ಒಲಿದ ಸ್ವರಗಳು

Update: 2023-01-14 09:37 GMT

ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಎಂ.ಎ. ಪದವಿ ಪಡೆದಿರುವ ಎಸ್.ಜಿ. ಸಿದ್ದರಾಮಯ್ಯ, ಕನ್ನಡ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ವಚನಗಳು, ಶರಣ ಸಂಸ್ಕೃತಿ, ದೇಸಿ ಮಾರ್ಗದ ಬಗ್ಗೆ ಒಲವುಳ್ಳವರು. ‘ಗಾಲ್ಫ್ ಉಬ್ಬಿನ ಮೇಲೆ’, ‘ಕಾಡುವ ಬೇಲಿ ಹೂ’, ‘ಅವಳೆದೆಯ ಜಂಗಮ’, ‘ಸೊಲ್ಲು ಫಲವಾಗಿ, ‘ಮರುಜೇವಣಿ’, ‘ಕರೆಬಳೆಗ’, ‘ಬೀದಿ ಅಲ್ಲಮ’, ‘ಕಾಯ ಮಾಯದ ಕಾಡು’, ‘ಅರಿವು ನಾಚಿತ್ತು’ ಎಂಬ ಕವನ ಸಂಕಲನಗಳನ್ನು; ದಂಡೆ, ದಾಳ, ಅನ್ನದಾತ ಎಂಬ ನಾಟಕಗಳು, ‘ಅಂಬಿಗರ ಚೌಡಯ್ಯ- ಒಂದು ಓದು’, ‘ಯಡೆಕುಂಟೆ ಗೆಣೆಸಾಲು’, ‘ಕೇಡಿಲ್ಲವಾಗಿ’, ‘ಸಾಲಾವಳಿ’, ‘ನಿಶಬ್ದದ ಜಾಡು’, ‘ಕಣ್ಣಗಾಯದ ಕಾಲುದಾರಿಗಳು’, ‘ಯಡೆಸಾಲು’ ಎಂಬ ವಿಮರ್ಶಾ ಕೃತಿಗಳು; ‘ಕನ್ನಡ ಪುಸ್ತಕ ಜಗತ್ತು’ ಎಂಬ ಅನುಭವ ಕಥನವನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ 3 ಬಾರಿ, ಜಿ.ಎಸ್.ಶಿವರುದ್ರಪ್ಪ ಕಾವ್ಯ ಪ್ರಶಸ್ತಿ, ಪು.ತಿ.ನ. ಕಾವ್ಯ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿರುವ ಇವರು ಪ್ರಗತಿಪರ ಚಿಂತಕರಾಗಿ ಗುರುತಿಸಿಕೊಂಡವರು.

ಪ್ರೊ.ಎಸ್.ಜಿ. ಸಿದ್ದರಾಮಯ್ಯ

ಎತ್ತ ಹೋದೆ ಕವಿ?

ಇಂದು ಇದೇ ಈಗ ನಿನ್ನ ಕವನಗಳ

ಕೈಗೆತ್ತಿಕೊಂಡೆ. ಸಾಲುಗಳು ಎದೆಗೆ

ಬಿದ್ದಂತೆ, ಕರೆಮಾಡುವ ತುಯ್ತ. ಮರೆತ ಮಾತುಗಳ ಒಪ್ಪಿಸುವ

ಪ್ರಶ್ನಿಸುವ ತರಾತುರಿ. ಇಕ್ರಲಾ ವದೀರ್ಲಾ

ಎಂದವನು ಯಾಕೆ ಅವರ ಬೆನ್ನಿಗೆ ಬಿದ್ದೆ?

ನೆರಳಾದೆ ಮರುಳಾದೆ?

ಬೀಜ ಹೊಡೆಯುವವರ ಕೈಗೊಂಬೆಯಾದೆ?

ಕಾಡುವ ಪ್ರಶ್ನೆಗಳ ಕೇಳಹೋದರೆ

ನೀನಿಲ್ಲದಿರುವ ಸತ್ಯ ಧುತ್ತನೆ.

ಮೊಬೈಲನ್ನು ಹಿಡಿದು ಹಾಗೇ ಧೇನಿಸುವುದು ಚಿತ್ತ. ಎಂಥ ಎಡವಟ್ಟು?

ಹಾದಿತಪ್ಪಿದ ಮಗನ ನೆನೆದು ಪರಿತಪಿಸುವ ಅಪ್ಪ ಅವ್ವಂದಿರು

ಕಳೆದ ಮಗ ಕಳೆದೇ ಹೋದ

ಕೊರಗಿನಲ್ಲಿ ಅಳಲು ಸತ್ತವರು.

ಕಟ್ಟಿದ ಚಳವಳಿಗೆ ಹುತ್ತ ಬೆಳೆದಿದೆ

ಹಾವುಗಳು ನಿರಾತಂಕ ಓಡಾಡಿವೆ

ಒಚ್ಚೆರೆಯ ಒಡಲ ಹೆಣ್ಣು ಹೈಕಳು

ಮತಾಂಧರ ಮಾಸಿಗೆ ಬೀದಿ ಹೆಣಗಳು.

ಗಂಡು ಮಕ್ಕಳ ಕೈಲಿ ಭಗವಾಧ್ವಜ

ಬೀದಿಯಲ್ಲಿ ದಾಯಾದ್ಯರ ರಕ್ತಚೆಲ್ಲಿದೆ

ಹೋರಾಟದ ಸಾಗರವು ನಾಗರನತೆಕ್ಕೆಗೆ

ಮಲಗಿದವರ ಎಬ್ಬಿಸಿ ಎತ್ತ ಹೋದೆ ಕವಿ?

