ಜನರಲ್ಲಿ ವೈಜ್ಞಾನಿಕ ಮನೋಧರ್ಮ ಬೆಳೆಸುವುದು ಶಿಕ್ಷಣದ ಗುರಿಯಾಗಬೇಕು: ಪ್ರೊ. ಬರಗೂರು ರಾಮಚಂದ್ರಪ್ಪ
ತುಮಕೂರು.ಡಿ.28: ಜನರಲ್ಲಿ ವೈಜ್ಞಾನಿಕ ಮನೋಧರ್ಮ ಬೆಳೆಸುವುದು ಶಿಕ್ಷಣದ ಗುರಿಯಾಗಬೇಕು ಎಂದು ಸಾಹಿತಿ ನಾಡೋಜ ಬರಗೂರು ರಾಮಚಂದ್ರಪ್ಪ ಪ್ರತಿಪಾದಿಸಿದ್ದಾರೆ.
ನಗರದ ಶ್ರೀಸಿದ್ದಾರ್ಥ ಮೆಡಿಕಲ್ ಕಾಲೇಜು ಆವರಣದಲ್ಲಿ ಕರ್ನಾಟಕ ರಾಜ್ಯವೈಜ್ಞಾನಿಕ ಸಂಶೋಧನಾ ಪರಿಷತ್ ಆಯೋಜಿಸಿದ್ದ ರಾಜ್ಯಮಟ್ಟದ 2ನೇ ವೈಜ್ಞಾನಿಕ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು,ಇಂದು ಅತಿ ಹೆಚ್ಚು ವಿದ್ಯಾವಂತರೇ ಮೂಢನಂಬಿಕೆಗಳನ್ನು ಪ್ರತಿಪಾದಿಸುತಿದ್ದು, ಹಾಗಾಗಿಯೇ ವಿದ್ಯಾವಂತರೆಲ್ಲಾ ವಿವೇಕವಂತರಲ್ಲ. ಅವಿದ್ಯಾವಂತರಲ್ಲ,ಅವಿವೇಕಿಗಳಲ್ಲ ಎಂಬ ಮಾತು ಪ್ರಚಲಿತದಲ್ಲಿದೆ ಎಂದರು.
ವೈಜ್ಞಾನಿಕ ಮನೋಧರ್ಮವೆಂಬುದು ಮನುಷ್ಯನಲ್ಲಿ ಮಾನವೀಯತೆ,ಆಂತಃಕರಣ,ಸಮಾನತೆ,ಸಹಬಾಳ್ವೆಯನ್ನು ಪ್ರತಿನಿಧಿಸುತ್ತದೆ. ಅದು ಎಕಮುಖಿಯಲ್ಲ.ಅದಕ್ಕೆ ಬಹುಮುಖಿ ಆಯಾಮವಿದೆ.ಆಸ್ಥಿಕನಾಗಿದ್ದು, ನಾಸ್ಥಿಕನ ಅಭಿಪ್ರಾಯವನ್ನು ಗೌರವಿಸುವ, ನಾಸ್ಥಿಕನಾಗಿದ್ದು ಅಸ್ಥಿಕನ ಅಭಿಪ್ರಾಯವನ್ನು ಕೇಳುವ ಮನಸ್ಥಿತಿ ಬೆಳೆಸಿಕೊಳ್ಳಬೇಕು.ಇದನ್ನ ಬುದ್ದ,ಬಸವ, ಅಂಬೇಡ್ಕರ್, ಕುವೆಂಪು, ಗಾಂಧಿ, ಸ್ವಾಮಿ ವಿವೇಕಾನಂದ ಮಾಡಿ ತೋರಿಸಿದ್ದಾರೆ.ಆದರೆ ಇಂದು ಅಸಮಾನತೆ, ಅಮಾನಿಯತೆ, ಅವಾಸ್ತವ ಅಂಶಗಳೇ ಹೆಚ್ಚು ಪ್ರಜ್ವಲಿಸುತ್ತಿವೆ. ಸ್ವಾತಂತ್ರ್ಯ ಆಲೋಚನೆಯನ್ನು ಜನರು ಮರೆತಿರುವಂತೆ ಕಂಡು ಬರುತ್ತಿದೆ.ಇವುಗಳ ಕುರಿತು ಪೂರ್ವಗ್ರಹ ರಹಿತ ಸಂವಾದ ಅಗತ್ಯವಿದೆ ಎಂದು ಡಾ.ಬರಗೂರು ರಾಮಚಂದ್ರಪ್ಪ ತಿಳಿಸಿದರು.
