ಸುಭದ್ರಮ್ಮ ಮನ್ಸೂರರನ್ನು ಬಳ್ಳಾರಿ ಮಂದೀನೂ ಮರೆತರೆ?

ರಂಗ ಪ್ರಸಂಗ

Update: 2023-01-13 05:40 GMT

ಸುಭದ್ರಮ್ಮ ಏಳು ದಶಕಗಳವರೆಗೆ ನಾಟಕಗಳಿಗೆ ಬಣ್ಣ ಹಚ್ಚಿದ್ದು ದಾಖಲೆಯೇ. ಅವರು ‘ಗಾಯಕಿ ನಟಿ’ಯಾಗಿ ಅಂದರೆ ಹಾಡುವುದರ ಜೊತೆಗೆ ಅಭಿನಯಿಸುತ್ತ ಹೆಸರಾದವರು. ತಮ್ಮ ಉಸಿರು ಇರುವವರೆಗೂ ರಂಗ ಗೀತೆಗಳ ಕಾರ್ಯಕ್ರಮಗಳನ್ನು ನೀಡುತ್ತ ಸಂಚರಿಸುತ್ತಿದ್ದರು. 

‘‘ಏನಮ್ಮಾ? ಸುಭದ್ರಮ್ಮ ಮನ್ಸೂರು ಅವರನ್ನು ಕರಿ’’ ಎಂದರು ಬಂದವರು.

‘‘ಬಾ ಯಣ್ಣಾ ಬಾ. ಕುಂದ್ರು’’ ಎಂದರು ಮಹಿಳೆ.

‘‘ಆಯ್ತು. ಜಲ್ದಿ ಸುಭದ್ರಮ್ಮ ಮನ್ಸೂರು ಅವರನ್ನು ಕರಿ’’ ಎಂದು ಒತ್ತಾಯಿಸಿದರು.

‘‘ಯಣ್ಣಾ, ನಾನ ಸುಭದ್ರಮ್ಮ ಮನ್ಸೂರು’’ ಎಂದರು ಅವರು.

ಬಂದವರು ಗಾಬರಿಯಾಗಿ ಅವರ ಕಾಲಿಗೆ ನಮಸ್ಕಾರ ಮಾಡಿ

‘‘ಕ್ಷಮಿಸಮ್ಮ. ಗೊತ್ತಾಗಲಿಲ್ಲ’’ ಎಂದರು ವಿನಯಪೂರ್ವಕ.

‘‘ಪರವಾಗಿಲ್ಲ. ಹೇಳ್ರಿ ಏನು ಬಂದ್ರಿ?’’ ಎಂದು

ಸುಭದ್ರಮ್ಮ ಮನ್ಸೂರು ಕೇಳಿದಾಗ, ನಾಟಕದಲ್ಲಿ ಪಾತ್ರವೊಂದಕ್ಕೆ ಆಹ್ವಾನಿಸಲು ಬಂದಿರುವ ಕುರಿತು ಮಾತುಕತೆ ಆಡಿದರು.

ಸುಭದ್ರಮ್ಮ ಅವರನ್ನು ನಾಟಕಕ್ಕೆ ಆಹ್ವಾನಿಸಲು ಬಂದವರು ನೋಡಿದ್ದು ರಂಗದ ಮೇಲೆ. ಹೀಗಾಗಿ ತಮ್ಮ ಮನೆಯ ಹೊರಗೆ ಸೌದೆ ಒಟ್ಟುಗೂಡಿಸುತ್ತಿದ್ದ, ಹಳೆಯ ಸೀರೆ ಉಟ್ಟುಕೊಂಡಿದ್ದ ಸುಭದ್ರಮ್ಮ ಗುರುತು ಅವರಿಗೆ ಸಿಗಲಿಲ್ಲ. ನಿಜ, ಸುಭದ್ರಮ್ಮ ಅವರು ಇದ್ದುದು ಹಾಗೆಯೇ. ಆದರೆ ರಂಗದ ಮೇಲೆ ಬಂದರೆ ತಮ್ಮ ಜೇನು ಕಂಠದಿಂದ ಹಾಡುವ ಹಾಡಿನಿಂದ ಮತ್ತು ಅಭಿನಯದಿಂದ ಪ್ರೇಕ್ಷಕರನ್ನು ಮೋಡಿ ಮಾಡುತ್ತಿದ್ದರು.

