ಹಾವೇರಿಯಲ್ಲಿ ಕನ್ನಡಿಗರ ಸಮ್ಮೇಳನವಲ್ಲ, ರಾಜಕೀಯ ಸಮ್ಮೇಳನ; ಅದನ್ನು ಬಹಿಷ್ಕರಿಸುತ್ತೇನೆ: ಎಚ್.ವಿಶ್ವನಾಥ್

Update: 2023-01-04 08:27 GMT

ಮಡಿಕೇರಿ ಜ.4: ಹಾವೇರಿಯಲ್ಲಿ ನಡೆಯುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಧಿಕ್ಕರಿಸಿದ್ದಾರೆ. "ಇದು ಕನ್ನಡಿಗರ ಸಮ್ಮೇಳನವಲ್ಲ, ಆಲ್ ಪಾರ್ಟಿ ಲೀಡರ್ಸ್ ಅಸೋಸಿಯೇಷನ್ ನ ರಾಜಕೀಯ ಸಮ್ಮೇಳನ" ಎಂದು ಅವರು ಕಿಡಿ ಕಾರಿದ್ದಾರೆ.

ಮಡಿಕೇರಿಯ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಯ ಕ್ಷೇತ್ರದಲ್ಲಿ ನಡೆಯುತ್ತಿರುವ ಸಮ್ಮೇಳನಕ್ಕೆ ಸರಕಾರ 20 ಕೋಟಿ ರೂ.ಗಳ ಬೃಹತ್ ಮೊತ್ತದ ಅನುದಾನ ನೀಡಿದೆ. ಆದರೆ ಸಮ್ಮೇಳನದ ಕುರಿತು ಪೂರ್ವಭಾವಿ ಸಭೆ ನಡೆಸಿಲ್ಲ, ಮಾರ್ಗಸೂಚಿಯನ್ನು ನೀಡಿಲ್ಲ. ಊಟ, ತಿಂಡಿ, ಬಾಜ, ಬಜಂತ್ರಿ, ಏಲಕ್ಕಿ ಮಾಲೆ ಇಷ್ಟೇ ಸಮ್ಮೇಳನವೇ ಎಂದು ಪ್ರಶ್ನಿಸಿದರು.

ಸಮ್ಮೇಳನದಲ್ಲಿ ಸುಮಾರು 85 ಸಾಧಕರನ್ನು ಸನ್ಮಾನಿಸಲಾಗುತ್ತಿದೆ, ಆದರೆ ಈ ಪಟ್ಟಿಯಲ್ಲಿ ಒಬ್ಬರೇ ಒಬ್ಬರು ಮುಸ್ಲಿಮರಿಲ್ಲ. ಜಾನಪದ ವಿದ್ವಾಂಸ ಡಾ.ಕರೀಂ ಖಾನ್, ಅಖಿಲ ಭಾರತ ಸಾಹಿತ್ಯ ಪ್ರಶಸ್ತಿ ಸೇರಿದಂತೆ ಉನ್ನತ ಪ್ರಶಸ್ತಿಗಳನ್ನು ಪಡೆದವರನ್ನು ಕೂಡ ಸನ್ಮಾನಿತರ ಪಟ್ಟಿಯಲ್ಲಿ ಸೇರಿಸಿಲ್ಲ. ಹಿಂದಿನ ಸಮ್ಮೇಳನಗಳಲ್ಲಿ ದಲಿತ ಸಮಾವೇಶ ನಡೆಯುತ್ತಿತ್ತು, ಆದರೆ ಈ ಬಾರಿ ದಮನಿತರ ಸಮಾವೇಶ ಎಂದು ಬದಲಾಯಿಸಲಾಗಿದೆ. ಅಧ್ಯಕ್ಷರಿಗೆ ದಲಿತ, ದಮನಿತರ ವ್ಯತ್ಯಾಸ ತಿಳಿದಿಲ್ಲವೇ ಎಂದು ಅಸಮಾಧಾನ ವ್ಯಕ್ತಪಡಿಸಿದ ವಿಶ್ವನಾಥ್, ಎಲ್ಲರನ್ನು ಒಗ್ಗೂಡಿಸಿ ಕನ್ನಡ ಸಮ್ಮೇಳನ ಮಾಡಬೇಕೆ ಹೊರತು ಜಾತಿ, ಧರ್ಮದ ಸಮ್ಮೇಳನವನ್ನಾಗಿ ಮಾಡುವುದು ಸರಿಯಲ್ಲ ಎಂದರು.

 ಶೇ.70ರಷ್ಟು ಮಂದಿ ಕನ್ನಡ ಮಾತನಾಡುವ ಮುಸ್ಲಿಮರಿದ್ದಾರೆ, 14 ಲಕ್ಷಕ್ಕೂ ಅಧಿಕ ಮಂದಿ ಬ್ಯಾರಿಗಳಿದ್ದಾರೆ, ಕೊಡವ, ತುಳು ಭಾಷಿಕರೂ ಇದ್ದಾರೆ. ಎಲ್ಲರನ್ನು ದೂರ ಇಟ್ಟು ಸಮ್ಮೇಳನ ಮಾಡುತ್ತಿದ್ದಾರೆ. ಪುಸ್ತಕ ಪ್ರಾಧಿಕಾರ ಪುಸ್ತಕಗಳನ್ನು ಖರೀದಿ ಮಾಡಿದೆ, ಆದರೆ ಲೇಖಕರಿಗೆ ಸರಕಾರ ಇಲ್ಲಿಯವರೆಗೆ ಹಣವನ್ನು ನೀಡಿಲ್ಲ ಎಂದು ಟೀಕಿಸಿದರು.

