ನನಗೆ ನನ್ನದೇ ಆದ ಶಕ್ತಿ ಇದೆ, ರಾಜಕೀಯವಾಗಿ ಯಾರು ಯಾರನ್ನೂ ಮುಗಿಸಲು ಸಾಧ್ಯವಿಲ್ಲ: ಬಿ.ಎಸ್. ಯಡಿಯೂರಪ್ಪ

Update: 2022-12-15 07:24 GMT

ಬೆಂಗಳೂರು, ಡಿ.15: 'ನಾನು ಪಕ್ಷ ಕಟ್ಟಿ ಬೆಳೆಸಿದ್ದೇನೆ. ಪಕ್ಷ ಅಧಿಕಾರಕ್ಕೆ ತರಲು ಶ್ರಮ ಹಾಕಿದ್ದೇನೆ. ಈ ವಿಚಾರ ಇಡೀ ರಾಜ್ಯದ ಜನರಿಗೆ ಗೊತ್ತಿದ್ದು, ಇದನ್ನೇ ಮುಂದುವರಿಸುತ್ತೇನೆ. ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯ, ಗೊಂದಲಗಳಿಲ್ಲ' ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. 

ಬಿಜೆಪಿಯಲ್ಲಿ ಯಡಿಯೂರಪ್ಪರನ್ನ ಮುಗಿಸಲು ಷಡ್ಯಂತ್ರ ನಡೆಯುತ್ತಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 'ಈ ಆರೋಪದಲ್ಲಿ ಸತ್ಯಾಂಶ ಇಲ್ಲ. ಯಾರು ಯಾರನ್ನೂ ಮುಗಿಸಲು ಸಾಧ್ಯವಿಲ್ಲ, ನನಗೆ ನನ್ನದೇ ಆದ ಶಕ್ತಿ ಇದೆ' ಎಂದು ತಿಳಿಸಿದರು. 

''ನಡ್ಡಾ ಅವರು ಕೊಪ್ಪಳಕ್ಕೆ ಬರುತ್ತಿದ್ದಾರೆ. ಅವರ ಕಾರ್ಯಕ್ರಮಕ್ಕೆ ಹೋಗುತ್ತಿದ್ದೇನೆ. ಬೇರೆ ಕಾರಣಕ್ಕೆ ನಾನು ಇವತ್ತು ಕಾರ್ಯಕ್ರಮಕ್ಕೆ ಹೋಗದೇ ಇರೋ ಸ್ಥಿತಿ ಇತ್ತು‌. ಈಗ ಹೋಗಲೇ ಬೇಕು ಅನ್ನೋ ಸ್ಥಿತಿ ಬಂತು. ಹೀಗಾಗಿ ಹೋಗ್ತಿದ್ದೇನೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡಾ ಕಾರ್ಯಕ್ರಮಕ್ಕೆ ಬರುತ್ತಿದ್ದಾರೆ. ಇಬ್ಬರು ಒಟ್ಟಾಗಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಗೊಂದಲಗಳಿಲ್ಲ'' ಎಂದು ತಿಳಿಸಿದರು. 

'ರಾಜ್ಯದ ಉದ್ದಗಲಕ್ಕೂ ಓಡಾಡುತ್ತೇನೆ. ಬಿಜೆಪಿ ಪರ ರಾಜ್ಯದಲ್ಲಿ ವಾತಾವರಣ ಇದೆ. ಮೋದಿ ,ಅಮಿತ್ ಶಾ, ನಡ್ಡಾ ನೇತೃತ್ವದಲ್ಲಿ ಹೆಚ್ಚು ಕಾರ್ಯಕ್ರಮ ರಾಜ್ಯದಲ್ಲಿ ನಡೆಯುತ್ತೆ. ಇದೆಲ್ಲದರ ಪರಿಣಾಮ ಸ್ಪಷ್ಟ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರುತ್ತೇವೆ. ನನ್ನನ್ನ‌ ಪಕ್ಷ ಕಡೆಗಣಿಸಿದೆ ಎಂಬುದರಲ್ಲಿ ಯಾವುದೇ ಸತ್ಯಾಂಶವಿಲ್ಲ. ಎಲ್ಲಾ ‌ಕಾರ್ಯಕ್ರಮಗಳಿಗೆ ನಾನು ಹೋಗ್ತಾ ಇದ್ದೀನಿ. ಸರ್ಕಾರಿ ಕಾರ್ಯಕ್ರಮಕ್ಕೆ ನಾನು ಹೋಗೋದು ಸರಿಯಲ್ಲ ‌ ಅಂತ ಹೋಗಿಲ್ಲ ಅಷ್ಟೇ' ಎಂದು ಹೇಳಿದರು.

ಇದನ್ನೂ ಓದಿ: 36 ಮಂದಿ ಸದಸ್ಯರ ಕೆಪಿಸಿಸಿ ಚುನಾವಣಾ ಸಮಿತಿ ರಚಿಸಿ ಎಐಸಿಸಿ ಆದೇಶ

Similar News