ಬೀದರ್ ಉತ್ಸವ ಅರ್ಥಪೂರ್ಣವಾಗಿ ಆಚರಿಸಲಾಗಿದೆ: ಸಿಎಂ.ಬೊಮ್ಮಾಯಿ

Update: 2023-01-09 17:38 GMT

ಬೀದರ್, ಜನವರಿ 09: ಬೀದರ್ ಉತ್ಸವವನ್ನು ಅರ್ಥಪೂರ್ಣ ವಾಗಿ ಆಚರಿಸಲಾಗಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.  

ಅವರು ಇಂದು ಬೀದರ್ ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. 

ಬೀದರ್ ನಲ್ಲಿ ಹುರುಪು, ಉತ್ಸಾಹದಿಂದ ಉತ್ಸವ ಮಾಡಿದ್ದಾರೆ. ಸ್ಥಳೀಯರಿಂದ ಹಿಡಿದು ಕರ್ನಾಟಕದ ಎಲ್ಲಾ ಕಲಾಕಾರರಿಗೆ ಅವಕಾಶ ಕಲ್ಪಿಸಲಾಗಿದೆ. ಕೃಷಿ ಮೇಳ, ಸ್ವಸಹಾಯ ಸಂಘಗಳ ಮೇಳ ಆಯೋಜಿಸಿದ್ದು,  ಅಪಾರವಾದ ಜನಸಂಖ್ಯೆ ಸೇರಿರುವುದು ಸಂತೋಷವಾಗಿದೆ ಎಂದರು. 

ತನಿಖೆ: ಸ್ಯಾಟ್ರೋ ರವಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ ಯಾರು ಏನೇ ಹೇಳಿದರೂ ತನಿಖೆಯಲ್ಲಿ ಸಂಪೂರ್ಣವಾಗಿ ವಿಷಯ ತಿಳಿಯಲಿದೆ. 20 ವರ್ಷಗಳ ಹಿಂದಿನ ಸಂಬಂಧ ಏನೇನಿದೆ ಎಂದು ತನಿಖೆ ಮಾಡಲಾಗುತ್ತಿದೆ. ಕಾದು ನೋಡಿ ಎಂದರು. 

'ನಡೆನುಡಿಗಳನ್ನು ನೋಡಿ  ಜನ ತೀರ್ಮಾನ ಮಾಡುತ್ತಾರೆ'

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕೋಲಾರದಲ್ಲಿ ಸ್ಪರ್ಧಿಸಲು ತೀರ್ಮಾನಿಸಿರುವುದು ಅವರಿಗೆ ಬಿಟ್ಟ ವಿಚಾರ. ಜನ ತೀರ್ಮಾನ ಮಾಡುತ್ತಾರೆ. ಪ್ರತಿ ರಾಜಕಾರಣಿ,  ಪ್ರತಿ ನಾಯಕನ ನಡೆನುಡಿಗಳನ್ನು ಜನ ನೋಡುತ್ತಾರೆ. ನಮ್ಮ ನಡೆನುಡಿಗಳನ್ನು ನೋಡಿ ಕಡೆಗೆ ತೀರ್ಮಾನ ಮಾಡುತ್ತಾರೆ ಎಂದರು.

Similar News