ಓ ಮೆಣಸೇ...

Update: 2022-12-25 19:30 GMT

ಗ್ರಾಮ ವಾಸ್ತವ್ಯ ಕಾರ್ಯಕ್ರಮ ಅಧಿಕಾರಿಗಳು ಮತ್ತು ಜನರ ನಡುವಿನ ಸಂಪರ್ಕ ಸೇತುವೆಯಾಗಿದೆ -ಆರ್.ಅಶೋಕ್, ಸಚಿವ
 ಇತ್ತೀಚೆಗೆ ಯಾಕೋ ಸೇತುವೆ ಅಂದೊಡನೆ ಜನರು ಜೀವ ಭಯದಿಂದ ಕಂಪಿಸತೊಡಗುತ್ತಾರೆ.

---------------
 ಗಲ್ವಾನ್ ಕಣಿವೆಯಲ್ಲಿ ಭಾರತೀಯ ಯೋಧರು ತೋರಿದ ಶೌರ್ಯವನ್ನು ಎಷ್ಟು ಹೊಗಳಿದರೂ ಸಾಲದು -ರಾಜನಾಥ ಸಿಂಗ್, ಕೇಂದ್ರ ಸಚಿವ
ಆದರೆ ಅವರ ಶೌರ್ಯದ ತೆರೆ ಪುಢಾರಿಗಳ ಇಬ್ಬಂದಿತನವನ್ನು ಮರೆಸುವಷ್ಟು ವಿಶಾಲವಾಗಿಲ್ಲ.

---------------
 ಸರ್ವರಿಗೂ ಉದ್ಯೋಗ ಕೊಡುವ ಏಕೈಕ ರಾಜ್ಯ ಕರ್ನಾಟಕ -ಡಾ.ಅಶ್ವತ್ಥನಾರಾಯಣ, ಸಚಿವ
 ಉದ್ಯೋಗಕ್ಕಾಗಿ ಅಲೆದಾಡುತ್ತಿರುವ ಆ ಲಕ್ಷಾಂತರ ಕನ್ನಡಿಗರನ್ನು ವಿದೇಶಿಗಳೆಂದು ಘೋಷಿಸುವ ಆಲೋಚನೆ ಇದೆಯೇ?
---------------
 ನಾನು ಸತ್ತರೆ ನನ್ನನ್ನು ನನ್ನ ಕ್ಷೇತ್ರ ಶಿಗ್ಗಾಂವಿಯಲ್ಲೇ ಹೂಳಬೇಕು -ಬಸವರಾಜ ಬೊಮ್ಮಾಯಿ, ಸಿಎಂ
 ನಿಮ್ಮನ್ನು ತನ್ನ ಪುತ್ರನೆಂದು ನಂಬಿಕೊಂಡಿದ್ದ ಕನ್ನಡ ನಾಡಿನ ಇತರ ಭಾಗಗಳಿಗೆ ಆ ಭಾಗ್ಯ ಬೇಡವೇ?
---------------
 ಸಂವಿಧಾನದ ಮೇಲೆ ಗೌರವ ಇಲ್ಲದವರು ರಾಜಕಾರಣಿಯಾಗಲು ಅರ್ಹರಲ್ಲ -ಸಿದ್ದರಾಮಯ್ಯ, ಮಾಜಿ ಸಿಎಂ
 ಹೀನ ಚಾರಿತ್ರ, ವಿಷಕಾರುವ ನಾಲಿಗೆ ಮತ್ತು ಚೀಲ ತುಂಬಾ ದುಡ್ಡಿದ್ದರೆ ಸದ್ಯ, ರಾಜಕಾರಣಿಯಾಗುವುದಕ್ಕೆ ಬೇರಾವ ಅರ್ಹತೆಯೂ ಬೇಡ.

---------------
 ಸುಳ್ಳನ್ನು ಪದೇ ಪದೇ ಹೇಳಿ ಸತ್ಯವನ್ನಾಗಿಸಲು ಬಿಜೆಪಿ ನಾಯಕರು ಯತ್ನಿಸುತ್ತಿದ್ದಾರೆ -ಬಿ.ಕೆ.ಹರಿಪ್ರಸಾದ್, ಕಾಂಗ್ರೆಸ್ ಮುಖಂಡ
 ಸತ್ಯವನ್ನು ಅನಾಥವಾಗಿಸಿದವರು, ಸುಳ್ಳುಗಳನ್ನು ನಂಬಿಸುವ ತಾಕತ್ತುಳ್ಳವರನ್ನು ಟೀಕಿಸಬಾರದು.

