ಮೈಸೂರು: ಸಿ.ಎಫ್.ಟಿ.ಆರ್.ಐ ಆವರಣದಲ್ಲಿ ಚಿರತೆ ಪ್ರತ್ಯಕ್ಷ; ಜನರಲ್ಲಿ ಆತಂಕ

Update: 2023-01-04 09:20 GMT

ಮೈಸೂರು: ಮೈಸೂರು ನಗರದ ಸಿ.ಎಫ್.ಟಿ.ಆರ್.ಐ ಆವರಣದಲ್ಲಿ ಚಿರತೆಯೊಂದು ಕಾಣಿಸಿಕೊಂಡಿದ್ದು, ಜನರಲ್ಲಿ ಆತಂಕ ಉಂಟು ಮಾಡಿದೆ.

ನಗರದ ಒಂಟಿಕೊಪ್ಪಲು ರಸ್ತೆಯಲ್ಲಿರುವ ಸಿ.ಎಫ್.ಟಿ.ಆರ್.ಐ ಆವರಣದಲ್ಲಿರುವ ಕಾಡು ಪ್ರದೇಶದಲ್ಲಿ ಮಂಗಳವಾರ ತಡರಾತ್ರಿ ಎರಡು ಚಿರತೆಗಳು ಕಾಣಿಸಿಕೊಂಡಿವೆ.

ಕೆ.ಆರ್.ರಸ್ತೆಯಿಂದ ಹುಣಸೂರು ರಸ್ತೆ ವರೆಗೂ ಹರಡಿಕೊಂಡಿರುವ ಸಿ.ಎಫ್.ಟಿ.ಆರ್.ಐ ಆವರಣದಲ್ಲಿ ಸಾಕಷ್ಟು ಹಸಿರು ವಲಯ ಇದೆ. ಇಲ್ಲಿ ಸಿ.ಎಫ.ಟಿ.ಆರ್.ಐ ಶಾಲೆಯೂ ಇದ್ದು ಈ ಶಾಲೆಯ ಬಳಿ ತಡರಾತ್ರಿ 1.30 ಗಂಟೆ ಸಮಯದಲ್ಲಿ ಎರಡು ಚಿರತೆಗಳು ಸಂಚರಿಸುತ್ತಿದ್ದನ್ನು ರಾತ್ರಿ ಕರ್ತವ್ಯದಲ್ಲಿದ್ದ  ಭದ್ರತಾ ಸಿಬ್ಬಂದಿ ಕಂಡಿದ್ದಾರೆ.

ಕೂಡಲೇ ಈ ಕರ್ತವ್ಯ ಸಿಬ್ನಂದಿ ಸಿ.ಎಫ್.ಟಿ.ಆರ್.ಐ ನ  ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಬಳಿಕ ಅರಣ್ಯಾಧಿಕಾರಿಗಳಿಗೂ ವಿಷಯ ಮುಟ್ಟಿಸಲಾಗಿದೆ. ಮುಂಜಾನೆಯೇ ಅರಣ್ಯಾಧಿಕಾರಿಗಳು ಮತ್ತು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಎಂದಿನಂತೆ ಶಾಲೆಗೆ ಮಕ್ಕಳನ್ನು ಕರೆದುಕೊಂಡು ಬಂದ ಪೋಷಕರನ್ನು ಶಾಲಾ ಕಾಂಪೌಂಡ್ ಬಳಿಯೆ ತಡೆದು ವಾಪಸ್ ಕಳುಹಿಸಿ ಶಾಲೆಗೆ ರಜೆ ನೀಡಿದ್ದಾರೆ.

ಈ ಘಟನೆ ಕುರಿತು ವಿವರ ನೀಡಿದ ಸಿ.ಎಫ್.ಟಿ.ಆರ್.ಐ ಸಹಾಯಕ ನಿದೇರ್ಶಕ ಸತೀಶ್ ಅವರು, ನಮ್ಮ ಸಂಸ್ಥೆಯ ಆವರಣದಲ್ಲಿ  ಚಿರತೆ ಬರಬಹುದು ಎಂಬ ಚಿಂತನೆಯೂ ನಮಗಿರಲಿಲ್ಲ. ಆದರೆ ತಡ ರಾತ್ರಿ ಎರಡು ಚಿರತೆಗಳು ಶಾಲೆಯ ಬಳಿ ಕಾಣಿಸಿಕೊಂಡಿದ್ದು ಪ್ರಭಾಕರ್ ಎಂಬ ಭದ್ರತಾ ಸಿಬ್ಬಂದಿ ಅದನ್ನು ಕಂಡು ನಮಗೆ ತಿಳಿಸಿದ್ದಾರೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಆಗಮಿಸಿ ಪರಿಶೀಲಿಸಿ ಚಿರತೆಗಳಿಗಾಗಿ ಶೋಧ ಕಾರ್ಯ ನಡೆಸುವ ಕಾರ್ಯಾಚರಣೆಯನ್ನು ಬೆಳಿಗ್ಗೆಯಿಂದಲೇ  ಆರಂಭಿಸಿದ್ದಾರೆ. ಶಾಲೆಗೆ ರಜೆ ನೀಡಿ ಮಕ್ಕಳನ್ನು ಸುರಕ್ಷಿತವಾಗಿ ಮನೆಗಳಿಗೆ ಕಳುಹಿಸಲಾಗಿದೆ ಎಂದು ತಿಳಿಸಿದರು.

Similar News