ಸುಳ್ಳು ಹೇಳುವುದರಲ್ಲಿ ಬಿಜೆಪಿಯವರು ನಿಸ್ಸೀಮರು, ಇವರ ವಿಶ್ವಗುರು ಸುಳ್ಳಿನ ಸರದಾರ: ಬಿ.ಕೆ. ಹರಿಪ್ರಸಾದ್ ವಾಗ್ದಾಳಿ

'' ಮಹದಾಯಿ ವಿಚಾರದಲ್ಲಿ ಬಿಜೆಪಿ ನಾಯಕರಿಂದ ಕಣ್ಣು ಒರೆಸುವ ತಂತ್ರ''

Update: 2023-01-02 10:00 GMT

ಹುಬ್ಬಳ್ಳಿ: 'ಹೆಣದ ಮೇಲೆ ವಿಜಯೋತ್ಸವ ಮಾಡುವ ಜನರು ಏನೂ ಬೇಕಾದರೂ ಮಾಡತ್ತಾರೆ' ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಗೆ ಮಹದಾಯಿ ವಿಚಾರವಾಗಿ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್ ತಿರುಗೇಟು ನೀಡಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೃಷ್ಣ ಮೇಲ್ಡಂಡೆ ಯೋಜನೆ ಕುರಿತಂತೆ ಗೆಜೆಟ್ ನೋಟಿಫಿಕೇಶನ್ ಅನುಷ್ಠಾನ ಆಗಬೇಕೆಂಬ ಕಾಂಗ್ರೆಸ್ ಪಕ್ಷದಿಂದ ವಿಜಯಪುರದಲ್ಲಿ ಸಮಾವೇಶ ಮಾಡಿದ್ದೆವು. ಮಹದಾಯಿ ವಿಷಯದಲ್ಲಿ ಬಿಜೆಪಿ ಡಿಪಿಆರ್ ಮಾಡಿಕೊಂಡು ಬಂದಿದ್ದೇವೆ ಅಂತಾ ಹೇಳತ್ತಾ ಇದ್ದಾರೆ. ಆದರೆ ನಿಜವಾಗಿ ನೋಟಿಪೀಕೇಶನ್ ಮಾಡಬೇಕಾದರೇ ಗೋವಾ ಸರ್ಕಾರ ಒಪ್ಪಿಗೆ ಪಡೆದು ಆಗಬೇಕು. ಇದು ಕಣ್ಣು ಒರೆಸುವ ಕೆಲಸ ಎಂದು ಹರಿಹಾಯ್ದರು.

ಪಂಚಮಸಾಲಿ ಮೀಸಲಾತಿ ವಿಷಯಕ್ಕೆ ಸಂಬಂಧಿಸಿದಂತೆ ಒಂದು ತಿರ್ಮಾನಕ್ಕೆ ಬಂದಿದ್ದೇವೆ ಎಂದು ಹೇಳತ್ತಾರೆ. 9 ಶೆಡ್ಯೂಲ್ ಬರಬೇಕೆಂದರೆ ಸಂವಿಧಾನದ ಡೈರೆಕ್ಟ್ ಪ್ರಿನ್ಸಿಪಲ್ ಅಂತಾ ಇದೆ. 31 ಸಿಯಲ್ಲಿ ಪಾರ್ಲಿಮೆಂಟ್ ನಲ್ಲಿ ಚರ್ಚೆ ಮಾಡಿ ಕಳಿಸಬೇಕಿತ್ತು. ಆದರೆ ಬಿಜೆಪಿಯವರು ನಾವು ಹಾಗೇ ಕೇಂದ್ರಕ್ಕೆ ಕಳಿಸತ್ತೇವೆ ಎಂದು ಹೇಳಿ ಸುಮ್ಮನೆ ನಾಟಕ ಮಾಡತ್ತಾ ಇದ್ದಾರೆ. ಉತ್ತರ ಭಾರತದಲ್ಲಿ ಇರುವಂತೆ ಕರ್ನಾಟಕದ ಜನರು ಮೂರ್ಖರು ಎಂದು ತಿಳಿದುಕೊಂಡಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ಜನರು ಬುದ್ಧಿ ಕಲಿಸತ್ತಾರೆ ಎಂದು ಹರಿಹಾಯ್ದರು.

ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು, ಇವರ ವಿಶ್ವಗುರುನೇ ಸುಳ್ಳಿನ ಸರದಾರ,  ಅದನ್ನು ಅವರ ಚೇಲಾಗಳು ಸಹ ಕಲಿತುಕೊಂಡಿದ್ದಾರೆ. ಚುನಾವಣೆ ಬಂದಾಗ ಬಿಜೆಪಿಯವರು ನಾಲ್ಕು ಜನಕ್ಕೆ ಕೊಲೆ ಮಾಡಿಸಿ ರಾಜಕಾರಣ ಮಾಡುತ್ತಾರೆ. ಆದರೆ ನಾವು ಅಂತಹ ಜನರಲ್ಲ ಎಂದು ಕುಟುಕಿದರು.

ರಾಜ್ಯಗಳ ಏಕೀಕರಣ ಆದ ನಂತರ ರಾಜ್ಯಗಳ ನಡುವೆ ಕೆಲವು ಸಮಸ್ಯೆ ಬರತ್ತೇವೆ. ಅದನ್ನು ದೇಶದ ಪ್ರಧಾನಿಗಳು ಕರೆದು ಸಂದಾನ ಮಾಡಬೇಕಿತ್ತು. ಗಡಿ ವಿಚಾರದಲ್ಲಿ ಪ್ರಧಾನಮಂತ್ರಿ ಬಾಯಿ ಬಿಟ್ಟಿಲ್ಲ.  ಮೇಘಾಲಯ ಅಸ್ಸಾಂ ಗಡಿಯಲ್ಲಿ ಜನರು ಬಂದೂಕು ಹಿಡಿದುಕೊಂಡಿದ್ದಾರೆ. ಗಡಿ ಮತ್ತು ನದಿ ವಿಷಯದಲ್ಲಿ ಪ್ರಧಾನಿಗಳು ಮಧ್ಯೆ ಪ್ರವೇಶ ಮಾಡಿ ಸಮಸ್ಯೆ ಬಗೆಹರಿಸಬೇಕು. ಆದರೆ ಇವರಿಗೆ ಈ ಬಗ್ಗೆ ಮಾತನಾಡೋ ಪುರುಸೋತು ಇಲ್ಲ ಎಂದು ಬಿ.ಕೆ.ಹರಿಪ್ರಸಾದ್ ಹರಿಹಾಯ್ದರು.

Similar News