---------------
 ಸಾವರ್ಕರ್ ಕುರಿತಂತೆ ಕಾಂಗ್ರೆಸ್ ಪಕ್ಷದ ಕೆಲ ನಾಯಕರಿಗೆ ಜ್ಞಾನೋದಯವಾಗಿದೆ -ಜಗದೀಶ್ ಶೆಟ್ಟರ್, ಮಾಜಿ ಸಿಎಂ
ಅದಕ್ಕಿಂತ ಮುನ್ನ ಅವರು ಕೂಡಾ ಅಜ್ಞಾನದಿಂದ ಆ ಹೆಸರನ್ನು ಜಪಿಸುತ್ತಿದ್ದರು.

---------------
 ಡಿಕೆಶಿಯವರಿಗೆ ಮಂಗಳೂರು ಮತ್ತು ಬೆಳಗಾವಿ ಕುಕ್ಕರ್ ಮೇಲೆ ಬಹಳ ಪ್ರೀತಿ -ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ
 ಆದ್ದರಿಂದಲೇ ಅವರು ಅದನ್ನು ಸ್ಫೋಟಿಸಿದವರ ವಿರುದ್ಧ ಆಕ್ರೋಶಿತರಾಗಿದ್ದಾರೆ.

---------------
 ನಾವೆಲ್ಲ ಹುಟ್ಟುವಾಗಲೂ ಹಿಂದೂಗಳು, ಸಾಯುವಾಗಲೂ ಹಿಂದೂಗಳೇ -ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
 ಗತ ಮತ್ತು ಭವಿಷ್ಯದ ಬಗ್ಗೆ ಮಾನವ ಜ್ಞಾನ ತೀರಾ ಸೀಮಿತ.

---------------

ತನ್ನ ಅಧಿಕಾರಾವಧಿಯಲ್ಲಿ ಭಾರತದ ಜೊತೆಗಿನ ಹಳಸಿದ ಸಂಬಂಧವನ್ನು ಸುಧಾರಿಸಲು ಬಯಸಿದ್ದೆ -ಇಮ್ರಾನ್ ಖಾನ್, ಪಾಕ್ ಮಾಜಿ ಪ್ರಧಾನಿ
 ಕುರ್ಚಿ ಕಳೆದುಹೋದ ಬಳಿಕ ನಮ್ಮ ಮೋದಿ ಸಾಹೇಬರೂ ಇಂತಹ ಮಾತುಗಳನ್ನು ಆಡಲಿದ್ದಾರೆ.
---------------
 ಅಂದಿನ ಸೀತಾಮಾತೆಯ ಜೀವನ ಇಂದಿನ ವಿಚ್ಛೇದಿತ ಮಹಿಳೆಯ ಜೀವನದ ಹಾಗಿತ್ತು -ಡಾ.ಮೋಹನ್ ಯಾದವ್, ಮಧ್ಯಪ್ರದೇಶ ಸಚಿವ
 ಇಂದಿನ ವಿಚ್ಛೇದಿತ ಮಹಿಳೆಯರಿಗೆ ಊರೊಳಗೆ ವಾಸಿಸುವ ಹಕ್ಕಾದರೂ ಇದೆ.
---------------
 ಭಯೋತ್ಪಾದನೆ ವಿರುದ್ಧ ನಮ್ಮ ಸರಕಾರ ಶೂನ್ಯ ಸಹಿಷ್ಣು ನೀತಿ ಹೊಂದಿದೆ -ಅನುರಾಗ್ ಠಾಕೂರ್, ಕೇಂದ್ರ ಸಚಿವ
 ದೇಶದ ಬಹುಜನರ ಬಗ್ಗೆ ಮತ್ತು ಎಲ್ಲ ಸತ್ಕಾರ್ಯ, ಸದ್ಮೌಲ್ಯಗಳ ಬಗ್ಗೆ ನಿಮ್ಮ ಶೂನ್ಯ ಸಹಿಷ್ಣುತೆಯ ನೀತಿ ಈಗಾಗಲೇ ಸಾಕಷ್ಟು ಕುಖ್ಯಾತವಾಗಿದೆ.
---------------
ಸಾವರ್ಕರ್ ವಿರೋಧಿಸುವವರು ದೇಶದ್ರೋಹಿಗಳು -ರವಿಕುಮಾರ್, ವಿ.ಪ. ಸದಸ್ಯ
 ಸಂಘ ಪರಿವಾರದ ಹೊರಗಿನವರೆಲ್ಲಾ ದೇಶದ್ರೋಹಿಗಳೆಂಬುದು ಬಹಳ ಹಿಂದೆಯೇ ಘೋಷಿತವಾಗಿದೆಯಲ್ಲಾ!

