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಗಳಲ್ಲಿ ಆನೆ ಕ್ಯಾಂಪ್ ತೆರೆಯಲು ಅನುಮತಿ  ನೀಡಿಲಾಗಿದೆ ಎಂದು  ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದರು.

ಪುಂಡಾನೆಗಳಿಗೆ ರೆಡಿಯೋ‌ ಕಾಲರ್ ಅಳವಡಿಕೆ, ಸೌರ ಬೇಲಿ ನಿರ್ಮಾಣಕ್ಕೆ ಸಬ್ಸಿಡಿ ಶೇ 75% ಏರಿಕೆ ಸೇರಿದಂತೆ ಹಲವು ಪ್ರಮುಖ ನಿರ್ಣಯ ಕೈಗೊಳ್ಳಲಾಗಿದೆ ಎಂದು ಸಚಿವರು ಹೇಳಿದರು.

ಹೊನ್ನೇನಹಳ್ಳಿಯಂತಹ ಕುಗ್ರಾಮದಲ್ಲಿ  ಒಂದುವರೆ ವರ್ಷದಲ್ಲಿ  25 ಕೋಟಿ ರೂ ವೆಚ್ಚದಲ್ಲಿ ಇಂತಹ ಸುಸಜ್ಜಿತವಾದ ಶಾಲೆ ನಿರ್ಮಾಣ ಗೊಂಡಿರುವುದು ಸರ್ಕಾರ ಶಾಲಾ ಶಿಕ್ಷಣಕ್ಕೆ ನೀಡಿರುವ ಆದ್ಯತೆಗೆ ಸಾಕ್ಷಿಯಾಗಿದೆ ಎಂದರು.

ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಶಿಕ್ಷಣ ಒದಗಿಸುವುದು ಸರ್ಕಾರದ ಉದ್ದೇಶ ಜೊತೆಗೆ  ಸ್ಥಳೀಯ ಶಾಸಕರು  ಅಪಾರ  ಕಾಳಜಿ ವಹಿಸಿದ ಕಾರಣ ಇಂತಹ ಶಾಲೆ  ನಿರ್ಮಾಣವಾಗುತ್ತಿದೆ ಎಂದರು.

ವಿದ್ಯಾರ್ಥಿಗಳು ಸಂಸ್ಕಾರ ‌ಮತ್ತು ಸಂಸ್ಕೃತಿ ಕಲಿಸಬೇಕು. ಬಡ ಮಕ್ಕಳಿಗೆ ಗುಣಮಟ್ಟದ ವಿದ್ಯಾಭ್ಯಾಸ ದೊರೆಯಬೇಕು ಎಂದು ಸಚಿವರು ಹೇಳಿದರು.

ತಾಲೂಕಿನಲ್ಲಿ ಐದು ಕಡೆ ಇಂತಹುದೇ ಅತ್ಯಂತ ಉತ್ತಮ ಶಿಕ್ಷಣ ಸಂಸ್ಥೆ ಪ್ರಾರಂಭವಾಗುತ್ತಿರುವುದು ಶಾಸಕರಾಸ ಎ.ಟಿ ರಾಮಸ್ವಾಮಿ ಅವರ ಕಾಳಜಿ ತೋರುತ್ತದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಸಕರಾದ ಎ.ಟಿ ರಾಮಸ್ವಾಮಿ ಅವರು ಮಾತನಾಡಿ  ಅರಕಲಗೂಡು ತಾಲ್ಲೂಕಿನಲ್ಲಿ  ಶಿಕ್ಷಣ   ಹಾಗೂ ಕುಡಿಯುವ ನೀರಿನ ಯೋಜನೆಗೆ  ಆಧ್ಯತೆ ನೀಡಲಾಗುತ್ತಿದೆ   ಎಂದರು.

ಕ್ಷೇತ್ರದಲ್ಲಿ ನೂತನ ವಾಗಿ ತಲಾ 25 ಕೋಟಿ ರೂಪಾಯಿ ವೆಚ್ಚದಲ್ಲಿ 5 ವಸತಿ ಶಾಲೆ ಶಂಕುಸ್ಥಾಪನೆ ಮಾಡಿದ್ದು ನಾಲ್ಕುಶಾಲೆಗಳನ್ನು  ಉದ್ಘಾಟಿಸಲಾಗಿದೆ ಅಲ್ಲದೆ ಎರೆಡು  ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳಿಗೆ ತಲಾ ನಾಲ್ಕು ಕೋಟಿ ರೂ ಒದಗಿಸಿದ್ದು ಒಟ್ಟಾರೆ  133 ಕೋಟಿ ರೂ ಕ್ಷೇತ್ರಕ್ಕೆ ಒದಗಿಸಲಾಗಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಅರ್ಚನಾ, ಜಿಪಂ ಸಿಇಒ ಕಾಂತರಾಜು, ಸ್ಥಳೀಯ ಜನಪ್ರತಿನಿಧಿಗಳು, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Similar News