ಇದೆಲ್ಲ ನೆನಪಾದುದು ಮೊನ್ನೆ ಬಳ್ಳಾರಿಯ ಓಲ್ಡ್ ಟ್ರಂಕ್ ರಸ್ತೆ ಅಥವಾ ರೇಡಿಯೊ ಪಾರ್ಕ್ ರಸ್ತೆಯಲ್ಲಿರುವ ಸುಭದ್ರಮ್ಮ ಮನ್ಸೂರು ಅವರ ಮನೆಯಲ್ಲಿ ಕುಳಿತಾಗ. ಅವರು ಮೈಸೂರಿಗೆ ಬಂದಾಗ ಭೇಟಿಯಾಗಿ, ಅವರ ಹಾಡು ಕೇಳಿದ್ದು ಇನ್ನೂ ಹಸಿರಾಗಿದೆ. ಆದರೆ ಅವರ ನಗುವಿನ ಮುಖವೀಗ ಫೋಟೊದಲ್ಲಿ ಮಾತ್ರ. 

ಮೈಸೂರಿಗೆ ತಮ್ಮ ಮೊಮ್ಮಗಳ ಎಂಎಸ್ಸಿ ಪ್ರವೇಶಕ್ಕಾಗಿ ಬಂದಾಗ ಅವರನ್ನು ಕರೆದುಕೊಂಡು ಮೈಸೂರಿನ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ರಂಗಗೀತೆಗಳ ಕಾರ್ಯಕ್ರಮ ನೀಡಿದ್ದರು. ಇನ್ನೊಂದು ದಿನ ಮೈಸೂರಿನ ರಾಮಕೃಷ್ಣನಗರದ ಉದ್ಯಾನದಲ್ಲಿ ವಾಯುವಿಹಾರಿಗಳ ಸಂಘದ ಸದಸ್ಯರ ಎದುರು ತಮ್ಮ ಅನುಭವಗಳ ಜೊತೆಗೆ ಹಾಡುಗಳನ್ನೂ ಹಾಡಿ ಅಂದಿನ ಮುಂಜಾನೆಯ ಸೊಬಗನ್ನು ಹೆಚ್ಚಿಸಿದ್ದರು. 

ಇದು ಅವರು ಸಾದಾ-ಸೀದಾ ಎನ್ನುವುದಕ್ಕೆ ಉದಾಹರಣೆ ಕೊಟ್ಟೆ. ನಂತರ ಅವರ ಮೊಮ್ಮಗಳ ಎಂಎಸ್ಸಿ ಪ್ರವೇಶಕ್ಕೆ ಓಡಾಡುವಾಗ ವಿಶ್ವವಿದ್ಯಾನಿಲಯದ ಸಿಬ್ಬಂದಿ ‘ನಿಮಗೆ ಇವರೇನು ಆಗಬೇಕು?’ ಕೇಳಿದಾಗ ‘ಸಂಬಂಧಿಕರು’ ಎಂದೆ. ‘ಹೇಗೆ?’ ಎಂದು ಮತ್ತೆ ಕೇಳಿದಾಗ ‘ರಂಗ ಬಂಧುಗಳು’ ಎಂದಾಗ ಅವರಿಗೆ ಅರ್ಥವಾಗದೆ ಮಾತು ಮುಂದುವರಿಸಿರಲಿಲ್ಲ. ಹೀಗೆ ನನ್ನಂತಹ ಲಕ್ಷಾಂತರ ರಂಗಬಂಧುವಾಗಿದ್ದ ಅವರು ನಿತ್ಯ ನಾಟಕಗಳ ಪಾತ್ರ ಮಾಡುತ್ತಲೇ ಇರಬೇಕು ಎಂದು ಸದಾ ಬಯಸುತ್ತಿದ್ದರು. ಸುಭದ್ರಮ್ಮ (27-7-39- 15-7-2020) ಏಳು ದಶಕಗಳವರೆಗೆ ನಾಟಕಗಳಿಗೆ ಬಣ್ಣ ಹಚ್ಚಿದ್ದು ದಾಖಲೆಯೇ. ಅವರು ‘ಗಾಯಕಿ ನಟಿ’ಯಾಗಿ ಅಂದರೆ ಹಾಡುವುದರ ಜೊತೆಗೆ ಅಭಿನಯಿಸುತ್ತ ಹೆಸರಾದವರು. 

