ಮೈಸೂರು-ಬೆಂಗಳೂರು ದಶಪಥ ರಸ್ತೆಯಲ್ಲಿ ದ್ವಿಚಕ್ರ, ತ್ರಿಚಕ್ರ ವಾಹನಗಳಿಗಿಲ್ಲ ಅವಕಾಶ: ಕಾರಣ ಏನು ಗೊತ್ತೇ?

Update: 2023-01-06 09:59 GMT

ಮೈಸೂರು, ಜ.6: ಮೈಸೂರು-ಬೆಂಗಳೂರು ದಶಪಥ ರಸ್ತೆಯಲ್ಲಿ  ಸಂಚರಿಸಲು ದ್ವಿಚಕ್ರ ಹಾಗೂ ತ್ರಿಚಕ್ರ  ವಾಹನಗಳಿಗೆ ಅವಕಾಶ ಇಲ್ಲ ಎಂದು ಮೈಸೂರು- ಕೊಡಗು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ. 

ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ನಿನ್ನೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಮೈಸೂರು-ಬೆಂಗಳೂರು ದಶಪಥ ಕಾಮಗಾರಿಯನ್ನು ವೀಕ್ಷಿಸಿ ಉತ್ತಮವಾಗಿದೆ ಎಂದು ಹೇಳಿದ್ದಾರೆ. ಫೆಬ್ರವರಿ ಅಥವಾ ಮಾಚ್೯ ಗೆ ಈ ರಸ್ತೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರ ಕೈಯಲ್ಲಿ ಉದ್ಘಾಟನೆಗೊಳಿಸಲಾಗುವುದು ಎಂದು ಹೇಳಿದರು.

ಸರ್ವಿಸ್ ರಸ್ತೆ ನಿರ್ಮಾಣವಾದ ಬಳಿಕ ಈ ರಸ್ತೆಯಲ್ಲಿ ದ್ವಿಚಕ್ರ ಮತ್ತು ಮೂರು ಚಕ್ರದ ವಾಹನಗಳ ಸಂಚಾರಕ್ಕೆ ಅವಕಾಶ ಇಲ್ಲ. ಯಾಕೆಂದರೆ ಇದು ಎಕ್ಸ್ ಪ್ರೆಸ್ ಹೈವೇ ಆಗಿರುವುದರಿಂದ ಬಹಳಷ್ಟು ಮಂದಿ ಮೈಸೂರು-ಬೆಂಗಳೂರು ನಡುವೆ ವೇಗವಾಗಿ ಸಂಚರಿಸುತ್ತಿರುತ್ತಾರೆ. ಈ ಮಧ್ಯೆ ದ್ವಚಕ್ರವಾಹನಗಳಿಗೆ ಅವಕಾಶ ನೀಡಿದರೆ ಅವರ ವೇಗದ ಮಿತಿ ಕಡಿಮೆಯಾಗಬಹುದು ಎಂದು ತಿಳಿಸಿದರು.

ಎಕ್ಸ್ ಪ್ರೆಸ್ ಹೈವೆಯಲ್ಲಿ ಸಂಚರಿಸುವ ವಾಹನಗಳಿಗೆ ಟೋಲ್ ಸಂಗ್ರಹ ಮಾಡಲಾಗುತ್ತದೆ.  1.30 ಗಂಟೆಯಲ್ಲಿ ಬೆಂಗಳೂರಿನಿಂದ ಮೈಸೂರು ತಲುಪಬಹುದು. ಹಾಗಂತ ಈ ರಸ್ತೆ ಬರಿ ಶ್ರೀಮಂತರಿಗಾಗಿ ಎಂದು ಭಾವಿಸಬಾರದು ಎಂದರು.

ಇದನ್ನೂ ಓದಿ: ಫೆಬ್ರವರಿ ಅಂತ್ಯದಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿ ಲೋಕಾರ್ಪಣೆ: ನಿತಿನ್ ಗಡ್ಕರಿ

ದ್ವಿಚಕ್ರವಾಹನಗಳು ಮತ್ತು ಇತರೆ ವಾಹನಗಳು ಸಂಚರಿಸಲು ಸರ್ವೀಸ್ ರಸ್ತೆಗಳಿರುತ್ತದೆ. ಆ ಮೂಲಕ ಸಂಚತಿಸಬಹುದು ಎಂದು ಹೇಳಿದರು.

ಎಕ್ಸ್ ಪ್ರೆಸ್ ಹೈವೆ ಹೆಸರಿಡುವ ಕುರಿತು ಹಲವಾರು ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಕೆಲವರು ನಾಲ್ವಡಿ ಕೃಷ್ಣರಾಜ ಒಡೆಯರ್, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಹೆಸರಿಡುವಂತೆ ಪ್ರಸ್ತಾಪಿಸಿದ್ದಾರೆ. ಆದರೆ ಯಾವುದೇ ಎಕ್ಸ್ ಪ್ರೆಸ್ ಹೈವೆಗೆ ವ್ಯಕ್ತಿಗಳ ಹೆಸರಿಟ್ಟ ಉದಾಹರಣೆ ಇಲ್ಲ. ಹಾಗಾಗಿ ಕಾವೇರಿ ಎಕ್ಸ್ ಪ್ರೆಸ್ ವೇ ಎಂದು ನಾಮಕರಣ ಮಾಡಬೇಕು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಲ್ಲಿ ಮನವಿ ಮಾಡಿದ್ದೇನೆ ಎಂದು ಹೇಳಿದರು.

Similar News