21 ಜಿಲ್ಲೆಗಳಲ್ಲಿ ಪ್ರವಾಸ; ಕಾಂಗ್ರೆಸ್‌ ನಾಯಕರ ಬಸ್ ಯಾತ್ರೆಗೆ ದಿನಾಂಕ ನಿಗದಿ

Update: 2022-12-19 16:06 GMT

ಬೆಳಗಾವಿ, ಡಿ.19 : ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಜನವರಿ 11 ರಿಂದ ಬಸ್ ಯಾತ್ರೆ ಆರಂಭಗೊಳ್ಳಲಿದೆ. 

ಬೆಳಗಾವಿ ಸೇರಿ ಒಟ್ಟು 21  ಜಿಲ್ಲೆಗಳಲ್ಲಿ ಕಾಂಗ್ರೆಸ್ ಜಂಟಿ ಬಸ್ ಯಾತ್ರೆ ಸಂಚಾರ ಮಾಡಲಿದೆ‌. ಜಂಟಿ ಬಸ್ ಯಾತ್ರೆಯಲ್ಲಿ ಕಾಂಗ್ರೆಸ್ ನ ಹಲವು ನಾಯಕರು ಭಾಗಿಯಾಗಲಿದ್ದಾರೆ. 

ಬೆಳಗಾವಿ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಈ ಕುರಿತಾಗಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ನೇತೃತ್ವದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಸತೀಶ್ ಜಾರಕಿಹೊಳಿ ಸೇರಿದಂತೆ ಪ್ರಮುಖ ಮುಖಂಡರು ಭಾಗಿಯಾಗಿದ್ದರು.

ಸಭೆಯ ಬಳಿಕ ಮಾತನಾಡಿದ ಡಿಕೆ ಶಿವಕುಮಾರ್,  ಮತ್ತೆ ಜನಪರವಾದ ಕಾಂಗ್ರೆಸ್ ಸರ್ಕಾರ ಬರಬೇಕು. ಈ ನಿಟ್ಟಿನಲ್ಲಿ ಬಸ್ ಯಾತ್ರೆ ಪ್ರಾರಂಭಿಸುತ್ತಿದ್ದೇವೆ. ರಾಜಕೀಯವಾಗಿ ವಿಭಾಗ ಮಾಡಿಕೊಂಡು ಬಸ್ ಯಾತ್ರೆ ಪ್ರಾರಂಭ ಮಾಡಲಾಗುವುದು ಎಂದರು.

ಜನವರಿ 13 -14  ರಂದು ಹಬ್ಬದ ಸಲುವಾಗಿ ಬಸ್ ಯಾತ್ರೆಗೆ ವಿರಾಮ ಕೊಡುತ್ತೇವೆ. ಜನವರಿ 17 ರಂದು ಕೊಪ್ಪಳ ಹೊಸಪೇಟೆ, 18  ಬಾಗಲಕೋಟೆ ಹಾಗೂ ಗದಗ, 19 ರಂದು ಹಾವೇರಿ ಹಾಗೂ ದಾವಣಗೆರೆ ಅದಾದ ಮೇಲೆ ಬೆಂಗಳೂರು ನಲ್ಲಿ ಬಸ್ ಯಾತ್ರೆ ನಡೆಯಲಿದೆ ಎಂದರು‌. 

21 ರಂದು ಹಾಸನ ಹಾಗೂ ಚಿಕ್ಕಮಗಳೂರು, 22 ರಂದು  ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಸ್ ಯಾತ್ರೆ ನಡೆಯಲಿದೆ ಎಂದು ಡಿಕೆಶಿ ತಿಳಿಸಿದರು.

ಬಸ್ ಯಾತ್ರೆ ದಿನಾಂಕ ಬದಲು:

ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಬಸ್ ಯಾತ್ರೆ ಜನವರಿ 12 ಕ್ಕೆ ನಿಗದಿಯಾಗಿತ್ತು. ಆದರೆ ಅಂದು ಪ್ರಧಾನಿ ನರೇಂದ್ರ ಮೋದಿ ಅವರು ಬೆಳಗಾವಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಬಸ್ ಯಾತ್ರೆಯನ್ನು ಒಂದು ದಿನ ಮುಂಚೆಯೇ ಆರಂಭಿಸಲು ನಿರ್ಧಾರ ಮಾಡಲಾಗಿದೆ.

Similar News