ತಮ್ಮ ಉಸಿರು ಇರುವವರೆಗೂ ರಂಗ ಗೀತೆಗಳ ಕಾರ್ಯಕ್ರಮಗಳನ್ನು ನೀಡುತ್ತ ಸಂಚರಿಸುತ್ತಿದ್ದರು. ಬಳ್ಳಾರಿಯಲ್ಲಿ ಮೆಕ್ಯಾನಿಕ್ ಜೊತೆಗೆ ಹಾರ್ಮೋನಿಯಂ ವಾದಕರಾಗಿದ್ದ ಜ್ವ್ವಾಲಾಪತಿ ಹಾಗೂ ಭಾಗ್ಯಮ್ಮ ಅವರ ಮಗಳಾಗಿ ಹುಟ್ಟಿದ ಅವರು ಓದಿದ್ದು ತೆಲುಗು ಮಾಧ್ಯಮದಲ್ಲಿ 6ನೇ ತರಗತಿಯವರೆಗೆ ಮಾತ್ರ. 11ನೇ ವಯಸ್ಸಿಗೇ ಬಳ್ಳಾರಿಯಲ್ಲಿ ಮುಕ್ಕಾಮು ಮಾಡಿದ್ದ ಶ್ರೀ ಸುಮಂಗಲಿ ನಾಟ್ಯ ಸಂಘದಲ್ಲಿ ಮೊದಲ ಬಾರಿಗೆ ಬಣ್ಣ ಹಚ್ಚಿದರು. ಬಳಿಕ ಹಾಡು ಹಾಡುವುದನ್ನು ಕಲಿಯುತ್ತ, ಅಭಿನಯದಲ್ಲಿ ಪಳಗುತ್ತ ಸಾಗುವಾಗ ಸುಮಂಗಲಿ ನಾಟ್ಯ ಸಂಘದಲ್ಲಿ ಹಿರಿಯ ಕಲಾವಿದರಾಗಿದ್ದ ಲಿಂಗರಾಜ ಮನ್ಸೂರು ಅವರೊಂದಿಗೆ 1952ರಲ್ಲಿ ಮದುವೆಯಾದರು. 

ನಂತರ ಏಣಗಿ ಬಾಳಪ್ಪಅವರ ಕಲಾವೈಭವ ನಾಟ್ಯ ಸಂಘ, ಮಾಸ್ಟರ್ ಹಿರಣ್ಣಯ್ಯ ಅವರ ಮಿತ್ರ ಮಂಡಳಿ, ಹನುಮಂತಪ್ಪ ಬೆನಕಟ್ಟಿ ಅವರ ಕಂಪೆನಿಗಳಲ್ಲೂ ಬಣ್ಣ ಹಚ್ಚಿದರು. ನಾಟಕ ಕಂಪೆನಿಗಳ ಬದುಕು ಸಾಕೆನಿಸಿ ಬಳ್ಳಾರಿಗೆ ವಾಪಸಾದರು. ಆಗ ಲಿಂಗರಾಜ ಮನ್ಸೂರು ಅವರಿಗೆ 52 ವಯಸ್ಸು. ಸುಭದ್ರಮ್ಮ ಅವರಿಗೆ 27. ಲಿಂಗರಾಜ ಅವರು ನಿವೃತ್ತಿಯ ಜೀವನಕ್ಕೆ ವಾಲಿದರೆ, ಸುಭದ್ರಮ್ಮ ಅವರದು ನಿರಂತರ ನಾಟಕಗಳಲ್ಲಿ ಅಭಿನಯದ ರಂಗಯಾತ್ರೆ.

ಮುಖ್ಯವಾಗಿ ಪೌರಾಣಿಕ ನಾಟಕಗಳಿಗೆ ಸುಭದ್ರಮ್ಮ ಬಣ್ಣ ಹಚ್ಚುತ್ತಾರೆಂದರೆ ವಿಶೇಷ ಕಳೆ. ರಕ್ತರಾತ್ರಿ ನಾಟಕದ ದ್ರೌಪದಿ, ಕುಂತಿ, ಉತ್ತರೆ, ಮಂಡೋದರಿ, ಸೀತೆ, ನಂಬೆಕ್ಕ, ಅಕ್ಕಮಹಾದೇವಿ ಸೇರಿದಂತೆ ಅವರು ಅಭಿನಯಿಸುವ ಪಾತ್ರಗಳಿಗೆ ಜೋರಾದ ಚಪ್ಪಾಳೆ ಸಿಗುತ್ತಿದ್ದವು. ಹೇಮರಡ್ಡಿ ಮಲ್ಲಮ್ಮ ನಾಟಕದಲ್ಲಿ ಮಲ್ಲಮ್ಮಳಾಗಿ

ಮೋಕ್ಷ ಸದನಾ... ಮೋಹ ಹರಣಾ...

