ಶಿವಮೊಗ್ಗ: ಗೃಹ ಸಚಿವರು ಇದ್ದ ವೇದಿಕೆ ಎದುರು ಗ್ರಾ.ಪಂ ಅಧ್ಯಕ್ಷರಿಂದ ಕಪ್ಪು ಬಾವುಟ ಪ್ರದರ್ಶನ

Update: 2023-01-09 14:17 GMT

ಹೊಸನಗರ (ಶಿವಮೊಗ್ಗ), ಜ.9: ಸೋಮವಾರ ಹೊಸನಗರ ತಾಲೂಕಿನ ಕೊಡೂರಿನ ಅಮ್ಮನ ಘಟ್ಟ  ಜೇನುಕಲ್ಲಮ್ಮ ದೇವಸ್ಥಾನದ ಸಭಾಭವನದ ಶಂಕುಸ್ಥಾಪನೆ ಕಾರ್ಯಕ್ರಮದ ವೇಳೆ ಸ್ಥಳೀಯ ಗ್ರಾಮ ಪಂಚಾಯತ್ ಜನಪ್ರತಿನಿಧಿಗಳನ್ನು ಕಡೆಗಣಿಸಲಾಗಿದೆ ಹಾಗೂ ಶಿಷ್ಟಾಚಾರ ಉಲ್ಲಂಘನೆ ಮಾಡಲಾಗಿದೆ ಎಂದು ಆರೋಪಿಸಿ ಗ್ರಾ.ಪಂ ಜನಪ್ರತಿನಿಧಿಳು ಪ್ರತಿಭಟನೆ ನಡೆಸಿದರು. 

ಕಾರ್ಯಕ್ರಮದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಭಾಗವಹಿಸಿದ್ದು, ವೇದಿಕೆಯ ಎದುರು ಮಾರುತಿಪುರ ಗ್ರಾಮ ಪಂಚಾಯತ್ ಅಧ್ಯಕ್ಷ ಚಿದಂಬರ್ ಎಂಬವರು ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಿಗೆ ಕಪ್ಪು ಬಾವುಟ ತೋರಿಸಿ, ಧಿಕ್ಕಾರ ಕೂಗಿದರು. 

ಕಾರ್ಯಕ್ರಮದಲ್ಲಿ ಮಾರುತಿಪುರ ಪಂಚಾಯತ್ ವ್ಯಾಪ್ತಿಯ ನಾಗರಿಕರಿಗೆ ಹಾಗೂ ಮಾರುತಿಪುರ ಗ್ರಾಮ ಪಂಚಾಯತ್ ಅನ್ನು ಅವಮಾನಿಸಿರುವುದು ಖಂಡನೀಯ. ಮುಂದಿನ ದಿನಗಳಲ್ಲಿ ಇಂಥ ಶಿಷ್ಟಾಚಾರ ಉಲ್ಲಂಘನೆ ಆಗದಂತೆ ಎಚ್ಚರ ವಹಿಸ ಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸದರು. 

ಬಳಿಕ ಪ್ರತಿಭನಾಕಾರರನ್ನು ತಡೆದ ಪೊಲೀಸರು, ಗ್ರಾಮ ಪಂಚಾಯತ್ ಸದಸ್ಯರಾದ ಇಂದ್ರೇಶ್ ಎನ್. ಪ್ರಕಾಶ್ ಜಿಎಂ. ಶಂಕರ್ ಶೆಟ್ಟಿ. ನಗರ ಪಂಚಾಯತ್ ಅಧ್ಯಕ್ಷರಾದ ಕರುಣಾಕರ ಶೆಟ್ಟಿ. ಚಂದ್ರಪ್ಪ. ಉಪಾಧ್ಯಕ್ಷರಾದ ಜಯಮ್ಮ. ಸದಸ್ಯ ದೀಪಿಕಾ ಕೃಷ್ಣ ರಂಬವರನ್ನು ಬಂಧಿಸಿ ರಿಪ್ಪನ್ ಪೇಟೆ ಠಾಣೆಗೆ ಕರೆತಂದು ಕೆಲಕಾಲದ ಬಳಿಕ ಬಿಡುಗಡೆಗೊಳಿಸಿದರು. 

Similar News