ಮಂಡ್ಯ: ತಾಯಿ ನಿಗೂಢ ಸಾವಿನ ಬೆನ್ನಲ್ಲೇ ಮಗ ಆತ್ಮಹತ್ಯೆ

Update: 2023-01-02 14:25 GMT

ಮಂಡ್ಯ, ಜ.2: ನೇಣುಬಿಗಿದ ರೀತಿಯಲ್ಲಿ ತಾಯಿಯ ಶವ ಪತ್ತೆಯಾದ ಬೆನ್ನಲ್ಲೇ ಆಕೆಯ ಪುತ್ರನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ವರದಿಯಾಗಿದೆ.

ಸುಭಾಷ್ ನಗರದ ಕ್ರಿಶ್ಚಿಯನ್ ಕಾಲನಿಯ ನಿವಾಸಿ ನಿವೃತ್ತ ಶಿಕ್ಷಕಿ ವೀಣಾ ಜೋದಿನಿ ಮತ್ತು ಇವರ ಮಗ ನಿತಿನ್  ಸಾವನ್ನಪ್ಪಿದವರಾಗಿದ್ದು, ಈ ಸಂಬಂಧ ನಗರದ ಪಶ್ಚಿಮ ಪೊಲೀಸ್ ಠಾಣೆಯಯಲ್ಲಿ ಪ್ರಕರಣ ದಾಖಲಾಗಿದೆ.

ಕ್ರಿಶ್ಚಿಯನ್ ಕಾಲನಿಯ ಎರಡನೇ ಕ್ರಾಸ್‍ನ ತನ್ನ ಮನೆಯಲ್ಲಿ ನಿವೃತ್ತ ಶಿಕ್ಷಕಿ ವೀಣಾ ಜೋದಿನಿ ಅವರ ಮೃತದೇಹ ರವಿವಾರ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾದರೆ, ಸೋಮವಾರ ಬೆಳಗ್ಗೆ ಆಕೆಯ ಮಗ ನಿತಿನ್ ಶವ ನಗರದ ಹೊರವಲಯದ ವಿ.ಸಿ.ಫಾರಂ ಗೇಟ್ ಬಳಿ ರೈಲ್ವೆ ಹಳಿ ಮೇಲೆ ಪತ್ತೆಯಾಗಿದೆ.
 
ತನ್ನ ಮಗನ ಜತೆ ನಿವೃತ್ತ ಜೀವನ ನಡೆಸುತ್ತಿದ್ದ ವೀಣಾ ಅವರು ತನಗೆ ಸೇರಿದ್ದ ಆರ್.ಪಿ.ರಸ್ತೆಯ ಆಸ್ತಿಯನ್ನು ಎರಡು ವರ್ಷದ ಹಿಂದೆ ಮಾರಾಟ ಮಾಡಿದ್ದರು. ಹಣವನ್ನು ಪುತ್ರ ನಿತಿನ್ ದುಂದುವೆಚ್ಚ ಮಾಡಿದ್ದಲ್ಲದೆ, ಲಕ್ಷಾಂತರ ರೂ. ಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ. 

ವೀಣಾ ಅವರ ಮೃತದೇಹವು ಮನೆಯ ಕಿಟಕಿಗೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪರಿಶೀಲನೆ ನಡೆಸಿದ್ದ ಪೊಲೀಸರು ಶವವನ್ನು ಮಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ ನಂತರ, ಈ ಸಂಬಂಧ ಪುತ್ರ ನಿತಿನ್‍ನನ್ನು ವಿಚಾರಣೆ ನಡೆಸಿದ್ದರು ಎಂದು ತಿಳಿದು ಬಂದಿದೆ.

ಈ ಸಂಬಂಧ ಪಶ್ಚಿಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Similar News