ಗೈವೆ ಧ್ಯಾನಾ... ಶೈಲಾ ನಿಧಾನಾ

ಹಾಡು ಹಾಡುವಾಗ ಈಗಲೂ ಕೇಳಬೇಕೆನಿಸುತ್ತದೆ. ಇದು ನಲವಡಿ ಶ್ರೀಕಂಠ ಶಾಸ್ತ್ರಿಗಳ ರಚನೆಯ ಹಾಡಿಗೆ ಮಲ್ಲಿಕಾರ್ಜುನ ಮನ್ಸೂರು ಅವರು ರಾಗ ಸಂಯೋಜಿಸಿದ್ದರು. ಪೌರಾಣಿಕ ನಾಟಕಗಳಲ್ಲದೆ ಸಾಮಾಜಿಕ ನಾಟಕಗಳಿಗೂ ಬಣ್ಣ ಹಚ್ಚುತ್ತಿದ್ದ ಅವರು ಸಿರಿಗೇರಿ ನಾಗನಗೌಡ ಅವರು ರಚಿಸಿ, ರಾಗ ಸಂಯೋಜಿಸಿದ

ಪ್ರಿಯಾ... ಪ್ರಿಯಾ...

ರಸಿಕರಾಜಾ ಬಾ... ಬಾ...

ಅನುದಿನವೂ ನಿನಗೆ ಸ್ವಾಗತವು ಬಳಿಗೆ

ಹೊಸ ಹರುಷವಿದೇ ನನ್ನಲಿ

ಎಂದು ಸುಭದ್ರಮ್ಮ ಅವರು ರಂಗಗೀತೆಗಳ ಕಾರ್ಯಕ್ರಮಗಳಲ್ಲಿ ಹಾಡಿದ್ದು ಈಗಲೂ ಗುಂಯ್‌ಗುಟ್ಟುತ್ತಿದೆ. ಹೀಗೆ ರಾಜ್ಯದಾದ್ಯಂತ ಗ್ರಾಮ, ಪಟ್ಟಣ, ನಗರಗಳಲ್ಲಿ ನಾಟಕಗಳಿಗೆ ಕನ್ನಡ ಅಲ್ಲದೆ ತೆಲುಗು ನಾಟಕಗಳಿಗೂ ಬಣ್ಣ ಹಚ್ಚುತ್ತ, ರಂಗಗೀತೆಗಳ ಕಾರ್ಯಕ್ರಮಗಳನ್ನು ನೀಡುತ್ತ, ರಂಗಗೀತೆಗಳ ಪ್ರಾತ್ಯಕ್ಷಿಕೆ ನೀಡುತ್ತ ಸಂಚರಿಸಿದರು. 

ತಾವು ಹಾಡುತ್ತಿದ್ದ ಹಾಡುಗಳಿಗೆ ಶಾಸ್ತ್ರೀಯ ಸಂಗೀತದ ಸ್ಪರ್ಶ ನೀಡಿದ ಅವು ಪರಿಣಾಮಕಾರಿಯಾಗಿರುತ್ತಿದ್ದವು. ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ, ಗುಬ್ಬಿ ವೀರಣ್ಣ ಮೊದಲಾದ ಪ್ರಶಸ್ತಿಗಳಿಂದ ಪುರಸ್ಕೃತರಾದ ಅವರು ಗಾನಕೋಗಿಲೆ, ಅಭಿನೇತ್ರಿ, ರಂಗಸಿರಿ... ಹೀಗೆ ಅನೇಕ ಬಿರುದುಗಳನ್ನು ಪ್ರೇಕ್ಷಕರು ನೀಡಿದ್ದರು. ಸುಭದ್ರಮ್ಮ ಅವರ ಮಗಳಾದ ಶ್ರೀಲತಾ ಅವರ ಮಗಳು ಕಲ್ಯಾಣಿ ಬಳ್ಳಾರಿಯ ಸರಕಾರಿ ಶಾಲೆಯಲ್ಲಿ ಸಂಗೀತ ಶಿಕ್ಷಕಿಯಾಗಿದ್ದು, ರಂಗಗೀತೆಗಳನ್ನೂ ಹಾಡುತ್ತಾರೆ.

ಇಂತಹ ಸಂಗತಿಗಳನ್ನು ಮೆಲುಕು ಹಾಕುತ್ತ ಅವರ ಪುತ್ರ ಮಂಜುನಾಥ ಅವರೊಂದಿಗೆ ಬಳ್ಳಾರಿ ಅವರ ಮನೆಯಲ್ಲಿ ಕುಳಿತಾಗ ‘‘ಬಳ್ಳಾರಿ ಮಂದೀನೂ ಅಮ್ಮನನ್ನು ಮರೆತಾರ’’ ಎಂದು ಬೇಸರದಿಂದ ಹೇಳಿದರು. ಮರೆಯಬಾರದ, ಮರೆಯಲಾಗದ ಸುಭದ್ರಮ್ಮ ಮನ್ಸೂರು ಅವರ ಹೆಸರು ಉಳಿಸಲು ಬಳ್ಳಾರಿ ಮಂದಿ ಮನಸ್ಸು ಮಾಡಬೇಕಿದೆ.