ಡ್ರೋನ್ ಮೂಲಕ ಭೂಮಿ ಸರ್ವೆಗೆ ಕ್ರಮ: ಕಂದಾಯ ಸಚಿವ ಆರ್.ಅಶೋಕ್

Update: 2023-01-09 14:40 GMT

ಬೆಂಗಳೂರು, ಜ. 9: ‘ರಾಜ್ಯದಲ್ಲಿ ಭೂ ವ್ಯಾಜ್ಯಗಳನ್ನು ತಪ್ಪಿಸಲು ಹಾಗೂ ಭೂ ಮಾಲಕರಿಗೆ ಸಮರ್ಪಕ ದಾಖಲೆಗಳನ್ನು ಒದಗಿಸುವ ದೃಷ್ಟಿಯಿಂದ ಡ್ರೋನ್ ಕ್ಯಾಮರ ಮೂಲಕ ಸರ್ವೆ ಮಾಡಲು ಕಂದಾಯ ಇಲಾಖೆ ಸಿದ್ಧತೆ ನಡೆಸಿದ್ದು, ವರ್ಷದಲ್ಲಿ ಸರ್ವೆ ಅಂತಿಮಗೊಳಿಸಿ ಡಿಜಿಟಲ್ ವ್ಯವಸ್ಥೆ ಮೂಲಕ ಜನರಿಗೆ ಭೂ ನಕ್ಷೆ ಒದಗಿಸಲಾಗುವುದು’ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.

ಸೋಮವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದ್ರೋಣ್ ಮೂಲಕ ಖಾಸಗಿ ಮತ್ತು ಸರಕಾರಿ ಆಸ್ತಿಗಳನ್ನು ಸರ್ವೆ ಮಾಡಲಾಗುವುದು. ಆ ಮೂಲಕ ಭೂ ಮಾಲಕರಿಗೆ ಸುಲಭವಾಗಿ ನಕಾಸೆ ದೊರೆಯುವಂತೆ ಮಾಡಲಾಗುವುದು. ಇದರಿಂದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ಮತ್ತು ಭೂ ವ್ಯಾಜ್ಯಗಳನ್ನು ಮುಕ್ತಗೊಳಿಸಲು ಉದ್ದೇಶಿಸಲಾಗಿದೆ’ ಎಂದು ತಿಳಿಸಿದರು.

‘ರಾಜ್ಯದಲ್ಲಿ ಈಗಾಗಲೇ ರಾಮನಗರ ಮತ್ತು ಕಲಬುರಗಿ ಜಿಲ್ಲೆಯಲ್ಲಿ ಡ್ರೋನ್ ಮೂಲಕ ಪ್ರಾಯೋಗಿಕ ಸರ್ವೆ ಆರಂಭಗೊಂಡಿದ್ದು, ಜಮೀನುಗಳ ನಕ್ಷೆಗಳನ್ನು ಸಿದ್ದಪಡಿಸಲಾಗುತ್ತಿದೆ. ರಾಜ್ಯಾದ್ಯಂತ ಈ ರೀತಿಯ ಸರ್ವೇ ನಡೆಸಿ, ನಕ್ಷೆಗಳನ್ನು ಸಿದ್ದಪಡಿಸಲು ಟೆಂಡರ್ ಕರೆಯಲಾಗಿದೆ. ಇದಕ್ಕಾಗಿ ಸರಕಾರ 258 ಕೋಟಿ ರೂ. ಬಿಡುಗಡೆ ಮಾಡಿದೆ’ ಎಂದು ಅಶೋಕ್ ತಿಳಿಸಿದರು.