---------------
 ಬಿಜೆಪಿ ಬೆಳೆಯಲು ಅನಂತ ಕುಮಾರ್ ಹಾಗೂ ಯಡಿಯೂರಪ್ಪರ ಹೆಗಲಿಗೆ ಹೆಗಲು ಕೊಟ್ಟು ನಾನೂ ಕೆಲಸ ಮಾಡಿದ್ದೇನೆ -ಈಶ್ವರಪ್ಪ, ಶಾಸಕ
 ಹೀಗಿರುವಾಗ ಪಕ್ಷದ ನಾಯಕರು ನಿಮ್ಮಡನೆ, ಈಗಲಾದರೂ ಸ್ವಲ್ಪ ವಿಶ್ರಾಂತಿ ಪಡೆಯಿರಿ ಎನ್ನುವುದು ತಪ್ಪೇ?
---------------
 ಐಟಿ, ಈ.ಡಿ. ದಾಳಿಯ ಮೂಲಕ ಕಾಂಗ್ರೆಸ್ ಮುಖಂಡರನ್ನು ಬಿಜೆಪಿ ತನ್ನ ತೆಕ್ಕೆಗೆ ಸೆಳೆದುಕೊಳ್ಳಲು ಯತ್ನಿಸುತ್ತಿದೆ -ಲಕ್ಷ್ಮಣ್, ಕೆಪಿಸಿಸಿ ವಕ್ತಾರ
ದೇಶಕ್ಕಾಗಿ ಸರ್ವಸ್ವವನ್ನು ಬಲಿದಾನ ಮಾಡಿದವರ ಪಕ್ಷ ತಾನೆಂದು ಬೊಗಳೆಬಿಡುವವರ ಪಾಳಯ, ಈ ರೀತಿ ಐಟಿ, ಈ.ಡಿ.ಗಳಿಗೆ ಅಂಜಿ ರಂಗು ಬದಲಾಯಿಸುವ ಹೇಡಿಗಳಿಂದ ತುಂಬಿ ಹೋಯಿತೇ?

---------------
 ತಡವಾಗಿ ಸಭಾಪತಿ ಸ್ಥಾನ ಸಿಗುತ್ತಿರುವ ಬಗ್ಗೆ ಏನನ್ನೂ ಹೇಳುವುದಿಲ್ಲ -ಬಸವರಾಜ ಹೊರಟ್ಟಿ, ಸಭಾಪತಿ
 ಮುಂದೆ ಸಿಗಬೇಕಾದ ಇತರ ಹುದ್ದೆಗಳಿಗಾಗಿ ಈ ಎಚ್ಚರವೇ?

---------------

 ದೇಶದ ಗಡಿಯನ್ನು ರಕ್ಷಿಸುವ ಜವಾಬ್ದಾರಿಯನ್ನು ಗಡಿ ಭದ್ರತಾ ಪಡೆಯ ಜೊತೆ ರಾಜ್ಯ ಸರಕಾರಗಳೂ ವಹಿಸಿಕೊಳ್ಳಬೇಕು -ಅಮಿತ್ ಶಾ, ಕೇಂದ್ರ ಸಚಿವ
 ರಾಜ್ಯಗಳಲ್ಲಿ ಸಂಗ್ರಹಿಸಲಾದ ಎಲ್ಲ ತೆರಿಗೆಗಳು ಸಂಪೂರ್ಣವಾಗಿ ಆಯಾ ರಾಜ್ಯಗಳಿಗೆ ಸೇರುತ್ತವೆಂಬ ನಿಯಮ ತಂದರೆ ರಾಜ್ಯಗಳು ಈ ನಿಮ್ಮ ಮನವಿಯನ್ನು ಪರಿಗಣಿಸಬಹುದು.

---------------
ಭ್ರಷ್ಟ ಬಿಜೆಪಿ ಸರಕಾರವನ್ನು ಬದಲಾಯಿಸಲು ಈ ರಾಜ್ಯದ ಜನರು ಕಾಯುತ್ತಿದ್ದಾರೆ -ರಣದೀಪ್‌ಸಿಂಗ್ ಸುರ್ಜೆವಾಲಾ, ಎಐಸಿಸಿ ಪ್ರ.ಕಾರ್ಯದರ್ಶಿ
 ಭ್ರಷ್ಟ ಕಾಂಗ್ರೆಸ್ ಪಕ್ಷದಿಂದ ಜನರ ಪ್ರಯತ್ನಕ್ಕೆ ಹಿನ್ನಡೆಯಾಗಿದೆ ಎನ್ನುತ್ತೀರಾ?