ಇಬಾಲಬಸವನ ಪ್ರಶ್ನೆ

ಮನೆಯ ಮುಂದಿನ ಜಗಲಿಯಾಚೆಯ  

ಕಲ್ಲು ಹಾಸಿನ ಮೇಲೆ ಬಗಲಲ್ಲಿ ತಂದ

ಹೊಸ ಚಪ್ಪಲಿಗಳನಿಟ್ಟು

           ದೂರಸರಿದ ಮಾದಾರ.

ಹೊಸ್ತಿಲೊಳಗಿಂದ ಮಾದಲಾಂಬಿಕೆ

ಹೊರಗೆಸೆದ ದುಗ್ಗಾಣಿಯ ಆಯ್ದುಕೊಂಡ ಕಣ್ಣಿಗೊತ್ತಿ

ಕೈಮುಗಿದು ಹಟ್ಟಿಯೆಡೆ ನಡೆದ ಮಾದಾರ.

ಅವನ ನೆರಳು ಕರಗಿದ ಮೇಲೆ

ಹೊಸ್ತಿಲು ದಾಟಿ ಹೊರಗೆ ಬಂದಳು

ಕರದಿ ನೀರುತುಂಬಿದ ಗಿಂಡಿ ಹಿಡಿದು

ತಾಯಿ ಮಾದಲಾಂಬಿಕೆ.

ಅವ್ವನ ಸೆರಗು ಹಿಡಿದು ಹಿಂಬಾಲಿಸಿದ

ಬಸವನ ಹಿಂದೆ ಬಾಲ ತಾಯ ನೆರಳು

ಮರುಳಾಗಿ ಹರಿದಂತೆ ಬಾಲಬಸವ.

ಬಂದವಳು ಬಂದಂತೆ ದೂರ ನಿಂದಳು

ನಿಂದಂತೆ ಗಿಂಡಿನೀರನು ಚಿಮುಕಿಸಿದಳು

ಹೊಸ ಚಪ್ಪಲಿಗಳ ಮೇಲೆ ಮಾದಲಾಂಬಿಕೆ.

ಒಂದಲ್ಲ ಎರಡಲ್ಲ ಬರೋಬ್ಬರಿ ಮೂರು

ಬಾರಿ ಮತ್ತೆ ಮತ್ತೆ ನೀರು ಚಪ್ಪಲಿಗಳ ಮೇಲೆ

ಬೆಡಗುಗಣ್ಣಿನ ಬಾಲ ಬೆರಗುವಟ್ಟನು ಬಸವ.

ತಾಯ ಮೊಗವನ್ನೊಮ್ಮೆ ಚಪ್ಪಲಿಯ ಮಗದೊಮ್ಮೆ

ನೋಡೇ ನೋಡುತ ಏಕಮ್ಮ ಮತ್ತೆ ಮತ್ತೆ ನೀರು

ಚೆಲ್ಲಿದೆ ಚಪ್ಪಲಿಗಳ ಮೇಲೆ?! ಕೇಳಿದ ಬಸವ.

ಮುದ್ದುಮಗನ ಬಾಲಭಾಷೆಗೆ ನಕ್ಕು ಚರ್ಮದಲಿ

ಚಪ್ಪಲಿ ಮಾಡುವ ಮಾದಾರ ಮುಟ್ಟಬಾರದ

ಮಣೆಗಾರ ಅದಕೆ ಪ್ರೋಕ್ಷಣೆ

ನುಡಿದಳು ತಾಯಿ.

 ಚಪ್ಪಲಿಗಳ ಮುಟ್ಟಿ ಮೆಡಬಹುದೇ ಅವ್ವ? ಬಾಲನ

ಮುಗ್ಧ ಪ್ರಶ್ನೆಗೆ ಅವ್ವನ ಬೆರಗು. ಮೆಡಲಿಕ್ಕೇ

ಮಡಿಗಾಗಿ ಪ್ರೋಕ್ಷಣೆ ತಾಯಿಯ ಮಾರ್ನುಡಿ..

ಮಾತಿಗೆ ಮಾತು ಹೂತು ಮಗನಬಾಯಲಿ

ಮಾತು ಮುಟ್ಟಬಾರದವನ ಚಪ್ಪಲಿಗೆ

ಮಾಡುವುದಾದರೆ ಮಡಿ,

ಮುಟ್ಟಬಾರದವನಿಗೂ ಮಾಡು ಮಡಿ.

ಮಗನ ಮಾತಿಗೆ ಬೆಚ್ಚಿದಳು ಬೆವರಿದಳು , ಮಗನ

ಮುಖವನ್ನೊಮ್ಮೆ ಚಪ್ಪಲಿಗಳನೊಮ್ಮೆ ನೋಡೇ

ನೋಡಿದಳು ಮೂಕಳಾಗಿ ತಾಯಿ ಮಾದಲಾಂಬಿಕೆ.

ಉಪಸಂಹಾರ :

ಬಾಲಬಸವನ ಪ್ರಶ್ನೆ ಬೆಳೆದಂತೆ ಕಾಡಿತ್ತು.

ಕರ್ಮಲತೆಯಂತಿದ್ದ ಜನಿವಾರವ ಕಳಚಿತ್ತು

ಇವನಾರವ ಇವನಾರವ ಎನ್ನದೆ

ಉತ್ತಮ ಕುಲದಲ್ಲಿ ಹುಟ್ಟಿದ ಕಷ್ಟದ

ಹೊರೆಯ ಕಳಚಿತ್ತು.

ಮಾದಾರನ ಮನೆಯ ಮಗನೆಂದೆನಿಸಿತ್ತು.

ಕಲ್ಯಾಣದ ಅಣ್ಣನೆಂದೆನಿಸಿತ್ತು.

ವಿಶ್ವಗುರು ಬಸವಣ್ಣನೆನಿಸಿತ್ತು.