×
Ad

ವಕೀಲರ ರಕ್ಷಣೆಗೆ ಕಾನೂನು ಅನುಷ್ಠಾನಗೊಳಿಸಲು ಸಿದ್ದರಾಮಯ್ಯ ಆಗ್ರಹ

Update: 2022-12-28 17:40 IST

ಬೆಳಗಾವಿ(ಸುವರ್ಣ ವಿಧಾನಸೌಧ), ಡಿ.28: ರಾಜ್ಯದ ವಿವಿಧ ಜಿಲ್ಲೆಗಳ ವಕೀಲರು ತಮಗೆ ಕಾನೂನಾತ್ಮಕ ರಕ್ಷಣೆ ಬೇಕು ಎಂಬ ಕಾರಣಕ್ಕೆ ಬೆಳಗಾವಿಯ ಸುವರ್ಣ ವಿಧಾನಸೌಧದ ಬಳಿ ಪ್ರತಿಭಟನೆ ಹಮ್ಮಿಕೊಂಡಿದ್ದು, ನ್ಯಾಯ ಕೊಡಿಸುವ ಮಹತ್ತರ ಕಾಯಕ ನಿರ್ವಹಿಸುತ್ತಿರುವ ಅವರ ಬೇಡಿಕೆಯನ್ನು ಸರಕಾರ ಸಕಾರಾತ್ಮಕವಾಗಿ ಆಲಿಸಿ, ಆದಷ್ಟು ಶೀಘ್ರ ಈಡೇರಿಸಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು.

ಬುಧವಾರ ವಿಧಾನಸಭೆಯ ಶೂನ್ಯವೇಳೆಯಲ್ಲಿ ವಕೀಲರ ಪ್ರತಿಭಟನೆ ಕುರಿತು ಪ್ರಸ್ತಾಪಿಸಿದ ಅವರು, ರಾಜ್ಯದ ವಕೀಲರ ಮೇಲೆ ದೌರ್ಜನ್ಯ ಮತ್ತು ಹಲ್ಲೆಗಳು ಆಗುತ್ತದೆ ಎಂಬ ಕಾರಣಕ್ಕೆ ತಮಗೆ ರಕ್ಷಣೆ ನೀಡುವ ಕಾನೂನು ಬೇಕು ಎಂದು ಬೆಂಗಳೂರು ಬಾರ್ ಕೌನ್ಸಿಲ್ ಅಸೋಸಿಯೇಷನ್ ನ ಹಿರಿಯ ನ್ಯಾಯವಾದಿಗಳು ಒಂದು ಕರಡು ಮಸೂದೆಯನ್ನು ತಯಾರು ಮಾಡಿದ್ದಾರೆ ಎಂದರು.

ಈಗಾಗಲೇ ಮುಖ್ಯಮಂತ್ರಿ ಹಾಗೂ ಕಾನೂನು ಸಚಿವರನ್ನು ಭೇಟಿಯಾಗಿ ವಕೀಲರರು ಈ ಬಗ್ಗೆ ಮನವಿ ನೀಡಿದ್ದಾರೆ.ನಿನ್ನೆ ಸುವರ್ಣ ವಿಧಾನಸೌಧದ ಮುಂಭಾಗ ಪ್ರತಿಭಟನೆ ಹಾಗೂ ಮುತ್ತಿಗೆ ಹಾಕುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಹಿರಿಯ ವಕೀಲರಾದ ಉದಯ್ ಹೊಳ್ಳ, ಹನುಮಂತರಾಯರು, ಎ.ಎಸ್.ಪೊನ್ನಣ್ಣ ಸೇರಿಕೊಂಡು ಒಂದು ಕರಡು ಮಸೂದೆಯನ್ನು ತಯಾರು ಮಾಡಿದ್ದಾರೆ ಎಂದು ಅವರು ಹೇಳಿದರು.

ವಕೀಲರು ನ್ಯಾಯ ಒದಗಿಸಲು ಕಕ್ಷಿದಾರರ ಪರವಾಗಿ ವಾದ ಮಾಡುತ್ತಾರೆ.ಇದರಿಂದ ಅನೇಕ ಬಾರಿ ಎದುರಿನವರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ.ಇಂಥವರಿಗೆ ರಕ್ಷಣೆ ಇಲ್ಲದೆ ಹೋದರೆ ನಿರ್ಭೀತವಾಗಿ ನ್ಯಾಯ ಒದಗಿಸಲು ಕಷ್ಟವಾಗುತ್ತದೆ.ವಕೀಲರು ತಯಾರು ಮಾಡಿರುವ ಕರಡು ಮಸೂದೆಯನ್ನು ಕಾನೂನು ಇಲಾಖೆ ಪರಿಶೀಲನೆ ಮಾಡಿ, ಸಮರ್ಪಕ ಅನ್ನಿಸಿದಲ್ಲಿ ಕೂಡಲೇ ಒಂದು ಕಾನೂನನ್ನು ಜಾರಿ ಮಾಡಬೇಕು ಎಂದು ರಾಜ್ಯದ ಎಲ್ಲ ವಕೀಲರ ಪರವಾಗಿ ಸರಕಾರವನ್ನು ಒತ್ತಾಯಿಸುವುದಾಗಿ ಸಿದ್ದರಾಮಯ್ಯ ತಿಳಿಸಿದರು.

ಇದಕ್ಕೆ ಉತ್ತರ ನೀಡಿದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಈ ಬಗ್ಗೆ ಕಾನೂನು ಇಲಾಖೆ ತಿಳಿಸಿ, ಕರಡು ಮಸೂದೆ ಬಗ್ಗೆ ಚರ್ಚೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

Similar News