ಶಾಮನೂರು ಶಿವಶಂಕರಪ್ಪ, ಈಶ್ವರ್ ಖಂಡ್ರೆಗೆ ಕೋರ್ಟ್ ನಿಂದ ಸಮನ್ಸ್ ಜಾರಿ

ವೀರಶೈವ ಮಹಾಸಭಾದ ಅಧ್ಯಕ್ಷರನ್ನಾಗಿ ಮಲ್ಲಿಕಾರ್ಜುನ್‌ ನೇಮಿಸಲು ಹುನ್ನಾರ ಆರೋಪ

Update: 2022-12-17 16:33 GMT

ಬೆಂಗಳೂರು, ಡಿ.17: ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಸ್ಥಾನಕ್ಕೆ ತಮ್ಮ ಪುತ್ರ ಎಸ್.ಎಸ್. ಮಲ್ಲಿಕಾರ್ಜುನ್‍ರನ್ನು ನೇಮಿಸಲು ಹಾಲಿ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಹುನ್ನಾರ ನಡೆಸಿದ್ದಾರೆ ಎಂದು ಆಕ್ಷೇಪಿಸಿ ಸಲ್ಲಿಸಿದ್ದ ಅರ್ಜಿ ಸಂಬಂಧ, ಬೆಂಗಳೂರಿನ 9ನೆ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯವು ಪ್ರತಿವಾದಿಗಳಿಗೆ ತುರ್ತು ನೋಟಿಸ್ ಜಾರಿ ಮಾಡಿದೆ.

ಈ ಸಂಬಂಧ ಬೆಂಗಳೂರಿನ ಎಸ್.ಎನ್.ಕೆಂಪಣ್ಣ ಸೇರಿ ಮತ್ತಿತರರು ಸಲ್ಲಿಸಿದ್ದ ಮೂಲ ದಾವೆಯ ವಿಚಾರಣೆ ನಡೆಸಿದ ನ್ಯಾಯಾಧೀಶೆ ಮುಮ್ತಾಝ್ ಅವರಿದ್ದ ನ್ಯಾಯಪೀಠ, ಶಾಮನೂರು ಶಿವಶಂಕರಪ್ಪ, ಪ್ರಧಾನ ಕಾರ್ಯದರ್ಶಿ ಈಶ್ವರ್ ಖಂಡ್ರೆ ಸೇರಿ ಇನ್ನಿತರ ಪ್ರತಿವಾದಿಗಳಿಗೆ ನೋಟಿಸ್ ಹಾಗೂ ಸಮನ್ಸ್ ಜಾರಿ ಮಾಡಿದೆ. 

2020ರಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಸೊಸೈಟಿಯ ಹೆಸರಿನಲ್ಲಿ ವೀರಶೈವಕ್ಕೆ ತಿದ್ದುಪಡಿ ತಂದು ವೀರಶೈವ-ಲಿಂಗಾಯತ ಎಂದು ಬದಲಿಸಲಾಗಿದೆ ಎಂದು ತಿಳಿದು ಬಂದಿದೆ. ಇತ್ತೀಚೆಗಿನ ತಿದ್ದುಪಡಿ ಮಾಡಲಾದ ಸೊಸೈಟಿಯ ಸಂವಿಧಾನ ಪಡೆದು, ಈ ದಾವೆಯನ್ನು ಹೂಡಲಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ವೀರಶೈವ ಸಮುದಾಯದ ವಾರ್ಷಿಕ ಕಾರ್ಯಕ್ರಮವನ್ನು ಇದೇ ಡಿ.23ರಿಂದ 26ರ ವರೆಗೆ ದಾವಣಗೆರೆಯಲ್ಲಿ ನಡೆಸಲು ಉದ್ದೇಶಿಸಲಾಗಿದ್ದು, ಇಲ್ಲಿ ಮಲ್ಲಿಕಾರ್ಜುನ್‍ರನ್ನು ಮುಂದಿನ ಅಧ್ಯಕ್ಷರನ್ನಾಗಿ ನೇಮಕ ಮಾಡಲು ಪ್ರಯತ್ನ ನಡೆಸಿದ್ದಾರೆ. ಇದು ಅಧಿಕಾರದ ದುರುಪಯೋಗವಾಗಿದ್ದು, ಪ್ರತಿವಾದಿಗಳ ವಿರುದ್ಧ ತಾತ್ಕಾಲಿಕ ಪ್ರತಿಬಂಧಕಾದೇಶಕ್ಕೆ ಆದೇಶಿಸದಿದ್ದರೆ ಅವರು ಅಕ್ರಮವಾಗಿ ಮಲ್ಲಿಕಾರ್ಜುನ್ ಅವರನ್ನು ಸೊಸೈಟಿಯ ಅಧ್ಯಕ್ಷರನ್ನಾಗಿಸಲಿದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ವೀರಶೈವ-ಲಿಂಗಾಯತ ಎಂದು ತಿದ್ದುಪಡಿ ಮಾಡುವ ಮೂಲಕ ಪ್ರತಿವಾದಿಗಳು ಪ್ರಮಾದವೆಸಗಿದ್ದಾರೆ. ಈ ಮೂಲಕ ಸಮುದಾಯದವರ ಹಾದಿ ತಪ್ಪಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವೀರಶೈವ-ಲಿಂಗಾಯತ ಜೊತೆಗಿರುವ ಲಿಂಗಾಯತ ಪದವನ್ನು ತೆಗೆಯಬೇಕು. ಜತೆಗೆ ಶ್ಯಾಮನೂರು ಮತ್ತು ಖಂಡ್ರೆ ಅವರನ್ನು ಮಹಾಸಭಾದ ಹುದ್ದೆಗಳಿಂದ ತೆಗೆಯಬೇಕು. ಈ ಇಬ್ಬರೂ ರಾಜಕೀಯ ಪಕ್ಷದ ಭಾಗವಾಗಿರುವುದರಿಂದ ಸೊಸೈಟಿಯ ಹಿತ ಕಾಯುವ ಏಕೈಕ ದೃಷ್ಟಿಯಿಂದ ದಾವೆ ಹೂಡಲಾಗಿದೆ ಎಂದು ವಿವರಿಸಲಾಗಿದೆ. ಕೇಸ್‍ನ ವಿಚಾರಣೆಯನ್ನು 2023ರ ಫೆ.17ಕ್ಕೆ ಮುಂದೂಡಿದೆ. 

Similar News