ಬೆಳಗಾವಿ | ಜಾತ್ರೆಗೆ ಹೊರಟಿದ್ದ ವಾಹನ ಮರಕ್ಕೆ ಢಿಕ್ಕಿ: 6 ಮಂದಿ ಮೃತ್ಯು, ಹಲವರಿಗೆ ಗಾಯ

Update: 2023-01-05 04:22 GMT

ಬೆಳಗಾವಿ: ಸವದತ್ತಿ ದೇವಸ್ಥಾನದ ಜಾತ್ರೆಗೆ ಹೊರಟಿದ್ದ ಗೂಡ್ಸ್ ವಾಹನವೊಂದು ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ 6 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡ ಘಟನೆ ರಾಮದುರ್ಗ ತಾಲೂನ ಚುಂಚನೂರು ಗ್ರಾಮದ ಬಳಿ ಗುರುವಾರ ನಸುಕಿನ ಜಾವ ನಡೆದಿರುವುದಾಗಿ ವರದಿಯಾಗಿದೆ.

ರಾಮದುರ್ಗ ತಾಲೂಕಿನ ಹುಲಕುಂದ ಗ್ರಾಮದ ನಿವಾಸಿಗಳಾದ ಹಣಮವ್ವ ಮಾರುತಿ (42), ದೀಪಾ (31), ಮೇಗಾಡಿ (25), ಇಂದ್ರವ್ವ (24), ಸವಿತಾ (17), ಸುಪ್ರಿತಾ (11) ಮೃತಪಟ್ಟವರು ಎಂದು ತಿಳಿದುಬಂದಿದೆ. ಗಾಯಾಳುಗಳನ್ನು ಗೋಕಾಕ ತಾಲೂಕು ಆಸ್ಪತ್ರೆಗೆ ದಾಖಲಿಸಿರುವುದಾಗಿ ತಿಳಿದುಬಂದಿದೆ. ಗೂಡ್ಸ್‌ ವಾಹನದಲ್ಲಿ ಸುಮಾರು 23 ಮಂದಿ ಪ್ರಯಾಣಿಕರಿದ್ದರು ಎನ್ನಲಾಗಿದೆ.

ಗುರುವಾರ ನಸುಕಿನ ಜಾವ ಗೂಡ್ಸ್‌ ವಾಹನದಲ್ಲಿ ಸವದತ್ತಿ ಯಲ್ಲಮ್ಮ ದೇವಸ್ಥಾನದ ಜಾತ್ರೆಗೆ ತೆರಳುತ್ತಿದ್ದರು. ವೇಗವಾಗಿ ಚಲಿಸುತ್ತಿದ್ದ ವಾಹನ ಚಾಲಕನ ನಿಯಂತ್ರಣ ತಪ್ಪಿ ಚುಂಚನೂರು ಎಂಬಲ್ಲಿ ಬೃಹತ್‌ ಆಲದ ಮರಕ್ಕೆ ಢಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದೆ. ಐವರು ಸ್ಥಳದಲ್ಲೇ ಮೃತಪಟ್ಟಿದ್ದು, ಓರ್ವ ಗೋಕಾಕ ತಾಲೂಕು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ರಾಮದುರ್ಗ ತಾಲೂಕಿನ ಕಡಕೋಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News