ಇಂದು ದೇವರು, ಧರ್ಮದ ಹೆಸರಿನಲ್ಲಿ ಹೆಚ್ಚು ಜನರನ್ನು ಶೋಷಣೆಗೆ ಒಳಪಡಿಸಲಾಗುತ್ತಿದೆ.ಇಂದು ಮನುಷ್ಯನಿಗಿಂತ ಹೆಚ್ಚು ಶೋಷಣೆಗೆ ಒಳಗಾಗುತ್ತಿರುವುದು ದೇವರುಗಳು. ಸಾಮಾಜಿಕ ಕೇಡು ಮತ್ತು ಮೌಢ್ಯ ವಿರೋಧಿಸುವ ಕೆಲಸವನ್ನು,ವೈಜ್ಞಾನಿಕ ಮನೋಧರ್ಮ ಉಳ್ಳವರು ಮಾಡಬೇಕಿದೆ. ಮನಃಸಾಕ್ಷಿ, ಆತ್ಮಸಾಕ್ಷಿಗೆ ವಿರುದ್ಧವಾಗಿ ನಡೆದುಕೊಳ್ಳದಿರುವುದೇ ನಿಜವಾದ ವೈಜಾನಿಕ ಮನೋಧರ್ಮ ಎಂದು ಬರಗೂರು ರಾಮಚಂದ್ರಪ್ಪ ನುಡಿದರು.
ಶಿವಮೊಗ್ಗದಲ್ಲಿ ನಡೆದ 1ನೇ ವೈಜ್ಞಾನಿಕ ಸಮ್ಮೇಳನದ ಅಧ್ಯಕ್ಷರಾದ ಕೆ.ಎಸ್.ಕಿರಣ್ ಕುಮಾರ್,2ನೇ ವೈಜ್ಞಾನಿಕ ಸಮ್ಮೇಳನದ ಅಧ್ಯಕ್ಷರಾಗಿರುವ ಜಸ್ಟಿಸ್ ಹೆಚ್.ಎನ್.ನಾಗಮೋಹನ್ ದಾಸ್ ಅವರಿಗೆ ಅಧಿಕಾರ ಹಸ್ತಾಂತರಿಸಿ ಮಾತನಾಡಿದ ಅವರು,ವೈಜ್ಞಾನಿಕ ಮನೋಧರ್ಮವನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ ನಿಟ್ಟಿನಲ್ಲಿ ನಾವೆಲ್ಲರೂ ಶ್ರಮಿಸಬೇಕಿದೆ.ಇದರ ಜೊತೆಗೆ ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳೆವಣಿಗೆಯ ದುಷ್ಪರಿಣಾಮಗಳ ಬಗ್ಗೆ ಅರ್ಥ ಮಾಡಿಕೊಂಡು ಎಚ್ಚರಿಸುವ ಕೆಲಸ ಮಾಡಬೇಕಾಗಿದೆ.ಕೃತಕ ಬುದ್ದಿಮತ್ತೆಯಿಂದ ಇಂದು ನಮ್ಮ ಕೈಯಲ್ಲಿರುವ ಮೊಬೈಲ್ ಉತ್ಪಾಧಕ ಕಂಪನಿಗಳಿಗೆ ಗ್ರಾಹಕರನ್ನು ಹುಡುಕಿಕೊಡುವ ಸಾಧನಗಳಾಗಿ ಪರಿವರ್ತನೆಯಾಗಿವೆ.ನಮಗೆ ಗೊತ್ತಿಲ್ಲದೆ ನಮ್ಮ ಮಾಹಿತಿ ಕಳುವಾಗುತ್ತಿದೆ.ಈ ಬಗ್ಗೆ ನಾವುಗಳು ಎಚ್ಚರಿಕೆ ವಹಿಸಬೇಕಾಗಿದೆ ಎಂದರು.
