ವಿಧಾನಸಭೆ ಅಧಿವೇಶನ | 12 ವಿಧೇಯಕ ಮಂಡನೆ, 9 ಅಂಗೀಕಾರ: ಸ್ಪೀಕರ್ ಕಾಗೇರಿ
''ಮಾಹಿತಿ ನೀಡದೇ ಗೈರು ಹಾಜರಾದ ಶಾಸಕರು''
ಬೆಳಗಾವಿ, ಡಿ. 30: ಹದಿನೈದನೇ ವಿಧಾನಸಭೆಯ ಹದಿನಾಲ್ಕನೇ ಅಧಿವೇಶನವು ಡಿ. 19ರಂದು ಪ್ರಾರಂಭವಾಗಿ 29ರ ವರೆಗೂ ನಡೆದಿದ್ದು, ಒಟ್ಟು 9 ದಿನಗಳಲ್ಲಿ 41 ಗಂಟೆ 20 ನಿಮಿಷಗಳ ಕಾಲ ಸದನದ ಕಾರ್ಯ ಕಲಾಪ ನಡೆಸಲಾಗಿದೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.
ಶುಕ್ರವಾರ ನಗರದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿವೇಶನದ ಮೊದಲ ದಿನ ಅಗಲಿದ ಗಣ್ಯರಿಗೆ ಸಂತಾಪ ಸೂಚನಾ ನಿರ್ಣಯವನ್ನು ಮಂಡಿಸಿ, ಅಂಗೀಕರಿಸಲಾಗಿದೆ. ವಿಧಾನಸಭೆಯ ಸಭಾಂಗಣದಲ್ಲಿ ಬಸವಣ್ಣ, ವಿವೇಕಾನಂದ, ಸರ್ದಾರ್ ವಲ್ಲಭಭಾಯಿ ಪಟೇಲ್, ಡಾ.ಬಿ.ಆರ್. ಅಂಬೇಡ್ಕರ್, ಸುಭಾಶ್ ಚಂದ್ರಭೋಸ್ ಹಾಗೂ ಸಾವರ್ಕರ್ ಭಾವಚಿತ್ರಗಳನ್ನು ಅನಾವರಣ ಗೊಳಿಸಲಾಯಿತು ಎಂದರು.
ಅಲ್ಲದೇ, ರಾಜ್ಯಪಾಲರಿಂದ ಒಪ್ಪಿಗೆ ಪಡೆದ ವಿಧೇಯಕಗಳ ಬಗ್ಗೆ ಕಾರ್ಯದರ್ಶಿಯವರ ವರದಿಯನ್ನು ಮಂಡಿಸಲಾಗಿದೆ. ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾ ಲೆಕ್ಕಪರಿಶೋಧಕರು ನೀಡಿರುವ ಮಹಾನಗರ ಪಾಲಿಕೆಗಳಲ್ಲಿ ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆ (ಹಂತ-III)ರ ಮೇಲಿನ ಕಾರ್ಯನಿರ್ವಹಣಾ ಲೆಕ್ಕಪರಿಶೋಧನಾ ವರದಿ ಮತ್ತು 2021-22ನೇ ಸಾಲಿನ ಧನವಿನಿಯೋಗ ಲೆಕ್ಕಗಳು ಮತ್ತು ಹಣಕಾಸಿನ ಲೆಕ್ಕಗಳ ಸಂಪುಟ 1 ಮತ್ತು ಎರಡನ್ನು ಸದನದಲ್ಲಿ ಮಂಡಿಸಲಾಗಿದೆ ಎಂದು ಅವರು ವಿವರಿಸಿದರು.
