ಕೊಲಾಸೊ ಅಂದರೆ ಸ್ಪಿರಿಟ್ ಆಫ್ ಇಂಡಿಯಾ: ದಿನೇಶ್ ಗುಂಡೂರಾವ್

ದೇವನಹಳ್ಳಿಯ ಅಭಿವೃದ್ಧಿಯ ಹರಿಕಾರ

Update: 2023-01-06 12:42 GMT

ರೊನಾಲ್ಡ್ ಕೊಲಾಸೊ ಅವರು ನಿಜವಾದ ಸ್ಪಿರಿಟ್ ಆಫ್ ಇಂಡಿಯಾ. ಸರ್ವಧರ್ಮದವರನ್ನೂ ತಮ್ಮವರೆಂದು ಕಾಣುವ, ಭಾವಿಸುವ ಕೊಲಾಸೊ ಅವರು ಭಾರತೀಯ ಸ್ಫೂರ್ತಿಯನ್ನು ತಮ್ಮ ಬದುಕಿನ ಮೂಲಕ ಆಚರಿಸಿ ತೋರಿಸಿದ್ದಾರೆ. ಇವರು ಆದರ್ಶ ಭಾರತೀಯ. ಇವರು ಮಾನವೀಯತೆಯನ್ನು ಆಚರಿಸಿದ, ಬೆಳೆಸಿದ ಸ್ಫೂರ್ತಿದಾಯಕ ವ್ಯಕ್ತಿ. ತಮ್ಮ ಸಾಧನೆಗಳ ಫಲವನ್ನು ಕೇವಲ ತಮ್ಮ ಕುಟುಂಬಕ್ಕೆ ಮಾತ್ರ ಹಂಚದೆ ವಿಶ್ವ ಸಮುದಾಯಕ್ಕೆ ಹಂಚಿದರು ಎಂದು ಮಾಜಿ ಸಚಿವ ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ನುಡಿದರು.

ಅಗತ್ಯವಿದ್ದವರ ನೆರವಿಗೆ ಧಾವಿಸಿದರು. ಬಡವರು, ಅಸಹಾಯಕರು ಮಾತ್ರವಲ್ಲ, ಸರ್ಕಾರಗಳಿಗೂ ನೆರವು ನೀಡಿದ್ದಾರೆ. ಇವರ ಆದರ್ಶಗಳು ವಿಶ್ವ ಪ್ರಜ್ಞೆಯಲ್ಲಿ ಅಚ್ಚೊತ್ತಿವೆ. ದೇವನಹಳ್ಳಿ ಇಂದು ಈ ಮಟ್ಟಕ್ಕೆ ಬೆಳೆದಿರುವುದಕ್ಕೆ, ಕೊಲಾಸೊ ಅವರ ದೂರದೃಷ್ಟಿ ಪ್ರಮುಖ ಕಾರಣ. ಇವರು ದೇವನಹಳ್ಳಿಗೆ ಕಾಲಿಟ್ಟಾಗ ಇಲ್ಲಿ ಏನೇನೂ ಇರಲಿಲ್ಲ. ಆ ಹೊತ್ತಲ್ಲೇ ಇವರು ಬೆಂಗಳೂರಿನ ಭವಿಷ್ಯದ ನಗರವಾಗಿ ದೇವನಹಳ್ಳಿ ಬೆಳೆಯುವ ಕನಸನ್ನು ಕಟ್ಟಿಕೊಂಡಿದ್ದರು. ಈಗ ಆ ಕನಸು ನನಸಾಗಿದೆ. ದೇವನಹಳ್ಳಿ ಬೆಳೆದಿದೆ. ಕೊಲಾಸೊ ಅವರು ನಮ್ಮ ಕುಟುಂಬಕ್ಕೆ ಅತ್ಯಂತ ಹತ್ತಿರದವರು. ಆತ್ಮೀಯರು. ಇವರ ಆದರ್ಶಗಳು ಪ್ರತಿಯೊಬ್ಬ ಉದ್ಯಮಿಗೂ ಮಾದರಿಯಾಗಬೇಕು ಎಂದು ಆಶಿಸಿದರು.