ರಾಜ್ಯಮಟ್ಟದ 2ನೇ ವೈಜ್ಞಾನಿಕ ಸಮ್ಮೇಳನದ ಅಧ್ಯಕ್ಷರಾದ ಜಸ್ಟಿಸ್ ನಾಗಮೋಹನ್ದಾಸ್ ಮಾತನಾಡಿ, ಅಭಿವ್ಯಕ್ತಿ ಸ್ವಾತಂತ್ರದ ರಕ್ಷಣೆ ಇಲ್ಲದೆ, ವೈಜ್ಞಾನಿಕ ಮನೋಧರ್ಮವನ್ನು ಬೆಳೆಸಲು ಸಾಧ್ಯವಿಲ್ಲ. ಟೀಕಿಸುವವರನ್ನು, ವಿರ್ಮಶೆ ಮಾಡುವವರನ್ನು ಪ್ರಶ್ನಿಸುವವರನ್ನು ಅಪರಾಧಿಗಳಂತೆ ಬಿಂಬಿಸಿ, ಜೈಲಿಗೆ ಕಳುಹಿಸಲಾಗುತ್ತಿದೆ. ಪೆಗಾಸಿಸ್ ಎಂಬ ತಂತ್ರಜ್ಞಾನದ ಮೂಲಕ ನಮ್ಮ ಖಾಸಗಿತನವನ್ನು ಕದಿಯಲಾಗುತ್ತಿದೆ. ಪ್ರಶ್ನಿಸುವವರ ಮೊಬೈಲ್ಗಳಿಗೆ ದೇಶವಿರೋಧಿ ದಾಖಲೆಗಳನ್ನು ತುಂಬಿ,ಅಪರಾಧಿಗಳನ್ನಾಗಿಸಿ, ಕಾರಾಗೃಹದಲ್ಲಿ ಕೊಳೆಯುವಂತೆ ಮಾಡಲಾಗುತ್ತಿದೆ. ಇದಕ್ಕೆ ಫಾದರ್ ಸ್ಟಾನ್ ಸ್ವಾಮೀ ಪ್ರಕರಣವೇ ಜೀವಂತ ಸಾಕ್ಷಿ. ಅಭಿವ್ಯಕ್ತಿ ಸ್ವಾತಂತ್ರ್ಯ ರಕ್ಷಸಿಕೊಳ್ಳದ ಹೊರತು ಸಂವಿಧಾನದ ಆಶಯಗಳು ಈಡೇರಲು ಸಾಧ್ಯವಿಲ್ಲ. ನಂಬಿಕೆ, ಮೂಢನಂಬಿಕಗಳ ನಡುವೆ ತದ್ವರುದ್ಧ ಅಂಶಗಳಿದ್ದರೂ ಕೊಲೆಯನ್ನೇ ನಂಬಿಕೆ ಎಂಬಂತೆ ಬಿಂಬಿಸುವ ಪ್ರಕ್ರಿಯೆ ನಡೆಯುತ್ತಿದೆ. ಇಂದು ಮೌಢ್ಯಕ್ಕೆ ಹೆಚ್ಚು ಬಲಿಯಾಗುತ್ತಿರುವುದು ಮಹಿಳೆಯರು. ಮೂಢನಂಬಿಕೆ ವಿರುದ್ದ ಹೋರಾಟ ನಡೆಸುವಂತಹ ವೈಜ್ಞಾನಿಕ ಮನೋಧರ್ಮವನ್ನು ಈ ವೈಜ್ಞಾನಿಕ ಸಮ್ಮೇಳನ ಹುಟ್ಟು ಹಾಕಿ, ಆ ಮೂಲಕ ನೆಮ್ಮದಿ, ಶಾಂತಿಯ ಸಮ ಸಮಾಜ ನಿರ್ಮಾಣಕ್ಕೆ ದಾರಿ ಮಾಡಿಕೊಡಲಿ ಎಂಬ ಆಶಯವನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀರಾಮಕೃಷ್ಣ ಮಠದ ಶ್ರೀವೀರೇಶಾನಂದಸರಸ್ವತಿ ಸ್ವಾಮೀಜಿ ಮಾತನಾಡಿ, ಯಶಸ್ಸನ್ನು ಗಳಿಸಲು ಅನ್ಯ ಮಾರ್ಗಗಳಿವೆ. ಆದರೆ ಬದುಕನ್ನು ಮೌಲ್ಯಯುತಗೊಳಿಸಿಕೊಳ್ಳಲು ಕಳ್ಳದಾರಿಗಳಿಲ್ಲ. ಕೇವಲ ಫಲಿತಾಂಶದ ಆಧಾರ ಮೇಲಿರುವ ಇಂದಿನ ಶಿಕ್ಷಣ ಪದ್ದತಿಯಿಂದ ಮಕ್ಕಳಲ್ಲಿ ಮಾನವೀಯತೆ, ಅಂತಃಕರಣ ಕಡಿಮೆಯಾಗುತ್ತಿದು. ನೈತಿಕ ಪ್ರಜ್ಞೆ ಮರೆಯಾಗುತ್ತಿದೆ.