9 ವಿಧೇಯಕಗಳ ಅಂಗೀಕಾರ: ಒಂದು ಹಕ್ಕುಚ್ಯುತಿ ಪ್ರಸ್ತಾವವನ್ನು ಸದನದಲ್ಲಿ ಮಂಡಿಸಿದ್ದು, ಅದನ್ನು ತಿರಸ್ಕರಿಸಲಾಗಿದೆ. ಸದನದಲ್ಲಿ ಆರ್.ವಿ.ದೇಶಪಾಂಡೆ ಅವರಿಗೆ ಅತ್ಯುತ್ತಮ ಶಾಸಕ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಪ್ರಮುಖವಾಗಿ ಈ ಅಧಿವೇಶನದಲ್ಲಿ 12 ವಿಧೇಯಕಗಳನ್ನು ಮಂಡಿಸಲಾಗಿದ್ದು, ಕಳೆದ ಅಧಿವೇಶನದಲ್ಲಿ ಬಾಕಿ ಇದ್ದ 1 ವಿಧೇಯಕ, ವಿಧಾನ ಪರಿಷತ್ತಿನಿಂದ ಅಂಗೀಕಾರವಾದ ರೂಪದಲ್ಲಿರುವ 2 ವಿಧೇಯಕಗಳು ಹಾಗೂ ಧನವಿನಿಯೋಗ ವಿಧೇಯಕವೂ ಸೇರಿದಂತೆ ಒಟ್ಟು 9 ವಿಧೇಯಕಗಳನ್ನು ಅಂಗೀಕರಿಸಲಾಗಿದೆ ಎಂದು ಅವರು ಹೇಳಿದರು.
ನಿಯಮ 60 ರಡಿಯಲ್ಲಿ ನೀಡಿದ್ದ ನಿಲುವಳಿ ಸೂಚನೆಗಳನ್ನು ನಿಯಮ 69ಕ್ಕೆ ಪರಿವರ್ತಿಸಿರುವುದನ್ನು ಸೇರಿಸಿ ಒಟ್ಟು 17 ಸೂಚನೆಗಳನ್ನು ನಿಯಮ 69 ರಡಿಯಲ್ಲಿ ಸ್ವೀಕರಿಸಿದ್ದು, 5 ಸೂಚನೆಗಳನ್ನು ನಿಯಮ 69ರಡಿಯಲ್ಲಿ ಚರ್ಚಿಸಲಾಗಿದೆ ಎಂದು ಕಾಗೇರಿ ತಿಳಿಸಿದರು.
ಮಹಾರಾಷ್ಟ್ರ ಅನಾವಶ್ಯಕವಾಗಿ ಸೃಷ್ಟಿಸಿರುವ ಗಡಿ ವಿವಾದವನ್ನು ಖಂಡಿಸಿ, ರಾಜ್ಯದ ಹಿತರಕ್ಷಣೆಗೆ ಕಟಿ ಬದ್ಧರಾಗಿರುವುದಾಗಿ ಸದನವು ಸರ್ವಾನುಮತದಿಂದ ನಿರ್ಣಯ ಅಂಗೀಕರಿಸಿದೆ. ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತು ಸದನದಲ್ಲಿ ವಿಶೇಷ ಚರ್ಚೆ ನಡೆಸಲಾಗಿದೆ ಎಂದು ಅವರು ಹೇಳಿದರು.
ವಿಧಾನ ಮಂಡಲದ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯು ಸೇರಿದಂತೆ ವಿವಿಧ ಸಮಿತಿಗಳ 18 ವರದಿಗಳನ್ನು ಸದನದಲ್ಲಿ ಮಂಡಿಸಲಾಗಿದ್ದು, ಸಭೆಯ ಮುಂದಿಡಲಾದ ಕಾಗದ ಪತ್ರಗಳ 1, 2 ಮತ್ತು 3ನೆ ಪಟ್ಟಿಯಿಂದ 24 ಅಧಿಸೂಚನೆಗಳು, ಒಂದು ಅಧ್ಯಾದೇಶ, 106 ವಾರ್ಷಿಕ ವರದಿಗಳು ಹಾಗೂ 122 ಲೆಕ್ಕಪರಿಶೋಧನಾ ವರದಿಗಳನ್ನು ಸದನದಲ್ಲಿ ಮಂಡಿಸಲಾಗಿದೆ ಎಂದು ಸ್ಪೀಕರ್ ಮಾಹಿತಿ ನೀಡಿದರು.
