×
Ad

ನನಗೆ ಶ್ರಾದ್ಧ ಕರ್ಮ, ಸ್ಮಾರಕ ಬೇಡ ಎಂದು ಬರೆದಿಟ್ಟಿದ್ದ ಸಿದ್ಧೇಶ್ವರ ಸ್ವಾಮೀಜಿ

Update: 2023-01-03 12:17 IST

ವಿಜಯಪುರ: ಸಿದ್ಧೇಶ್ವರ ಸ್ವಾಮೀಜಿಗಳು ಆಪ್ತರೊಂದಿಗೆ ಚರ್ಚೆ ನಡೆಸಿ ವಿಲ್ ಬರೆದಿಟ್ಟಿದ್ದಾರೆ. ತಮ್ಮ ದೇಹವನ್ನು ಮಣ್ಣು ಮಾಡುವಂತಿಲ್ಲ, ಅಗ್ನಿ ಸ್ಪರ್ಶ ಮಾಡಬೇಕು. ಚಿತಾಭಸ್ಮವನ್ನು ನದಿ ಅಥವಾ ಸಮುದ್ರದಲ್ಲಿ ವಿಸರ್ಜಿಸ ಬೇಕು. ಶ್ರಾದ್ಧ ಕರ್ಮಗಳನ್ನು ಮಾಡುವಂತಿಲ್ಲ. ಯಾವುದೇ ರೀತಿಯ ಸ್ಮಾರಕಗಳನ್ನು ನಿರ್ಮಿಸಬೇಡಿ ಎಂದು ವಿಲ್ ನಲ್ಲಿ ತಿಳಿಸಿದ್ದಾರೆ.

ವಿಲ್ ಪತ್ರದಲ್ಲಿ ಏನಿದೆ?

“ಸತ್ಯವೂ ಇಲ್ಲ ಅಸತ್ಯವೂ ಇಲ್ಲ. ಸಹಜವೂ ಇಲ್ಲ ಅಸಹಜವೂ ಇಲ್ಲ. ನಾನೂ ಇಲ್ಲ, ನೀನೂ ಇಲ್ಲ. ಇಲ್ಲ ಇಲ್ಲ ಎಂಬುವುದು ತಾನಿಲ್ಲ. ಗುಹೇಶ್ವರನೆಂಬುದು ತಾ ಬಯಲು ಅಂತ್ಯಃ ಪ್ರಣಾಮಾಂಜಲಿಃ” ದು ಸಿದ್ದೇಶ್ವರ ಸ್ವಾಮೀಜಿಯವರ ಅಂತಿಮ ಸಂದೇಶವಾಗಿದೆ.

“ಬದುಕು ಅನುಭವಗಳ ಪ್ರವಾಹ. ಅದನ್ನು ಸುಭಗ ಹಾಗೂ ಸಮೃದ್ಧಗೊಳಿಸುವುದು ಸಾಧನೆ. ಅಂಥ ಜೀವನದ ಉಪಯುಕ್ತವಾದ ಅನುಭವಗಳನ್ನು ಆಸಕ್ತರೊಂದಿಗೆ ಹಂಚಿಕೊಲ್ಳುವುದೇ ಧರ್ಮ. ಅದು ಸ್ವ-ಪರ ನೆಮ್ಮದಿಗೆ ಕಾರಣ.

ನನ್ನದು ಆವೇಗವಿಲ್ಲದ ಸಾಮಾನ್ಯ ಬದುಕು. ಅದನ್ನು ರೂಪಿಸಿದವರು ಗುರುದೇವರು. ಅದನ್ನು ಹದುಳಿಸಿದವರು ನಾಡಿನ ಪೂಜ್ಯರು, ಹಿತೈಷಿಗಳು, ಸಹೃದಯರು, ಸಾಧಕರು ಹಾಗೂ ಶ್ರೀಸಾಮಾನ್ಯರು. ನಿಸರ್ಗವು ಮೈಮನಸ್ಸುಗಳಿಗೆ ತಂಪನಿತ್ತಿದೆ. ತಾತ್ವಿಕ ಚಿಂತನೆಗಳು ತಿಳಿಬೆಳಗ ಹರಡಿವೆ.

ಆದ್ದರಿಂದಲೇ ನಾನು ಎಲ್ಲರಿಗೂ ಎಲ್ಲದಕ್ಕೂ ಉಪಕೃತ. ಬದುಕು ಮುಗಿಯುತ್ತದೆ, ದೀಪ ಆರಿದಂತೆ; ತೆರೆ ಅಡಗಿದಂತೆ; ಮೇಘ ಕರಗಿದಂತೆ. ಉಳಿಯುವುದು ಬರೀ ಬಯಲು, ಮಹಾಮೌನ, ಶೂನ್ಯ ಸತ್ಯ. ಹಲವು ದಶಕಗಳ ಕಾಲ ಈ ಅದ್ಭುತ ಜಗತ್ತಿನಲ್ಲಿ ಬಾಳಿದ್ದೇನೆ. ನೋಡಿ ತಿಳಿದು ಅನುಭವಿಸಿದ್ದೇನೆ. ನನ್ನ ಬದುಕು ಕೊನೆಗೊಳ್ಳುವ ಮುಂಚೆ ಅದನ್ನು ಸ್ಮರಿಸಲೇಬೇಕು, ಅದಕ್ಕಾಗಿ ಈ ಅಂತಿಮ ಅಭಿವಾದನ ಪತ್ರ.”

Similar News