ಮಹಿಷಾಸುರ ಸತ್ಯ ಮತ್ತು ಮಿಥ್ಯೆ

Update: 2023-01-03 10:15 GMT

ಲಕ್ಷ್ಮೀಪತಿ ಕೋಲಾರ ಅವರು ಹವ್ಯಾಸಿ ಪತ್ರಕರ್ತರು, ಕವಿ , ವಿಮರ್ಶಕ, ನಾಟಕಕಾರ, ಜಾನಪದ ಸಂಶೋಧಕರು. ದಕ್ಷಿಣ ದಂಡಾಜೀವಿಕ, ಅಲ್ಲಮನ ಬಯಲಾಟ (ನಾಟಕ) ಕೃತಿಗಳನ್ನು, ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಗಿರೀಶ್ ಕಾಸರವಳ್ಳಿ, ನಾಗಾಭರಣ ನಿರ್ದೇಶಿಸಿದ ರಾಜ್ಯ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಚಲನಚಿತ್ರಗಳಿಗೆ ಸಂಭಾಷಣಕಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಅವರ ‘ಬೇರು’ ಮತ್ತು ‘ಮುಖಾಮುಖಿ’ ಚಲನಚಿತ್ರಗಳಿಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಹಾಗೂ ಕರ್ನಾಟಕ ಸಾಹಿತ್ಯ ಅಕಾಡಮಿಯಿಂದ ಎರಡು ಬಾರಿ ಬಹುಮಾನ ಬಂದಿದೆ. ವೀಚಿ ಸಾಹಿತ್ಯ ಪ್ರಶಸ್ತಿ, ಜೋಳದರಾಶಿ ದೊಡ್ಡನಗೌಡ ಪ್ರಶಸ್ತಿ, ಸಂಸ ರಂಗಪುರಸ್ಕಾರ ಪ್ರಶಸ್ತಿಗಳೂ ಸಂದಿವೆ. ಮೂಡುಬಿದಿರೆಯ ವರ್ಧಮಾನ ಪ್ರಶಸ್ತಿ ಪೀಠವು 2013ರ ಸಾಲಿನಲ್ಲಿ ವರ್ಷದ ಶ್ರೇಷ್ಠ ಉದಯೋನ್ಮುಖ ಸಾಹಿತ್ಯ ಕೃತಿಯಾಗಿ ಅವರ ‘ಅಲ್ಲಮನ ಬಯಲಾಟ’ ನಾಟಕಕ್ಕೆ ಪ್ರಶಸ್ತಿ ನೀಡಿ ಗೌರವಿಸಿದೆ. ಸಿದ್ಧಾರ್ಥ ಸಂಸ್ಥೆಯ ಕಾರ್ಯದರ್ಶಿ ಡಾ. ಜಿ.ಪರಮೇಶ್ವರ ಅವರು ತಮ್ಮ ತಂದೆ ಎಚ್.ಎಂ. ಗಂಗಾಧರಯ್ಯ ಹೆಸರಿನಲ್ಲಿ ನೀಡುವ ‘ರಾಷ್ಟ್ರೀಯ ಸಂಸ್ಕೃತಿ ಪುರಸ್ಕಾರ ಪ್ರಶಸ್ತಿ’ ಲಭಿಸಿದೆ.​

ಲಕ್ಷ್ಮೀಪತಿ ಕೋಲಾರ

ದ್ರಾವಿಡ ಭಾಷಿಕರನ್ನೂ ಸೇರಿಸಿಕೊಂಡಂತೆ, ಒಟ್ಟಾರೆ ಭಾರತೀಯರ ವಿಲಕ್ಷಣ ತಿಳಿವಳಿಕೆಯ ಬಹುದೊಡ್ಡ ಸಮಸ್ಯೆ ಏನೆಂದರೆ ಪುರಾಣ-ಮಹಾಕಾವ್ಯಗಳನ್ನೇ ಇತಿಹಾಸ ಅಂತ ನಂಬುವುದು! ಈ ನೆಲದ ಇಂದಿನ ಕೋಮುವಾದಿ ದುರಂತಗಳು ಮತ್ತವು ಉಂಟುಮಾಡಿರುವ ತಲ್ಲಣ, ದುಗುಡಗಳಿಗೆ ಈ ಬಗೆಯ ಮೌಢ್ಯದ ಮನಃಸ್ಥಿತಿಯೇ ಬಹುಮುಖ್ಯ ಕಾರಣವಾಗಿದೆ. ಕೆಲವು ಪುರಾಣ- ಮಹಾಕಾವ್ಯಗಳಿಗೆ ಚರಿತ್ರೆಯ ಕೆಲವಂಶಗಳು ಪ್ರಭಾವ ಬೀರಿ ಪ್ರೇರಣೆ ನೀಡಿರಬಹುದಾದರೂ ಪುರಾಣಗಳು ಖಂಡಿತ ನೇರ ಇತಿಹಾಸವಲ್ಲವೇ ಅಲ್ಲ.

ಇತ್ತೀಚಿನ ಕೆಲ ವರ್ಷಗಳಿಂದ ಮೈಸೂರಿನ ಪ್ರಗತಿಪರ ಮಿತ್ರರ ‘ಮಹಿಷ ದಸರಾ’ ಸುದ್ದಿ ಮಾಡುತ್ತಿದೆ. ಮಹಿಷಾಸುರ, ಮಹಿಷಮಂಡಲ ಮತ್ತು ಮಹಿಷಾಸುರ ಮರ್ದಿನಿ ಪುರಾಣಕ್ಕೆ ಸಂಬಂಧಿಸಿದಂತೆ ಕೆಲವು ಚಾರಿತ್ರಿಕವೆಂದು ಹೇಳಲಾಗುವ ಅಂಶಗಳನ್ನು ಮುನ್ನೆಲೆಗೆ ತಂದು ಅಚಾರಿತ್ರಿಕವಾದ ನಿರೂಪಣೆಯೊಂದನ್ನು ಮಂಡಿಸಲಾಗುತ್ತಿದೆ. ಅವರ ಉದ್ದೇಶ ಒಳ್ಳೆಯದಾದರೂ, ಅಸಮಂಜಸವಾದ ಆಚರಣೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆಂಬುದೇ ನನ್ನ ಖಂಡಿತವಾದ ಅಭಿಮತ.

ಈ ನೆಲದಲ್ಲಿ ಸಂಭವಿಸಿದ, ಸಂಭವಿಸುತ್ತಿರುವ ಸಂಸ್ಕೃತಿ ಮತ್ತು ಧಾರ್ಮಿಕ ನೆಲೆಗಳಲ್ಲಿನ ವಿರೂಪಗೊಳಿಸಲ್ಪಟ್ಟ ಪಲ್ಲಟಗಳು, ವೈದಿಕಶಾಹಿಯ ಸಾಂಸ್ಕೃತಿಕ ವಸಾಹತುಶಾಹಿ ದೆಸೆಯಿಂದ ತಿರುಚಲ್ಪಟ್ಟ ಐತಿಹಾಸಿಕ ಸಂಗತಿಗಳಿಗೆ ಸಂಬಂಧಿಸಿದಂತೆ ಜವಾಬ್ದಾರಿಯುತವಾದ ಸಂಸ