ಮೂರ್ತಿ ಪೂಜೆ ಆದ್ಯಾತ್ಮಿಕತೆಯ ಆರಂಭವೇ ಹೊರತು ಅದೇ ಅಂತಿಮವಲ್ಲ.ಹಾಗಾಗಿ ಪ್ರತಿಯೊಬ್ಬರಲ್ಲಿಯೂ ಒಳ್ಳೆಯ ಮತ್ತು ಕೆಟ್ಟ ಗುಣಗಳು ಇದ್ದೇ ಇರುತ್ತೇವೆ.ಒಳ್ಳೆಯ ಗುಣಗಳನ್ನು ಉದ್ದೀಪನಗೊಳಿಸುವ ಕೆಲಸ ಆಗಬೇಕೆಂದರು.
ಕಲ್ಪಸಿರಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದ ಪತ್ರಕರ್ತ ಎಸ್.ನಾಗಣ್ಣ, ವೈಜ್ಞಾನಿಕ ಮನೋಧರ್ಮ ಎಂಬುದು ಇಂದು ಅತ್ಯಂತ ಪ್ರಸ್ತುತವಾಗಿದ್ದು, ಮೋಸ ಹೋಗುವವರನ್ನು ರಕ್ಷಿಸಲು ಇದೊಂದು ಆಸ್ತ್ರವಾಗಬೇಕೆಂದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಸ್ವಾಗತ ಸಮಿತಿ ಅಧ್ಯಕ್ಷ ಡಾ.ಜಿ.ಎಸ್.ಶ್ರೀಧರ್,ವೈಜ್ಞಾನಿಕ ಮನೋಧರ್ಮ ಎಂಬುದು ದೇಶ ಭಕ್ತಿಯ ಒಂದು ಅಂಗ.ದೇಶವೆಂದರೆ ಕೇವಲ ಕಟ್ಟಡಗಳು, ರಸ್ತೆಗಳಲ್ಲ.ಅದಕ್ಕೂ ಮೀಗಿಲಾದ ಮಾನವೀಯ,ಸಮಸಮಾಜದ ಕನಸು. ಮೂಢನಂಬಿಕೆಯ ಹೆಸರಿನಲ್ಲಿ ಜನರ ಅಲೋಚನೆಗಳಿಗೆ ವಿಷ ತುಂಬು ಕೆಲಸ ನಡೆಯುತ್ತಿದೆ.ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ವಿಜ್ಞಾನ ಗ್ರಾಮದ ಮೂಲಕ ಮಕ್ಕಳಲ್ಲಿ ವೈಜ್ಞಾನಿಕ ಮನೋಧರ್ಮ ಹುಟ್ಟು ಹಾಕುವ ಪ್ರಕ್ರಿಯೆ ನಡೆಯಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ.ರಾ.ವೈ.ಸಂ.ಪರಿಷತ್ತಿನ ಅಧ್ಯಕ್ಷ ಡಾ.ಹುಲಿಕಲ್ ನಟರಾಜ್ ವಹಿಸಿದ್ದರು.ವೇದಿಕೆಯಲ್ಲಿ ಚಿಂತಕ ಕೆ.ದೊರೈರಾಜು, ರಾ.ವೈ.ಸಂ.ಪರಿಷತ್ತಿನ ತುಮಕೂರು ಜಿಲ್ಲಾಧ್ಯಕ್ಷ ಡಾ.ಸಿ.ಎಸ್.ಮೋಹನ್ಕುಮಾರ್,ಡಾ.ಕೆ.ಜಿ.ರಾವ್, ಹಂಪಿನಕೆರೆ ರಾಜೇಂದ್ರ, ಎಸ್.ರೇಣುಕಾ ಪ್ರಸಾದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.