---------------
 ಗಡಿಯಲ್ಲಿ ಚೀನಾ ಯುದ್ಧ ಮಾಡಲು ಸಿದ್ಧತೆ ನಡೆಸುತ್ತಿದ್ದರೆ, ಪ್ರಧಾನಿ ಮೋದಿ ನಿದ್ದೆ ಮಾಡುತ್ತಿದ್ದಾರೆ -ರಾಹುಲ್ ಗಾಂಧಿ, ಕಾಂಗ್ರೆಸ್ ಮುಖಂಡ
 ನಿದ್ದೆಯಲ್ಲಿರುವ ತನಕ ಎಡವಟ್ಟು ಮಾಡುವ ಸಾಧ್ಯತೆ ಕಡಿಮೆ ಇರುತ್ತದೆ.
---------------
 ಮಹಾತ್ಮಾ ಗಾಂಧೀಜಿ ಸಮ್ಮುಖದಲ್ಲೇ (1924) ಬೆಳಗಾವಿ ನಮ್ಮದೆಂದು ತೀರ್ಮಾನವಾಗಿದೆ -ಗೋವಿಂದ ಕಾರಜೋಳ, ಸಚಿವ
 ಅದಕ್ಕೆ ತಾನೇ ಅವರು ಗಾಂಧೀಜಿಯನ್ನೇ ಮುಗಿಸಿರುವುದು.

---------------
 ಬಿಜೆಪಿ ಸರಕಾರ ವಿದೇಶದಲ್ಲಿ ಸಿಂಹ, ದೇಶದಲ್ಲಿ ಇಲಿ -ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಅಧ್ಯಕ್ಷ
 ಹೆಗ್ಗಣ ಎಂದಿದ್ದರೆ ಅರ್ಥಪೂರ್ಣವಾಗುತ್ತಿತ್ತು.

---------------

ಕಂಬಳಿ ಹಾಕಿಕೊಂಡು ನಾಟಕ ಮಾಡಿದವರು, ಅಹಿಂದ ಎಂದು ಘೋಷಿಸಿಕೊಂಡವರು ಕುರಿಗಾಹಿಗಳಿಗೆ ಕುರಿ ಕೊಡಲಿಲ್ಲ -ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವ
 ಕುರಿಗಾಹಿಗಳನ್ನು ಕುರಿ ಮಾಡಿ ಕಸಾಯಿ ಖಾನೆಗೆ ಒಪ್ಪಿಸಿದವರ ಮಾತಿದು.

---------------
ಕರ್ನಾಟಕ-ಮಹಾರಾಷ್ಟ್ರ ಗಡಿಭಾಗದ ಮರಾಠಿ ಭಾಷಿಗರಿಗೆ ಅನ್ಯಾಯ ಆಗದಂತೆ ನಾವು ನೋಡಿಕೊಳ್ಳುತ್ತೇವೆ -ದೇವೇಂದ್ರ ಫಡ್ನವೀಸ್, ಮಹಾರಾಷ್ಟ್ರ ಡಿಸಿಎಂ
 ಮಹಾರಾಷ್ಟ್ರದ ಒಳಗಿರುವ ಮರಾಠಿ ಭಾಷಿಗರಿಗೆ ನಿಮ್ಮ ಸರಕಾರದಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ನೋಡಿಕೊಳ್ಳುವವರು ಯಾರು ?

---------------
 ಪಂಚಮ ಸಾಲಿಗೆ ಮೀಸಲಾತಿ ನೀಡುವ ಕುರಿತಂತೆ ಸಿಎಂ ಆಗಲೀ, ನಾನಾಗಲೀ ಸುಮ್ಮನೆ ಕುಳಿತಿಲ್ಲ -ಮುರುಗೇಶ್ ನಿರಾಣಿ, ಸಚಿವ
 ಒಟ್ಟಿನಲ್ಲಿ ಮೀಸಲಾತಿ ವ್ಯವಸ್ಥೆ ಸರ್ವನಾಶ ಆಗುವವರೆಗೆ ನೀವು ಸುಮ್ಮನೆ ಕೂರುವುದಿಲ್ಲ ಎಂದಾಯಿತು.

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...