ಪ್ರತಿ ಜಿಲ್ಲೆಗೂ ಪ್ರತ್ಯೇಕ ಟೆಂಡರ್ ಕರೆದು ಸರ್ವೇ ಮತ್ತು ನಕ್ಷೆ ಸಿದ್ದಪಡಿಸಿ, ದಾಖಲೆಗಳನ್ನು ಕ್ರೋಢಿಕರಿಸಲಾಗುವುದು. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ರೈತರು ಮತ್ತು ಭೂ ಮಾಲಕರಿಗೆ ಸಮರ್ಪಕ ದಾಖಲೆ ಒದಗಿಸುವ ಉದ್ದೇಶದಿಂದ ಚಾಲನೆ ನೀಡಲಾಗಿದೆ. ಇದು ಇಡೀ ರಾಷ್ಟ್ರದಲ್ಲಿ ನಡೆಯುತ್ತಿದ್ದು, ರಾಜ್ಯದಲ್ಲೂ ಡ್ರೋಣ್ ಮೂಲಕ ಸರ್ವೆ ಕಾರ್ಯ ಆರಂಭಗೊಂಡಿದ್ದು, ಇನ್ನೊಂದು ವರ್ಷದಲ್ಲಿ ಪೂರ್ಣಗೊಳಿಸುವುದು ಎಂದು ಅವರು ವಿವರ ನೀಡಿದರು.

ಪ್ರಧಾನಿ ಮೋದಿ ಚಾಲನೆ: ಲಂಬಾಣಿ ತಾಂಡ, ಗೊಲ್ಲರ ಹಟ್ಟಿ, ಕುರುಬರ ಹಟ್ಟಿ ಸೇರಿದಂತೆ ವಿವಿಧ ಸಮುದಾಯಕ್ಕೆ ಸೇರಿದ 2ಸಾವಿರಕ್ಕೂ ಹೆಚ್ಚು ಹಟ್ಟಿ-ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿರ್ವತಿಸುವ ಕಾರ್ಯಕ್ಕೆ ಪ್ರಧಾನಿ ಜ.19ರಂದು ಚಾಲನೆ ನೀಡಲಿದ್ದಾರೆ. ಸಮುದಾಯದವರಿಗೆ ಅವರು ವಾಸಿಸುವ ಭೂಮಿಯ ಹಕ್ಕುಪತ್ರ ನೀಡುವ ಮೊದಲ ಹಂತದ ಕಾರ್ಯ ನಡೆಯಲಿದೆ. ಮೊದಲ ಹಂತದಲ್ಲಿ 51,999 ಕುಟುಂಬಗಳಿಗೆ ಹಕ್ಕುಪತ್ರ ನೀಡಲಾಗುವುದು. ಅನಂತರ ಈ ದಾಖಲೆ ಆಧಾರದ ಮೇಲೆ ಅವರು, ಬ್ಯಾಂಕ್‍ನಿಂದ ಸಾಲ ಪಡೆದುಕೊಳ್ಳಲು ಸಹಕಾರಿ ಎಂದು ಹೇಳಿದರು.

ಎರಡನೆ ಹಂತದಲ್ಲಿ ಪುನಃ ಐವತ್ತು ಸಾವಿರ ಕುಟುಂಬಗಳಿಗೆ ಹಕ್ಕುಪತ್ರ ನೀಡಲಾಗುವುದು. ಮಾರ್ಚ್ ತಿಂಗಳ ಒಳಗೆ ಈ ಜನರಿಗೆ ಅವರು ವಾಸಿಸುವ ಜಾಗದ ಹಕ್ಕುಪತ್ರ ನೀಡಿಕೆ ಕಾರ್ಯ ಪೂರ್ಣಗೊಳ್ಳಲಿದೆ ಎಂದ ಅವರು, ಕಲಬುರಗಿಯಲ್ಲಿ ಮೋದಿ ಸಮ್ಮುಖದಲ್ಲಿ ನಡೆಯಲಿರುವ ಸಮಾವೇಶದಲ್ಲಿ 50ಸಾವಿರಕ್ಕೂ ಹೆಚ್ಚು ಕುಟುಂಬಗಳ ಜನ ತಮ್ಮ ಸಾಂಪ್ರದಾಯಿಕ ಲಂಬಾಣಿ ಉಡುಪಿನಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.

Similar News