ಮಧುಗಿರಿ: ನದಿಯಲ್ಲಿ ಈಜಲು ಹೋದ ಒಂದೇ ಕುಟುಂಬದ ಇಬ್ಬರು ಬಾಲಕಿಯರು ಮೃತ್ಯು

Update: 2022-12-28 12:59 GMT

ಮಧುಗಿರಿ,(ತುಮಕೂರು) ಡಿ. 28: ತಾಲೂಕಿನ ವೀರಾಪುರದಲ್ಲಿ ಜೀವನದಿ ಜಯಮಂಗಲಿ ನದಿಯಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕಿಯರು ನೀರು ಪಾಲಾಗಿರುವ ಘಟನೆ ಬುಧವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ನಡೆದಿದೆ.

ಮೃತರನ್ನು 8 ವರ್ಷದ ಪ್ರಿಯಾಂಕಾ, 9 ವರ್ಷದ ಬಿಂದು ಎಂದು ಗುರುತಿಸಲಾಗಿದ್ದು, ಇಬ್ಬರೂ ಸಹೋದರಿಯರಾಗಿದ್ದಾರೆ ಎಂದು ತಿಳಿದು ಬಂದಿದೆ.

ಗ್ರಾಮದ ಬಳಿ ಹರಿಯುವ ಜಯಮಂಗಲಿ ನದಿಗೆ ಚೆಕ್ ಡ್ಯಾಂ ನಿರ್ಮಿಸಲಾಗಿದ್ದು, ಈ ಚೆಕ್ ಡ್ಯಾಂನಲ್ಲಿದ್ದ ನೀರಿನಲ್ಲಿ ಈಜಲು ಹೋಗಿದ್ದ ಐವರು ಮಕ್ಕಳ  ಮೂವರನ್ನು ಬಟ್ಟೆ ಒಗೆಯುತ್ತಿದ್ದ ಮಹಿಳೆಯರು ರಕ್ಷಿಸಿದ್ದಾರೆ. ಆದರೆ ಉಳಿದ ಇಬ್ಬರು ಈಜು ಬರದೇ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆನ್ನಲಾಗಿದೆ. 

ಮೃತ ಬಾಲಕಿಯರು ಕೆಂಪಾಪುರ ಗ್ರಾಮದ ಬಾಬು ಹಾಗೂ ಲಕ್ಷ್ಮೀನಾರಾಯಣ್ ಅವರ ಮಕ್ಕಳಾಗಿದ್ದು , ಈ ಸಂಬಂಧ ಕೊಡಗೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Similar News