×
Ad

ಚಿಕ್ಕಮಗಳೂರು: ರಾಗಿ ಫಸಲು ಕಾಯುತ್ತಿದ್ದ ರೈತ ಕಾಡಾನೆ ದಾಳಿಗೆ ಬಲಿ

Update: 2022-12-25 11:11 IST

ಚಿಕ್ಕಮಗಳೂರು, ಡಿ.25: ಜಮೀನಿನಲ್ಲಿ ರಾಗಿ ಫಸಲು ಕಾಯುತ್ತಾ ಜಮೀನಿನ‌ ಗುಡಿಸಲಿನಲ್ಲಿ ಮಲಗಿದ್ದ ವೇಳೆ ಏಕಾಎಕಿ ದಾಳಿ ಮಾಡಿದ ಕಾಡಾನೆ ರೈತರೊಬ್ಬರನ್ನು‌ ತುಳಿದು ಸಾಯಿಸಿರುವ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಹಾದಿಕೆರೆ ಗ್ರಾಮ ಸಮೀಪದ ರಾಗಿ ಬಸವನಹಳ್ಲಿಯಲ್ಲಿ ರವಿವಾರ ಮುಂಜಾನೆ ವರದಿಯಾಗಿದೆ.

ಈರಪ್ಪ(60) ಕಾಡಾನೆ ದಾಳಿಯಿಂದ ಮೃತಪಟ್ಟ ರೈತರಾಗಿದ್ದಾರೆ.

ತಮ್ಮ ಹೊಲದಲ್ಲಿ ರಾಗಿ ಬೆಳೆದಿದ್ದ ಈರಪ್ಪ ಕಾಡುಪ್ರಾಣಿಗಳಿಂದ ರಾಗಿ ಬೆಳೆ ಕಾಯಲು ರಾತ್ರಿಯಿಡೀ ಜಮೀನಿನಲ್ಲಿದ್ದ ಗುಡಿಸಲಿನಲ್ಲಿ  ಮಲಗಿದ್ದರು. ರವಿವಾರ ಮುಂಜಾನೆ ವೇಳೆ ಗುಡಿಸಲಿನ‌ ಮೇಲೆ ದಿಡೀರ್ ದಾಳಿ‌ ನಡೆಸಿದ ಕಾಡಾನೆ ಗುಡಿಸಲು ಧ್ವಂಸ ಮಾಡಿ ರೈತ ಈರಪ್ಪನನ್ನು‌ ಅಡಿಕೆ ಗಿಡಗಳನ್ನು ಬೆಳೆದಿದ್ದ ಹೊಲಕ್ಕೆ ಎಳೆದೊಯ್ದು ತುಳಿದು ಸಾಯಿಸಿದೆ.

ಕಾಡಾನೆ ದಾಳಿ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದ್ದು, ಸ್ಥಳಕ್ಕೆ ಭೇಟಿ ನೀಡದ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ಮಲೆನಾಡು‌ ಭಾಗದಲ್ಲಿ ಈ ಬಾರಿ ಕಾಡಾನೆಗಳ ದಾಳಿ ತೀವ್ರವಾಗಿದ್ದು, ಮೂಡಿಗೆರೆ ತಾಲೂಕೊಂದರಲ್ಲೇ ಕಾಡಾನೆ ದಾಳಿಗೆ ಆರು ಮಂದಿ ಬಲಿಯಾಗಿದ್ದಾರೆ. ಮಲೆನಾಡಿನಲ್ಲಿ ಕಾಡಾನೆಗಳ‌ ಹಾವಳಿ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಇವುಗಳ ಸೆರೆ ಕಾರ್ಯಾಚರಣೆ ನಡೆಸುತ್ತಿದ್ದು, ಈ ಮಧ್ಯೆ ಬಯಲು ಭಾಗದಲ್ಲೂ ಕಾಡಾನೆಗಳ ದಾಳಿ‌ ಆರಂಭವಾಗಿರುವುದು ರೈತರ ನಿದ್ದೆ ಗೆಡಿಸಿದೆ.

ರವಿವಾರ ಕಾಡಾನೆ‌ ದಾಳಿಗೆ ಬಲಿಯಾದ ರೈತನ‌  ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಿ ನರಹಂತಕ ಆನೆಯನ್ನು ಸೆರೆ ಹಿಡಿದು ಸ್ಥಳಾಂತರ ಮಾಡಬೇಕೆಂದು ಗ್ರಾಮಸ್ಥರು, ರೈತರು ಆಗ್ರಹಿಸಿದ್ದಾರೆ.

Similar News