ಕನ್ನಡ ಶಾಲೆಗಳು ಮುಚ್ಚಲ್ಪಡುತ್ತಿವೆ, ರಾಜಕೀಯ ಕ್ಷೇತ್ರ ಮೈಲಿಗೆಯಾಗುತ್ತಿದೆ, ಈ ವಿಚಾರಗಳು ಸೇರಿದಂತೆ ಸಾಹಿತ್ಯ, ಶಿಕ್ಷಣ, ಅಕ್ಷರ, ಕನ್ನಡಿಗರ ಪರ ಗಂಭೀರ ಚರ್ಚೆಗೆ ಸಮ್ಮೇಳನ ಸಾಕ್ಷಿಯಾಗುವ ಬದಲು ದಿಕ್ಕು ದಿಸೆಯಿಲ್ಲದಂತ್ತಾಗಿದೆ. ಈ ಕಾರಣದಿಂದ ಹಲವರು ಸಮ್ಮೇಳನವನ್ನು ಬಹಿಷ್ಕರಿಸಿದ್ದಾರೆ, ನನಗೂ ತೀವ್ರ ಬೇಸರವಾಗಿರುವುದರಿಂದ ಸಮ್ಮೇಳನವನ್ನು ಧಿಕ್ಕರಿಸಿ ಹಾಜರಾಗದೆ ಇರಲು ನಿರ್ಧರಿಸಿರುವುದಾಗಿ ಹೇಳಿದರು.

ಜನತಂತ್ರ ವ್ಯವಸ್ಥೆಯಲ್ಲಿ ಮತದಾರ ಆತ್ಮವಿದ್ದಂತೆ, ಆದರೆ ಆತ್ಮವನ್ನೇ ಕಳವು ಮಾಡುವಂತಹ ಇಂದಿನ ಬೆಳವಣಿಗೆ ಅತ್ಯಂತ ವಿಷಾದಕರ ಎಂದು ಬೇಸರ ವ್ಯಕ್ತಪಡಿಸಿದರು.

ಮೀಸಲಾತಿ ಸಂವಿಧಾನ ವಿರೋಧಿ

ಮೀಸಲಾತಿ ಮತ್ತು ಸಾಮಾಜಿಕ ನ್ಯಾಯದಲ್ಲಿ ದೇಶದಲ್ಲೇ ಕರ್ನಾಟಕ ಮಾದರಿ ರಾಜ್ಯವಾಗಿದೆ. ಆದರೆ ಇತ್ತೀಚೆಗೆ ಮೀಸಲಾತಿಯ ಹಂಚಿಕೆಯ ವಿಚಾರದಲ್ಲಿ ಸರಕಾರ ಸಂವಿಧಾನ ವಿರೋಧಿ ನಡೆಗಳನ್ನು ಅನುಸರಿಸುತ್ತಿದೆ. ಪಂಚಮಸಾಲಿ ಮಠಾಧೀಶರು ಇಟ್ಟ ಬೇಡಿಕೆಗೆ ವ್ಯತಿರಿಕ್ತವಾಗಿ ಭರವಸೆ ನೀಡಿರುವ ಸರ್ಕಾರ ಗೊಂದಲ ಸೃಷ್ಟಿ ಮಾಡಿದೆ, ಸಂವಿಧಾನದಲ್ಲಿ ಅವಕಾಶವಿಲ್ಲದ ಭರವಸೆಗಳನ್ನು ನೀಡಿ ಜನರಿಗೆ ಸುಳ್ಳು ಹೇಳಿ ಹಾದಿ ತಪ್ಪಿಸುತ್ತಿದೆ ಎಂದು ವಿಶ್ವನಾಥ್ ಗಂಭೀರ ಆರೋಪ ಮಾಡಿದರು.

ಮೀಸಲಾತಿ ಎನ್ನುವುದು ಬಡತನ ನಿರ್ಮೂಲನೆಯ ಕಾರ್ಯಕ್ರಮವಲ್ಲ, ಸರ್ಕಾರ ಮೀಸಲಾತಿ ನೀಡುವುದಾದರೆ ನೀಡುವುದಾಗಿ ದೃಢವಾಗಿ ಹೇಳಲಿ. ಮೀಸಲಾತಿ ಹೆಸರಿನಲ್ಲಿ ಜಾತಿ, ಜಾತಿಗಳ ನಡುವೆ ಕಲಹಕ್ಕೆ ದಾರಿ ಮಾಡಿಕೊಡಬಾರದು. ಸಾಮರಸ್ಯ ಮೂಡಿಸುವುದು ಸರ್ಕಾರದ ಜವಾಬ್ದಾರಿಯೇ ಹೊರತು ದಾರಿ ತಪ್ಪಿಸುವುದಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆಡಳಿತ ಕುಂಠಿತ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಆಡಳಿತ ಕುಂಠಿತವಾಗಿದೆ, ಬಜರಂಗದಳ, ಶ್ರೀರಾಮಸೇನೆಯಂತಹ ಎಕ್ಸ್‌ಟ್ರಾ ಫೋರ್ಸ್ ರೂಲ್ಸ್ ರಾಜ್ಯದಲ್ಲಿದೆ ಎಂದು ವಿಶ್ವನಾಥ್ ಟೀಕಿಸಿದರು.

Similar News