ಕೂಡಿಟ್ಟುಕೊಂಡಿದ್ದ ಹುಂಡಿ ಹಣವನ್ನು ಎಚ್ ಡಿಕೆಗೆ ನೀಡಿ 'ನೀವೇ ಸಿಎಂ ಆಗಬೇಕು ಅಂಕಲ್' ಎಂದ ವಿದ್ಯಾರ್ಥಿನಿಯರು

Update: 2022-12-27 09:09 GMT

ನಾಗಮಂಗಲ, ಡಿ.27: ಕ್ಷೇತ್ರದ ದೇವಲಾಪುರ ಗ್ರಾಮದಲ್ಲಿ ಜೆಡಿಎಸ್ 'ಪಂಚ ರತ್ನ ರಥ ಯಾತ್ರೆ' ವೇಳೆ  ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರನ್ನು ಭೇಟಿಯಾದ ಮೂವರು ವಿದ್ಯಾರ್ಥಿನಿಯರು ತಾವು ಕೂಡಿಟ್ಟುಕೊಂಡಿದ್ದ ಹುಂಡಿ ಹಣವನ್ನು ದೇಣಿಗೆಯಾಗಿ ನೀಡಿ 'ನೀವೇ ಸಿಎಂ ಆಗಬೇಕು ಅಂಕಲ್' ಎಂದು ಶುಭ ಹಾರೈಸಿದ್ದಾರೆ. 

ಸೋಮವಾರ ನಾಗಮಂಗಲ ವಿಧಾನಸಭೆ  ಪಂಚ ರತ್ನ ರಥ ಯಾತ್ರೆ ಭಾಗವಾಗಿ ನಡೆದ ಸಮಾವೇಶದಲ್ಲಿ  ಮೂವರು ವಿದ್ಯಾರ್ಥಿನಿಯರು ದೇಣಿಗೆಯನ್ನು ಹಸ್ತಾಂತರಿಸಿದ್ದಾರೆ. ಜೊತೆಗೆ  ಪಂಚರತ್ನ ಯೋಜನೆಯಡಿ ನಮ್ಮ ಊರಿನಲ್ಲೂ ಹೈಟೆಕ್ ಶಾಲೆ ಮತ್ತು ಆಂಗ್ಲ ಮಾಧ್ಯಮ ಶಾಲೆ ಮಾಡಿಸಿಕೊಡುವಂತೆ ಕುಮಾರಸ್ವಾಮಿ ಅವರಲ್ಲಿ ಮನವಿ ಮಾಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಕುಮಾರಸ್ವಾಮಿ,  'ಪಂಚರತ್ನ ರಥಯಾತ್ರೆ ನನಗೆ ಅನೇಕ ಮಾನವೀಯ ಮುಖಗಳನ್ನು ಪರಿಚಯಿಸುತ್ತಿದೆ. ನಾಗಮಂಗಲದಲ್ಲಿ ರಥಯಾತ್ರೆ ನಿಮಿತ್ತ ನಡೆದ ಬೃಹತ್ ಸಮಾವೇಶದಲ್ಲಿ ನನ್ನನ್ನು ಹುಡುಕಿಕೊಂಡು ಬಂದ ಈ ಮೂವರು ಹೆಣ್ಣುಮಕ್ಕಳ ಮಮತೆ, ಕಾರುಣ್ಯವನ್ನು ಕಂಡು ನನ್ನ ಹೃದಯ ಉಕ್ಕಿಬಂದಿದೆ' ಎಂದು ಹೇಳಿದ್ದಾರೆ. 

'ಮೋನಿಶಾ, ಪಾವನಿ, ಶೋಭಾ ಎಂಬ ಮಕ್ಕಳು, ತಾವು ಕೂಡಿಟ್ಟುಕೊಂಡಿದ್ದ ಹುಂಡಿ ಹಣವನ್ನು ನನಗೆ ದೇಣಿಗೆಯಾಗಿ ನೀಡಿದರು. ಈ ಸಂದರ್ಭದಲ್ಲಿ ಅವರು ಹೇಳಿದ ಮಾತುಗಳು ಶಿಕ್ಷಣದ ಕುರಿತ ನನ್ನ ದೃಷ್ಟಿಕೋನಕ್ಕೆ ಮತ್ತಷ್ಟು ಸ್ಪಷ್ಟತೆ ನೀಡಿತು. ಈ ಮಾತುಗಳನ್ನು ನಾನು ಶುದ್ಧ ಅಂತಃಕರಣದಿಂದ ಕೇಳಿಸಿಕೊಂಡಿದ್ದೇನೆ. ಅವರ ಬೇಡಿಕೆಯನ್ನು ತಪ್ಪದೇ ಈಡೇರಿಸುತ್ತೇನೆ.' ಎಂದು ಬರೆದುಕೊಂಡಿದ್ದಾರೆ. 

Similar News