ನನ್ನ ನಾಟಕವನ್ನು ತಿರುಚಿದವರ ವಿರುದ್ಧ ಕ್ರಮ ಕೈಗೊಳ್ಳಿ: ಮೈಸೂರು ಕಮಿಷನರ್ ಗೆ ಡಾ.ಚಂದ್ರಶೇಖರ ಕಂಬಾರ ದೂರು

ರಂಗಾಯಣದಲ್ಲಿ ಪ್ರದರ್ಶಗೊಂಡಿದ್ದ ''ಸಾಂಬಶಿವ ಪ್ರಹಸನ''

Update: 2023-01-02 17:06 GMT

ಮೈಸೂರು,ಜ.2: ಮೈಸೂರಿನ ರಂಗಾಯಣದಲ್ಲಿ  ನನ್ನ ನಾಟಕ ''ಸಾಂಬಶಿವ ಪ್ರಹಸನ'' ವನ್ನು  ನನ್ನ ಅನುಮತಿ ಇಲ್ಲದೆ ಪ್ರದರ್ಶಿಸಿದ್ದಲ್ಲದೆ, ಅಸಹ್ಯಕರವಾಗಿ ಪ್ರದರ್ಶ ಮಾಡಿದ್ದು, ಇದಕ್ಕೆ ಕಾರಣರಾದ ಎಲ್ಲರ ಮೇಲೂ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರ ಮೈಸೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.

ಈ ಸಂಬಂಧ ಇ- ಮೇಲ್ ಮೂಲಕ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದು, ಖುದ್ದು ದೂರವಾಣಿ ಮೂಲಕ ಮಾತನಾಡಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಮೈಸೂರಿನ  ರಂಗಾಯಣದಲ್ಲಿ ನನ್ನ ನಾಟಕ ಸಾಂಬಶಿವ ಪ್ರಹಸನವನ್ನು ಅಸಹ್ಯವಾಗಿ ತಿರುಚಿ ಪ್ರದರ್ಶಿಸಿರುವ ಬಗ್ಗೆ ನನಗೆ ತುಂಬ ವಿಷಾದವಾಗಿದೆ. ಮೊದಲನೆಯದಾಗಿ ನನ್ನ ನಾಟಕ ಪ್ರದರ್ಶಿಸುವುದಕ್ಕೆ ನನ್ನ  ಅನುಮತಿ ಕೇಳಲೇ  ಬೇಕಾಗಿತ್ತು. ಆದರೆ ಇವರು ಕೇಳಿಲ್ಲ. ರಂಗಾಯಣವಾದರೂ ನನ್ನ ಅನುಮತಿ ಇಲ್ಲದ ನಾಟಕ ಪ್ರದರ್ಶನಕ್ಕೆ  ಅವಕಾಶ ಕೊಟ್ಟಿರುವುದು ವಿಷಾದಕರ ಎಂದು ತಿಳಿಸಿದ್ದಾರೆ.

ಎರಡನೆಯದಾಗಿ ನನ್ನ ಯಾವುದೇ ನಾಟಕಗಳಲ್ಲಿ ವ್ಯಕ್ತಿಗತ ನಿಂದನೆ ಇರುವುದು ಸಾಧ್ಯವಿಲ್ಲ. ಅನುಮತಿ ಇಲ್ಲದೆ ನಾಟಕವನ್ನು ಪ್ರದರ್ಶಿಸಿದ್ದಕ್ಕೆ ಪ್ರದರ್ಶಿಸಲು ಅವಕಾಶ ಮಾಡಿಕೊಟ್ಟವರಿಗೂ ಮತ್ತು ಇಲ್ಲದ ಸಾಹಿತ್ಯವನ್ನು ಸೇರಿಸಿದ್ದಕ್ಕೆ ನಿರ್ದೇಶಕರ ಮೇಲೂ ಹಾಗೂ ಈ ಅಹಿತಕರ ವಾತಾವರಣಕ್ಕೆ ಕಾರಣರಾದ ಸಂಬಂಧಪಟ್ಟ ಎಲ್ಲರ ಮೇಲೂ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೇಳಿಕೊಳ್ಳುತ್ತೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ

ಕಾನೂನು ಕ್ರಮ - ಪೊಲಿಸ್ ಆಯುಕ್ತ

ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರ ಅವರು ಅವರ ನಾಟಕ ಸಾಂಬಶಿವ ಪ್ರಹಸನ ವನ್ನು ಅನುಮತಿ ಇಲ್ಲದೆ ತಿರುಚಿ ಅಸಹ್ಯಕರ ರೀತಿಯಾಗಿ ಪ್ರದರ್ಶನ ಮಾಡಲಾಗಿದೆ ಎಂಬ ದೂರನ್ನು ಇ ಮೇಲ್ ಮೂಲಕ ಕಳುಹಿಸಿಕೊಟ್ಟಿದ್ದಾರೆ ಎಂದು ಮೈಸೂರು ನಗರ ಪೊಲಿಸ್ ಆಯುಕ್ತ ರಮೇಶ್ ಭಾನೋತ್ ಸ್ಪಷ್ಟಪಡಿಸಿದರು.

ಈ ಸಂಬಂಧ ಸೋಮವಾರ ವಾರ್ತಾಭಾರತಿ ಯೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಅವರು, ಸಾಂಬಶಿವ  ಪ್ರಹಸನ ನಾಟಕವನ್ನು ತಿರುಚಿ ಅಸಹ್ಯಕರ ರೀತಿಯಲ್ಲ ಪ್ರದರ್ಶನ ಮಾಡಲಾಗಿದೆ ಎಂಬ ದೂರನ್ನು ನೀಡಿದ್ದಾರೆ. ಜೊತೆಗೆ ದೂರವಾಣಿ ಮೂಲಕ ಸಹ ಮಾತನಾಡಿದ್ದಾರೆ. ಈ ಸಂಬಂಧ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

Similar News