ಸಚಿವ ಸ್ಥಾನ; ಸಿಎಂ ಮಾತು ಸಮಾಧಾನ ತಂದಿದೆ, ಕಠಿಣ ನಿರ್ಧಾರ ಸದ್ಯಕ್ಕಿಲ್ಲ ಎಂದ ಕೆ.ಎಸ್ ಈಶ್ವರಪ್ಪ
ಬೆಂಗಳೂರು, ಡಿ. 20: ಸಚಿವ ಸಂಪುಟ ವಿಚಾರದ ಬಗ್ಗೆ ಪಕ್ಷ, ವ್ಯಕ್ತಿ, ಮುಜುಗರ ಆಗಬಾರದು ಎಂದು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.
ಖಾಸಗಿ ಹೊಟೇಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿಎಂ ಬೊಮ್ಮಾಯಿ ಅವರ ಮಾತು ಸಮಾಧಾನ ತಂದಿದೆ, ತಮ್ಮ ಜೊತೆಗೆ ರಮೇಶ್ ಜಾರಕಿಹೊಳಿ ಅವರನ್ನೂ ಸಂಪುಟಕ್ಕೆ ಮತ್ತೆ ಸೇರಿಸಿಕೊಳ್ಳುವ ಭರವಸೆ ಅವರಿಂದ ಸಿಕ್ಕಿದೆ. ಹಾಗಾಗಿ ಸದ್ಯಕ್ಕೆ ಯಾವುದೇ ಕಠಿಣ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.
'ಎಲ್ಲಾ ಇಲಾಖೆಗಳಲ್ಲಿ ಕೆಲಸ ಮಾಡಿದ್ದೇನೆ. ನಾನು ಸಚಿವ ಆಗಬೇಕು ಎಂದಿಲ್ಲ, ಆರೋಪ ಮುಕ್ತ ಆದ ನಂತರ ಸಂಪುಟ ಸೇರ್ಪಡೆ ಮಾಡ್ಕೊಳ್ತೆವೆ ಎಂದಿದ್ದರು ಆದರೆ ಮಾಡ್ಕೊಂಡಿಲ್ಲ, ಹಾಗಾಗಿ ಮೌನ ಪ್ರತಿಭಟನೆ ಮಾಡಿದ್ದೆ' ಎಂದರು.
'30-40ವರ್ಷಗಳ ಶ್ರಮ ಬಿಜೆಪಿ ಬಲಶಾಲಿಯಾಗಿ ಬೆಳೆದಿದೆ. ಎಲ್ಲಾ ನಾಯಕರಿಗೆ ಪಕ್ಷದಿಂದ ಪ್ರತಿ ಫಲ ಸಿಕ್ಕಿದೆ. ಯಡಿಯೂರಪ್ಪ ಸಿಎಂ ಆದ್ರು, ಅನಂತ್ ಕುಮಾರ್ ಕೇಂದ್ರ ಸಚಿವರಾದ್ರು, ಶೆಟ್ಟರ್, ಸದಾನಂದಗೌಡ ಸಿಎಂ ಆದ್ರು' ಎಂದು ನೆನಪಿಸಿಕೊಂಡರು.
ಇದನ್ನೂ ಓದಿ: ರಮೇಶ್ ಜಾರಕಿಹೊಳಿ, ಈಶ್ವರಪ್ಪಗೆ ಸಚಿವ ಸ್ಥಾನ: ಸಿಎಂ ಬೊಮ್ಮಾಯಿ ಹೇಳಿದ್ದೇನು?