ಗಮಕ ಕಲಾವಿದ, ಪದ್ಮಶ್ರೀ ಪುರಸ್ಕೃತ ಹೊಸಳ್ಳಿ ಕೇಶವಮೂರ್ತಿ ನಿಧನ

Update: 2022-12-21 13:37 GMT

ಶಿವಮೊಗ್ಗ, ಡಿ.20:  ಖ್ಯಾತ ಗಮಕ ಕಲಾವಿದ ಪದ್ಮಶ್ರೀ ಎಚ್‌.ಆರ್‌.ಕೇಶವಮೂರ್ತಿ ಬುಧವಾರ ನಿಧನರಾಗಿದ್ದಾರೆ.

ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರು ಇಂದು ಮಧ್ಯಾಹ್ನ ಸ್ವಗೃಹದಲ್ಲೇ ಕೊನೆಯುಸಿರೆಳೆದರು. ಅವರಿಗೆ 88 ವರ್ಷ ವಯಸ್ಸಾಗಿತ್ತು. 

ಮೃತರು ಪತ್ನಿ ರಾಜೇಶ್ವರಿ ಮತ್ತು ಮಗಳ ಉಷಾ ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ, ಗುರುವಾರ ಬೆಳಗ್ಗೆ ಸ್ವಗ್ರಾಮ ಹೊಸಳ್ಳಿಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಶಾಂತಲನಾಟ್ಯಶ್ರೀ ಪ್ರಶಸ್ತಿ, ಕುಮಾರವ್ಯಾಸ ಪ್ರಶಸ್ತಿ ಪುರಸ್ಕೃತರಾದ ಅವರಿಗೆ  2022ರ ಜ.25ರಂದು ಕಲಾ ವಿಭಾಗದಲ್ಲಿ ಕೇಂದ್ರ ಸರ್ಕಾರದ ಪದ್ಮಶ್ರೀ ಪ್ರಶಸ್ತಿ ಲಭಿಸಿತ್ತು.

ವೇದಬ್ರಹ್ಮ ರಾಮಸ್ವಾಮಿ ಶಾಸ್ತ್ರಿ ಮತ್ತು ಲಕ್ಷ್ಮೀದೇವಪ್ಪ ದಂಪತಿ ಪುತ್ರರಾಗಿ ಕೇಶವಮೂರ್ತಿ ಅವರು 1934ರ ಫೆ.22ರಂದು ಹೊಸಳ್ಳಿಯಲ್ಲಿ ಜನಿಸಿದ್ದರು. 

ಬಿ.ಎಸ್ ಯಡಿಯೂರಪ್ಪ ಸಂತಾಪ: 

ಶಿವಮೊಗ್ಗ ಬಳಿಯ ಮತ್ತೂರು ಹೊಸಳ್ಳಿಯ ಖ್ಯಾತ ಗಮಕ ಕಲಾವಿದರಾದ ಪದ್ಮಶ್ರೀ ಶ್ರೀ ಹೆಚ್‌.ಆರ್.ಕೇಶವಮೂರ್ತಿ ಅವರು ನಿಧನರಾದ ಸುದ್ದಿ ಅತ್ಯಂತ ಆಘಾತ ತಂದಿದೆ. ಅವರ ನಿಧನದಿಂದ ಒಬ್ಬ ಹಿರಿಯ ವಿದ್ವಾಂಸರನ್ನು ನಾಡು ಕಳೆದುಕೊಂಡಿದೆ. ಅವರ ಆತ್ಮಕ್ಕೆ ಸದ್ಗತಿ ಪ್ರಾರ್ಥಿಸುತ್ತಾ, ಕುಟುಂಬದವರಲ್ಲಿ ಸಂತಾಪಗಳನ್ನು ಕೋರುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಟ್ವೀಟ್ ಮಾಡಿದ್ದಾರೆ. 

Similar News