ತಿ.ನರಸೀಪುರ | ಆತಂಕ ಮೂಡಿಸಿದ್ದ ಚಿರತೆ ಕೊನೆಗೂ ಸೆರೆ, ನಿಟ್ಟುಸಿರುಬಿಟ್ಟ ಗ್ರಾಮಸ್ಥರು

Update: 2022-12-22 11:14 GMT

ತಿ. ನರಸೀಪುರ (ಮೈಸೂರು) ,ಡಿ.22:  ಇಬ್ಬರನ್ನು ಸಾಯಿಸಿ, ಹಲವರ ಮೇಲೆ ದಾಳಿ ನಡೆಸಿ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದ ಚಿರತೆಗಳ ಪೈಕಿ ಒಂದು ಚಿರತೆ ಕೊನೆಗೂ ಅರಣ್ಯ ಇಲಾಖೆಯ ನಿರಂತರ ಕಾರ್ಯಾಚರಣೆಯ ನಂತರ ಬೋನಿಗೆ ಬಿದ್ದಿದೆ.

ತಾಲೂಕಿನ ಮುತ್ತತ್ತಿ ಗ್ರಾಮದ ದಿಲೀಪ್ ಎಂಬುವರ ತೋಟದಲ್ಲಿ ಈ ಚಿರತೆ ಸೆರೆ ಸಿಕ್ಕಿದ್ದು, ಕಳೆದ ಹಲವು ದಿನಗಳಿಂದಲೂ ಗ್ರಾಮದ ಸುತ್ತಲು ಚಿರತೆ ಓಡಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆಯು ಈ  ಭಾಗದಲ್ಲಿ ಚಿರತೆ ಬಂಧನಕ್ಕೆ ಬೋನು ಇರಿಸಿದ್ದರು.

ಬುಧವಾರರಾತ್ರಿ 8 ಗಂಟೆ ಸಮಯದಲ್ಲಿ ಚಿರತೆ ಬೋನಿಗೆ ಬಿದ್ದಿದೆ. ಚಿರತೆ ಬಂಧನಕ್ಕೆ ಬೋನಿನಲ್ಲಿ ಕೋಳಿಯನ್ನು ಇರಿಸಿದ್ದು, ಕೋಳಿ ತಿನ್ನಲು ಬಂದ ಚಿರತೆ ಸೆರೆ ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ಈ ಭಾಗದಲ್ಲಿ ಇನ್ನೂ ಎರಡು ಚರತೆಗಳು ಓಡಾಡುತ್ತಿವೆ ಎನ್ನಲಾಗಿದೆ. 

ಎರಡೂವರೆ  ವರ್ಷದ ಈ ಚಿರತೆಯು ಮುತ್ತತ್ತಿ ಗ್ರಾಮದ ಭಾಗದಲ್ಲಿ ಬೋನಿಗೆ ಬಿದ್ದಿದ್ದು, ಗ್ರಾಮದ ಜನತೆ ನೀಡಿದ ಮಾಹಿತಿ ಮೇರೆಗೆ  ತೋಟವೊಂದರಲ್ಲಿ ಬೋನು ಇರಿಸಲಾಗಿದ್ದರಿಂದ ಚಿರತೆ ಸೆರೆ ಸಿಕ್ಕಿದೆ. ಮೇಲಧಿಕಾರಿಗಳ ಸಮ್ಮುಖದಲ್ಲಿ ವೈದ್ಯಕೀಯ ತಪಾಸಣೆ ನಂತರ ಚಿರತೆಯನ್ನು ಬಂಡೀಪುರ ಅರಣ್ಯ ಪ್ರದೇಶಕ್ಕೆ ರವಾನಿಸಲಾಗುವುದು ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ.

Similar News