ವಿಧಾನ ಪರಿಷತ್ತಿನಲ್ಲಿ ಪ್ರತಿಧ್ವನಿಸಿದ ಆಹಾರ ಪೂರೈಕೆಯಲ್ಲಿ ಬಹುಕೋಟಿ ಹಗರಣ: ತನಿಖೆಗೆ ಕಾಂಗ್ರೆಸ್ ಪಟ್ಟು

Update: 2022-12-26 17:27 GMT

ಬೆಳಗಾವಿ, (ಸುವರ್ಣ ವಿಧಾನಸೌಧ) ಡಿ.26: ರಾಜ್ಯದ ಅಂಗನವಾಡಿಗಳಿಗೆ ಕಳಪೆ ಆಹಾರ ಪೂರೈಕೆ ಮಾಡಿ ಕಪ್ಪು ಪಟ್ಟಿಗೆ ಸೇರಿದ್ದ ಸಂಸ್ಥೆಗಳಿಗೆ ಪುನಃ ಅವಕಾಶ ನೀಡಿರುವ ಪ್ರಕರಣ ವಿಧಾನ ಪರಿಷತ್ತಿನಲ್ಲಿ ಪ್ರತಿಧ್ವನಿಸಿತು.

ಸೋಮವಾರ ವಿಧಾನ ಪರಿಷತ್ತಿನ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್ ಸದಸ್ಯ ಯು.ಬಿ.ವೆಂಕಟೇಶ್, ರಾಜ್ಯದಲ್ಲಿ 137 ಮಹಿಳಾ ಪೂರಕ ಪೌಷ್ಠಿಕ ಆಹಾರ ಉತ್ಪಾದನಾ ಮತ್ತು ತರಬೇತಿ ಕೇಂದ್ರಗಳಿದ್ದು, ಅವುಗಳಲ್ಲಿ ಕೇವಲ 3 ಸಂಘಗಳಿಗೆ ಸರಾಸರಿ 2ಸಾವಿರ ಕೋಟಿ ರೂ., ವಹಿವಾಟು ಇರುವ ಹೊಣೆಗಾರಿಕೆ ನಿಭಾಹಿಸಲು ಅನುಮತಿ ನೀಡಲಾಗಿದೆ. ಈ ಮೂರು ಕೇಂದ್ರಗಳನ್ನು 2012ರಲ್ಲಿ ಅಂದಿನ ಸರಕಾರವೂ ನಿಷೇಧಿಸಿತ್ತು ಎಂದರು.

ಅಲ್ಲದೆ, ನ್ಯಾಯಾಲಯವು ಬಿಐಎಸ್ ಪ್ರಮಾಣ ಪತ್ರ ಪಡೆಯುವವರಿಗೆ ಪ್ರಮಾಣ ಪತ್ರ ಹೊಂದಿದ ಸಂಸ್ಥೆಗಳ ಜೊತೆ ತಾಂತ್ರಿಕ ನೆರವು ಪಡೆಯಲು ಒಪ್ಪಂದ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದರೂ ಕೇವಲ ಮೂರು ಸಂಸ್ಥೆಗಳಿಗೆ ಮಾತ್ರ ಆಹಾರ ತಯಾರಿಕೆಗೆ ಬೇಕಾದ ಪದಾರ್ಥಗಳ ಖರೀದಿಯ ಜವಾಬ್ದಾರಿಯನ್ನು ಸರಕಾರ ನೀಡಿರುವುದು ಸಂಶಯಕ್ಕೆ ಕಾರಣವಾಗಿದೆ.ಸರಕಾರ ಈ ಕೂಡಲೇ ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. 

ಇದಕ್ಕೆ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ, ರಾಜ್ಯ ಸರಕಾರ ಸೂಕ್ರ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.

Similar News