ಹಾಸನ | ಇಬ್ಬರು ಮಕ್ಕಳಿಗೆ ಇಲಿ ಪಾಷಾಣ ನೀಡಿ ಆತ್ಮಹತ್ಯೆಗೆ ಯತ್ನಿಸಿದ ತಾಯಿ: ಮಗು ಮೃತ್ಯು

Update: 2023-01-11 15:17 GMT

ಹಾಸನ: ಜ, 11:  ಮಹಿಳೆಯೊಬ್ಬರು ಇಲಿ ಪಾಷಾಣವನ್ನು ತನ್ನ ಮಕ್ಕಳಿಗೆ ನೀಡಿದ್ದಲ್ಲದೇ, ತಾನೂ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದು, ಇದರಲ್ಲಿ ಓರ್ವ ಮಗು ಮೃತಪಟ್ಟಿರುವ ಘಟನೆ ಹಾಸನ ನಗರದ ಚಿಪ್ಪಿನಕಟ್ಟೆಯಲ್ಲಿ ವರದಿಯಾಗಿದೆ.

ಘಟನೆ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್, 'ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಬಳಿಯ ಸತ್ತಿಗಲ್ ನ ಝೀನತ್ ಬಾನು ಅವರನ್ನು ನಗರದ ಬೆಸ್ತರ ಬೀದಿಯ ಎರಡನೇ ಕ್ರಾಸ್ ಚಿಪ್ಪಿನಕಟ್ಟೆ ನಿವಾಸಿ ಎಂ.ಡಿ. ದಿಲ್ದಾರ್ ಅವರಿಗೆ 12 ವರ್ಷಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ಬಳಿಕ ತವರು ಮನೆಯವರು ಮನೆಗೆ ಬಂದು ವಿಚಾರಿಸದೇ ಇದ್ದ ಕಾರಣದಿಂದ ಬೇಸತ್ತ ಝೀನತ್ ಬಾನು, ತನ್ನ ಇಬ್ಬರು ಮಕ್ಕಳಾದ  6 ವರ್ಷದ ಸುನೈನಾ ದಿಲ್ದಾರ್ ಹಾಗೂ ಮೂರುವರೆ ವರ್ಷದ ಮಹಮದ್ ಆರಾನ್ ಗೆ ಹಾಲಿನಲ್ಲಿ ಇಲಿ ಔಷಧಿ ಬೆರೆಸಿ ಕುಡಿಸಿದ್ದಾಳೆ. ಇದಾದ ಬಳಿಕ ತಾನೂ ಕೂಡ ಇಲಿ ಔಷಧಿಯ ಹಾಲನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ' ಎಂದು ತಿಳಿಸಿದರು. 

'ಜನವರಿ .8 ರಂದು ಬೆಳಿಗ್ಗೆ ಮಗ ಮಹಮದ್ ಆರಾನ್ ಗೆ ವಾಂತಿ ಬೇಧಿ ಕಾಣಿಸಿಕೊಂಡಿದ್ದು, ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನಪ್ಪಿದೆ. ತಾಯಿ ಹಾಗೂ 6 ವರ್ಷದ ಹೆಣ್ಣು ಮಗುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ' ಎಂದು ಘಟನೆ ಬಗ್ಗೆ ಮಾಹಿತಿ ನೀಡಿದರು.

ಈ ಸಂಬಂಧ ನಗರದ ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದಯ, ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದರು.

Similar News