ಒಟ್ಟು 2,125 ಪ್ರಶ್ನೆಗಳನ್ನು ಸ್ವೀಕರಿಸಲಾಗಿದ್ದು, ಸದನದಲ್ಲಿ ಉತ್ತರಿಸಬೇಕಾಗಿದ್ದ 150 ಪ್ರಶ್ನೆಗಳ ಪೈಕಿ 146 ಪ್ರಶ್ನೆಗಳಿಗೆ ಹಾಗೂ ಲಿಖಿತ ಮೂಲಕ ಉತ್ತರಿಸುವ 1,923 ಪ್ರಶ್ನೆಗಳ ಪೈಕಿ 1,614 ಪ್ರಶ್ನೆಗಳಿಗೆ ಉತ್ತರಗಳನ್ನು ಸ್ವೀಕರಿಸಲಾಗಿದೆ.
ನಿಯಮ 351 ರಡಿಯಲ್ಲಿ 160 ಸೂಚನೆಗಳನ್ನು ಅಂಗೀಕರಿಸಿದ್ದು, 101 ಸೂಚನೆಗಳ ಉತ್ತರಗಳನ್ನು ಸ್ವೀಕರಿಸಲಾಗಿದೆ ಎಂದು ಅವರು ತಿಳಿಸಿದರು.
ಗಮನ ಸೆಳೆಯುವ 289 ಸೂಚನೆಗಳ ಪೈಕಿ 85 ಸೂಚನೆಗಳನ್ನು ಚರ್ಚಿಸಲಾಗಿದೆ. 190 ಸೂಚನೆಗಳಿಗೆ ಲಿಖಿತ ಉತ್ತರವನ್ನು ಸ್ವೀಕರಿಸಲಾಗಿದೆ. ಶೂನ್ಯವೇಳೆಯಲ್ಲಿ ಒಟ್ಟು 40 ಸೂಚನೆಗಳನ್ನು ಚರ್ಚಿಸಲಾಗಿದೆ ಎಂದು ಕಾಗೇರಿ ಹೇಳಿದರು.
ಸುವರ್ಣ ವಿಧಾನಸೌಧ ಆವರಣದಲ್ಲಿ ಮಹಾತ್ಮ ಗಾಂಧಿ, ಅಂಬೇಡ್ಕರ್, ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪಿಸಲು ಭೂಮಿ ಪೂಜೆ ನೆರವೇರಿಸಲಾಗಿದೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್, ಪೊಲೀಸ್ ಆಯುಕ್ತ ಎಂ.ಬಿ.ಬೋರಲಿಂಗಯ್ಯ ವಿಧಾನಸಭೆಯ ಕಾರ್ಯದರ್ಶಿ ವಿಶಾಲಾಕ್ಷಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ್ ಪಾಟೀಲ್ ಸೇರಿದಂತೆ ಪ್ರಮುಖರಿದ್ದರು.
ಮಾಹಿತಿ ನೀಡದೇ ಶಾಸಕರು ಗೈರು :ಈ ಬಾರಿಯ ಅಧಿವೇಶನದಲ್ಲಿ ಶೇ.74 ರಷ್ಟು ಹಾಜರಾತಿ ಇತ್ತು. ಆದರೆ, ನನಗೆ ಮಾಹಿತಿ ನೀಡದೆ ಶಾಸಕರಾದ ದಿನೇಶ್ ಗುಂಡೂರಾವ್, ಝಮೀರ್ ಅಹ್ಮದ್ ಖಾನ್, ಅನಿತಾ ಕುಮಾರಸ್ವಾಮಿ, ಡಿ.ಸಿ.ಗೌರಿಶಂಕರ್, ಹರೀಶ್ ಪುಂಜಾ, ಎಂ.ಕೃಷ್ಣಪ್ಪ (ವಿಜಯನಗರ), ಶರತ್ ಬಚ್ಚೇಗೌಡ, ಸಿ.ಎಸ್.ಪುಟ್ಟರಾಜು, ರವೀಂದ್ರ ಶ್ರೀಕಂಠಯ್ಯ ಗೈರು ಹಾಜರಾಗಿದ್ದರು ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.