ಗುಬ್ಬಿ: ವಿದ್ಯುತ್ ಪರಿವರ್ತಕಕ್ಕೆ ಸಿಲುಕಿ ಚಿರತೆ ಸಾವು
Update: 2022-12-13 13:15 GMT
ತುಮಕೂರು, ಡಿ. 13: ಆಹಾರ ಹುಡುಕಿಕೊಂಡು ಬಂದ ಚಿರತೆಯೊಂದು ರೈತರೊಬ್ಬರು ತಮ್ಮ ಜಮೀನಿನಲ್ಲಿ ಅಳವಡಿಸಿದ್ದ ನೀರಾವರಿ ಪಂಪ್ ಸೇಟ್ ನ ವಿದ್ಯುತ್ ಪರಿವರ್ತಕಕ್ಕೆ (ಟ್ರಾನ್ಸ್ಫಾರ್ಮರ್) ಆಕಸ್ಮಿಕವಾಗಿ ಸಿಲುಕಿ ಶಾರ್ಟ್ ಸರ್ಕೀಟ್ನಿಂದ ಸಾವನ್ನಪ್ಪಿದ ಘಟನೆ ಗುಬ್ಬಿ ತಾಲೂಕು ಕರೆಗೌಡನ ಪಾಳ್ಯದಲ್ಲಿ ನಡೆದಿದೆ.
ಗ್ರಾಮದ ಶಾಲೆಯ ಹಿಂಭಾಗ ಆಹಾರ ಹುಡುಕಿ ಬಂದ ಚಿರತೆ ಮರದಿಂದ ಜಿಗಿದು ಕಂಬದ ಮೇಲೆ ಇದ್ದ ವಿದ್ಯುತ್ ಪರಿವರ್ತಕದ ಮೇಲೆ ಎಗರಿದೆ. ತಕ್ಷಣ ವಿದ್ಯುತ್ ಪ್ರವಹಿಸಿ ಕಂಬದಲ್ಲಿ ಸಾವನ್ನಪ್ಪಿದೆ ಎನ್ನಲಾಗಿದೆ.
ಇತ್ತೀಚಿನ ದಿನಗಳಲ್ಲಿ ಕಾಡು ಪ್ರಾಣಿಗಳಾದ ಚಿರತೆ, ಹುಲಿಗಳು ಆಹಾರ ಹುಡುಕಿ ನಾಡಿಗೆ ಬರುತ್ತಿದೆ. ಈ ಭಾಗದಲ್ಲಿ ಚಿರತೆಯ ಹಾವಳಿ ಹೆಚ್ಚಾಗಿದ್ದು, ಚಿರತೆ ಸೆರೆ ಹಿಡಿಯಲು ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಸ್ಥಳಕ್ಕೆ ಧಾವಿಸಿದ ವಲಯ ಅರಣ್ಯಾಧಿಕಾರಿ ಹಾಗೂ ಇಲಾಖೆ ಸಿಬ್ಬಂದಿ ಚಿರತೆಯ ಮೃತದೇಹವನ್ನು ಇಳಿಸಿ, ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆನ್ನಲಾಗಿದೆ.