ನಾವು 17 ಮಂದಿ ಶಾಸಕರು ಬಾಂಬೆಗೆ ಹೋಗಲು ಕುಮಾರಸ್ವಾಮಿ ಕಾರಣ: ಎಚ್.ವಿಶ್ವನಾಥ್

Update: 2023-01-05 17:54 GMT

ಮೈಸೂರು,ಜ.5: 'ನನ್ನ ಸರ್ಕಾರ ಬೀಳಲು 17 ಮಂದಿಯನ್ನು ಬಾಂಬೆಗೆ ಕರೆದುಕೊಂಡು ಹೋಗಿದ್ದ ವ್ಯಕ್ತಿ ಯಾರು?' ಎಂಬ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆಗೆ ತಿರುಗೇಟು ನೀಡಿದ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್, 'ನಾವು ಮುಂಬೈಗೆ ಹೋಗಲು ಕುಮಾರಸ್ವಾಮಿ  ಅವರೇ ಕಾರಣ' ಎಂದು ಹೇಳಿದ್ದಾರೆ.

ನಗರದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಎರಡು ಬಾರಿ ಸಿಎಂ ಆಗಿದ್ದವರು. ರಾಜಕಾರಣದ ಕುಟುಂಬದಿಂದ ಬಂದವರು. ಸಿಎಂ ಆಗಿದ್ದವರು ಈ ರೀತಿ ಹೇಳಿಕೆ ಕೊಡುವಂತಹದ್ದು ಸರಿಯಲ್ಲ. ನಾವು ಬಾಂಬೆಗೆ  ಹೋಗಲು ನೀವೆ ಕಾರಣ. ನಿಮ್ಮ ವೈಫಲ್ಯ. ಮುಚ್ಚಿಕೊಳ್ಳಲು ಮಸಿ ಬಳಿಯಲು ಅಥವಾ ಹಿಟ್ ಅಂಡ್ ರನ್ ಮಾಡುತ್ತಿದ್ದೀರಿ. ಯಾರು ಆ ಹೆಣ್ಣು ಮಕ್ಕಳು ಸಂಪೂರ್ಣ ಮಾಹಿತಿ ಕೊಡಿ. ಮಸಿ ಬಳಿದು ಹೋಗುವುದು ಸರಿಯಲ್ಲ. ಇದು ಒಬ್ಬ ನಾಯಕನ ಗುಣ ಲಕ್ಷಣ ಅಲ್ಲ ಎಂದು ಹರಿಹಾಯ್ದರು.

''ಕುಮಾರಸ್ವಾಮಿ ಹೇಳಿರುವುದು ಕಟ್ಟು ಕಥೆ ಸುಳ್ಳಿನ ಕಂತೆ. ನಾನು ಪ್ರತ್ಯಕ್ಷದರ್ಶಿಯಾಗಿದ್ದೆ ಯಾರೋ ಪಿಂಪ್ ಮಾತು ಕೇಳಿ ಈ ರೀತಿ ಮಾತು ಸರಿಯಲ್ಲ. ಯಾರದೋ ಮುಖಕ್ಕೆ ಮಸಿ ಬಳಿಯಲು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ.  ಮೂರು ವರ್ಷದಿಂದ ಏನು ಮಾಡುತ್ತಿದ್ದಿರಿ ? ನಿಮ್ಮ ದುರಂಹಕಾರ ಜಿಗುಪ್ಸೆ ನಿಮ್ಮ ವರ್ತನೆಯಿಂದ ಎಲ್ಲರೂ ಪಕ್ಷ ಬಿಟ್ಟು ಹೋದರು. ಜವಾವ್ದಾರಿಯಿಲ್ಲದೆ ಮಾತನಾಡುತ್ತೀರಾ?' ಎಂದು ಕಿಡಿಕಾರಿದರು.

ರಸ್ತೆ, ಚರಂಡಿ ಸಣ್ಣ ಸಣ್ಣ ವಿಚಾರ ಬಿಟ್ಟುಬಿಡಿ ಎಂದಿದ್ದ ಬಿಜೆಪಿ ರಾಜ್ಯಾಧ್ಯಕ್ಷ  ನಳೀನ್ ಕುಮಾರ್ ಕಟೀಲ್ ಹೇಳಿಕೆಗೂ  ಕಿಡಿಕಾರಿದ ಎಚ್ ವಿಶ್ವನಾಥ್ , 'ನನ್ನ ಕೇರಿಯವರಿಗೆ ಅದೇ ದೊಡ್ಡ ವಿಚಾರ ಹಾಗೂ ಅದೇ ಮುಖ್ಯವಾಗಿದೆ'' ಎಂದು ತಿರುಗೇಟು ನೀಡಿದರು.

Similar News